ಕರ್ನಾಟಕದಲ್ಲಿ 'ಡೇಂಜರ್ ಜೋನ್'ನಲ್ಲಿರುವ 5 ಜಿಲ್ಲೆಗಳ ಕೊವಿಡ್ ಅಂಕಿ ಅಂಶ
ಬೆಂಗಳೂರು, ಜೂನ್ 22: ಕರ್ನಾಟಕದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ನಿನ್ನೆ ಒಂದೇ ದಿನ 453 ಕೇಸ್ಗಳು ರಾಜ್ಯದಲ್ಲಿ ವರದಿಯಾಗಿದ್ದು, ಒಟ್ಟು ಸೋಂಕಿನ ಸಂಖ್ಯೆ 9150ಕ್ಕೆ ಜಿಗಿದಿದೆ. 137 ಮಂದಿ ಕೊವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
Recommended Video
ಉಳಿದ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು. ಈಗ, ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಕಳೆದ ಐದು ದಿನದಿಂದ ಬೆಂಗಳೂರಿನಲ್ಲಿ ವರದಿಯಾದ ಸೋಂಕಿತರ ಸಂಖ್ಯೆ ಆತಂಕ ಹುಟ್ಟಿಸಿದೆ. ದೇಶದ ಪ್ರಮುಖ ಮೆಟ್ರೋ ನಗರಗಳಿಗೆ ಹೋಲಿಸಿಕೊಂಡರೆ ಸಿಲಿಕಾನ್ ಸಿಟಿ ಬಹಳ ಉತ್ತಮ ಸ್ಥಿತಿಯಲ್ಲಿತ್ತು. ಈಗಿನ ಪರಿಸ್ಥಿತಿ ಗಮನಿಸಿದರೆ ಬೆಂಗಳೂರು ಅಪಾಯದತ್ತ ಸಾಗುತ್ತಿದೆ ಎಂದೆನಿಸುತ್ತಿದೆ.
ಕೊರೊನಾವೈರಸ್ ಭೀತಿ: ಸ್ವಯಂ ಲಾಕ್ ಡೌನ್ ಗೆ ಒಪ್ಪಿದ ಕನಕಪುರ ಜನತೆ
ಅಂದ್ಹಾಗೆ, ಕರ್ನಾಟಕದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಹೊಂದಿರುವ ಜಿಲ್ಲೆಗಳು ಯಾವುದು, ಅದರಲ್ಲಿ ಹೆಚ್ಚು ಸಕ್ರಿಯ ಕೇಸ್ ಹೊಂದಿರುವ ಜಿಲ್ಲೆಗಳು ಯಾವುದು ಎಂಬ ವಿಶೇಷವಾದ ವರದಿ ಇಲ್ಲಿದೆ. ಮುಂದೆ ಓದಿ....
ಅಪಾಯದಲ್ಲಿ ಬೆಂಗಳೂರು
ಪ್ರಸ್ತುತ ಕರ್ನಾಟಕದ ಪಾಲಿಗೆ ಬೆಂಗಳೂರು ಅಪಾಯದಲ್ಲಿದೆ ಎನ್ನುವುದು ಅಂಕಿ ಅಂಶಗಳು ಹೇಳುತ್ತಿದೆ. ಕರ್ನಾಟಕದ ಪೈಕಿ ಸಿಲಿಕಾನ್ ಸಿಟಿಯಲ್ಲಿ ಅತಿ ಹೆಚ್ಚು ಕೇಸ್ ವರದಿಯಾಗಿದೆ. ಜೂನ್ 21ರ ವರದಿಯಂತೆ ಬೆಂಗಳೂರಿನಲ್ಲಿ ಒಟ್ಟು 1272 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ 411 ಮಂದಿ ಗುಣಮುಖರಾಗಿದ್ದು, ಇನ್ನು 796 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈವರೆಗೂ 64 ಜನರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.
ಕೊರೊನಾ ಹಾಟ್ಸ್ಪಾಟ್ ಕಲಬುರಗಿ
ಬೆಂಗಳೂರು ನಂತರ ಅತಿ ಹೆಚ್ಚು ಕೊವಿಡ್ ಪ್ರಕರಣ ಹೊಂದಿರುವ ಜಿಲ್ಲೆ ಕಲಬುರಗಿ. ಈ ಜಿಲ್ಲೆಯಲ್ಲಿ ಒಟ್ಟು 1199 ಜನರಿಗೆ ಕೊರೊನಾ ಮಹಾಮಾರಿ ಅಂಟಿಕೊಂಡಿದೆ. ಅದರಲ್ಲಿ 697 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇನ್ನೂ 491 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 11 ಜನರು ಕಲಬುರಗಿಯಲ್ಲಿ ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳೆಷ್ಟು, ಬಲಿಯಾದವರೆಷ್ಟು?
ಯಾದಗಿರಿಯಲ್ಲಿ ಹೆಚ್ಚು ಸಕ್ರಿಯ ಕೇಸ್
ಬೆಂಗಳೂರು, ಕಲಬುರಗಿ ನಂತರ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಸಕ್ರಿಯವಾಗಿರುವುದು ಯಾದಗಿರಿ ಜಿಲ್ಲೆಯಲ್ಲಿ. ಇಲ್ಲಿ ಒಟ್ಟು 880 ಜನರಿಗೆ ಕೊರೊನಾ ವಕ್ಕರಿಸಿದೆ. ಅದರಲ್ಲಿ 513 ಜನರು ಗುಣಮುಖರಾಗಿದ್ದಾರೆ. ಇನ್ನೂ 366 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಕೇವಲ ಒಂದು ಸಾವು ಮಾತ್ರ ಈ ಜಿಲ್ಲೆಯಲ್ಲಿ ವರದಿಯಾಗಿದೆ.
ಬಳ್ಳಾರಿಯಲ್ಲಿ ಸೋಂಕು ಹೆಚ್ಚಿದೆ
ಉಳಿದ ಪ್ರಮುಖ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಬಳ್ಳಾರಿಯಲ್ಲಿ ಒಟ್ಟು ಕೇಸ್ ಸಂಖ್ಯೆ ಕಡಿಮೆ ಇದೆ. ಆದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಬಳ್ಳಾರಿಯಲ್ಲಿ ಒಟ್ಟು 442 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ 110 ಜನರು ಚೇತರಿಸಿಕೊಂಡಿದ್ದರೆ, 330 ಜನರು ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ಇಬ್ಬರು ಮೃತಪಟ್ಟಿದ್ದಾರೆ.
ಸೋಂಕು ಹೆಚ್ಚಿರುವ ಇತರೆ ಜಿಲ್ಲೆಗಳು
ಅತಿ ಹೆಚ್ಚು ಸೋಂಕು ವರದಿಯಾಗಿರುವ ಇತರೆ ಜಿಲ್ಲೆಗಳ ಕಡೆ ಗಮನ ಹರಿಸುವುದಾದರೆ, ಬೀದರ್ನಲ್ಲಿ 497 ಕೇಸ್ (ಸಕ್ರಿಯ ಕೇಸ್ 158) ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ 425 ಕೇಸ್ (ಸಕ್ರಿಯ ಕೇಸ್ 190) ವರದಿಯಾಗಿದೆ. ರಾಯಚೂರಿನಲ್ಲಿ 431 ಜನರಿಗೆ ಸೋಂಕು (ಸಕ್ರಿಯ ಕೇಸ್ 158) ತಗುಲಿದೆ. ಮಂಡ್ಯದಲ್ಲಿ 369 ಕೇಸ್ (ಸಕ್ರಿಯ ಕೇಸ್ 48) ವರದಿಯಾಗಿದೆ.