ರಾಜರಾಜೇಶ್ವರಿ ನಗರ : ಮುನಿರತ್ನಗೆ ಸವಾಲು ಹಾಕುವವರು ಯಾರು?
ಬೆಂಗಳೂರು, ಫೆಬ್ರವರಿ 14 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರ ರಾಜರಾಜೇಶ್ವರಿ ನಗರ. ನಿರ್ಮಾಪಕ, ಕಾಂಗ್ರೆಸ್ ನಾಯಕ ಮುನಿರತ್ನ ಹಾಲಿ ಶಾಸಕರು. ಬಿಜೆಪಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿಯನ್ನು ರಾಜರಾಜೇಶ್ವರಿ ನಗರದಲ್ಲಿ ನಿರೀಕ್ಷಿಸಲಾಗಿದೆ. ಮೊದಲು ಉತ್ತರಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರ 2008ರಲ್ಲಿ ಪ್ರತ್ಯೇಕ ಕ್ಷೇತ್ರವಾಯಿತು.
ಆರ್.ಆರ್.ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಆರ್.ಅಶೋಕ?
2008ರಲ್ಲಿ ಬಿಜೆಪಿಯ ಎಂ.ಶ್ರೀನಿವಾಸ್ ಜಯಗಳಿಸಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ನ ಮುನಿರತ್ನ ಅವರು ಜಯಗಳಿಸಿದ್ದಾರೆ. 2018ರ ಚುನಾವಣೆಗೂ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತವಾಗಿದೆ.
ಕ್ಷೇತ್ರದ ಬಿಜೆಪಿ ಟಿಕೆಟ್ಗೆ ಹಲವು ಆಕಾಂಕ್ಷಿಗಳಿದ್ದಾರೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಅವರ ಹೆಸರು ಕೇಳಿಬರುತ್ತಿದೆ. ಯಾರಿಗೆ ಪಕ್ಷ ಟಿಕೆಟ್ ನೀಡಲಿದೆ? ಎಂಬುದರ ಮೇಲೆ ಸ್ಪರ್ಧೆ ನಿರ್ಧಾರವಾಗಲಿದೆ.
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ ಅವರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಅವರು ಪದ್ಮನಾಭನಗರದಿಂದ ಕ್ಷೇತ್ರ ಬದಲಾವಣೆ ಮಾಡಿ ರಾಜರಾಜೇಶ್ವರಿ ನಗರಕ್ಕೆ ಬರುವರೇ? ಕಾದು ನೋಡಬೇಕು...
18 ಸಾವಿರ ಮತಗಳ ಅಂತರದಿಂದ ಗೆಲುವು
2013ರ ಚುನಾವಣೆಯಲ್ಲಿ ಕಾಂಗ್ರೆಸ್ನ ಮುನಿರತ್ನ ಅವರು ಜೆಡಿಎಸ್ನ ಕೆ.ಎಲ್.ಆರ್.ತಿಮ್ಮನಂಜಯ್ಯ ವಿರುದ್ಧ 18 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿಯೂ ಮುನಿರತ್ನ ಸ್ಪರ್ಧಿಸುವುದು ಖಚಿತವಾಗಿದೆ.
ಜೆಡಿಎಸ್ ಅಭ್ಯರ್ಥಿ ಬದಲು
ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಬದಲಾಗಲಿದ್ದಾರೆ. ಬಿಬಿಎಂಪಿಯ ಮಾಜಿ ಸದಸ್ಯ ಆರ್.ಪ್ರಕಾಶ್ ಅವರು ಟಕೆಟ್ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಒಕ್ಕಲಿಗರು ಹೆಚ್ಚಿರುವ ಕ್ಷೇತ್ರ
ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ, ದೇವೇಗೌಡರು, ಕುಮಾರಸ್ವಾಮಿ ಅವರು ಪ್ರಚಾರ ಮಾಡಿದರೆ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿ ಜೆಡಿಎಸ್ ಅಭ್ಯರ್ಥಿ ಆರ್.ಪ್ರಕಾಶ್ ಇದ್ದಾರೆ.
ಆರ್.ಅಶೋಕ್ ಸ್ಪರ್ಧೆ
ಅಚ್ಚರಿಯ ವಿಷಯ ಎಂಬಂತೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಸುದ್ದಿ ಹಬ್ಬಿದೆ. ಅಶೋಕ್ ಅವರು ಪದ್ಮನಾಭನಗರದಿಂದ ಗೆಲ್ಲುತ್ತಿದ್ದಾರೆ. ಹೈಕಮಾಂಡ್ ನಾಯಕರು ಕ್ಷೇತ್ರ ಬದಲಾವಣೆಗೆ ಸೂಚಿಸಿದ್ದಾರೆ ಎಂಬುದು ಸದ್ಯದ ಮಾಹಿತಿ.
ಹಲವು ಆಕಾಂಕ್ಷಿಗಳು
ಆರ್.ಅಶೋಕ್ ಅವರ ಕಟ್ಟಾ ಬೆಂಬಲಿಗರಾದ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರಪ್ಪ ಅವರು ಆಕಾಂಕ್ಷಿ. ಕಳೆದ ಬಾರಿಯೂ ಅವರು ಟಿಕೆಟ್ ಕೇಳಿದ್ದರು. ತುಳಸಿ ಮುನಿರಾಜು ಗೌಡ ಅವರ ಹೆಸರು ಕೇಳಿಬರುತ್ತಿದೆ. ಶಿಲ್ಪಾ ಗಣೇಶ್ ಅವರು ಅಭ್ಯರ್ಥಿಯಾಗಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ.
ಬಿಬಿಎಂಪಿ ಸದಸ್ಯರ ಮುನಿಸು
ಈ ಬಾರಿಯ ಚುನಾವಣೆಯಲ್ಲಿ ಮುನಿರತ್ನ ಅವರ ಗೆಲುವಿನ ಹಾದಿ ಅಷ್ಟು ಸುಲಭವಾಗಿಲ್ಲ. ಬಿಬಿಎಂಪಿಯ ಕಾಂಗ್ರೆಸ್ ಸದಸ್ಯರು ಶಾಸಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಆದ್ದರಿಂದ, ಗೆಲುವಿಗಾಗಿ ಕಷ್ಟ ಪಡೆಬೇಕಿದೆ.
ಕಳೆದ ಚುನಾವಣೆ ಫಲಿತಾಂಶ
2013ರ ಚುನಾವಣೆಯಲ್ಲಿ ಮುನಿರತ್ನ ಅವರು 71,064 ಮತಗಳನ್ನು ಪಡೆದಿದ್ದರು. ಜೆಡಿಎಸ್ನ ತಿಮ್ಮನಂಜಯ್ಯ 52,251 ಮತ, ಬಿಜೆಪಿಯ ಎಂ.ಶ್ರೀನಿವಾಸ್ 50,726 ಮತ ಪಡೆದಿದ್ದರು.