ಕೊನೆಗೂ ಜೆಡಿಎಸ್ ಗೆ ಗುಡ್ ಬೈ ಹೇಳಿದ ಬಂಡಾಯ ಶಾಸಕರು
ಬೆಂಗಳೂರು, ಮಾರ್ಚ್ 24: ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗುತ್ತಿರುವ ಜಾತ್ಯಾತೀತ ಜನತಾದಳದ ಬಂಡಾಯ ಶಾಸಕರು ತಮ್ಮ ರಾಜೀನಾಮೆ ಪರ್ವವನ್ನು ಮುಂದುವರೆಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ರಾಜ್ಯಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜೀನಾಮೆ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದ್ದ ಶಾಸಕರು ಇದೀಗ ಸಾಲಾಗಿ ರಾಜೀನಾಮೆ ನೀಡಲು ಆರಂಭಿಸಿದ್ದಾರೆ.
ರಾಜ್ಯಸಭಾ ಮತದಾನದ ಬಳಿಕ ರಾಜಿನಾಮೆ ನೀಡಲಿದ್ದಾರೆ ರೆಬಲ್ ಶಾಸಕರು
ರಾಜ್ಯಸಭೆ ಮತದಾನ ಮುಗಿಯುತ್ತಿದ್ದಂತೆ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಶುಕ್ರವಾರ ಸಂಜೆಯೇ ಸ್ಪೀಕರ್ ಕೆ.ಬಿ. ಕೋಳಿವಾಡ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಶನಿವಾರ ಮತ್ತೆ ನಾಲ್ವರು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದಾರೆ.
ಜೆಡಿಎಸ್ ಬಂಡಾಯ ಶಾಸಕರಾದ ನಾಗಮಂಗಲದ ಎನ್. ಚಲುವರಾಯಸ್ವಾಮಿ, ಹಗರಿಬೊಮ್ಮನಹಳ್ಳಿಯ ಭೀಮಾನಾಯಕ್, ಚಾಮರಾಜಪೇಟೆಯ ಜಮೀರ್ ಅಹ್ಮದ್ ಖಾನ್, ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಇಂದು ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಕೆ.ಬಿ ಕೋಳಿವಾಡ್ ನಿವಾಸಕ್ಕೆ ತೆರಳಿ ಅವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಕೂಡ ಇಂದೇ ರಾಜೀನಾಮೆ ನೀಡಲಿದ್ದಾರೆ.
ನಾಳೆ ಅಂದರೆ ಮಾರ್ಚ್ 25ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಇವರೆಲ್ಲಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.