ಮಂಡ್ಯ ಪಾಲಿಟಿಕ್ಸ್: ಅಂಬಿ ಮೂಲೆ ತಳ್ಳಲು ಎಸ್ ಎಂ ಕೃಷ್ಣ 'ರಮ್ಯಾ'ಸ್ತ್ರ?
ಲೋಕಸಭಾ ಚುನಾವಣೆಯ ನಂತರ ತಣ್ಣಗಿದ್ದ ಮಂಡ್ಯ ರಾಜಕೀಯದಲ್ಲಿ ಹೊಸ ಸಂಚಲನ ಆರಂಭವಾಗಿದೆ. ಕಳೆದ ಚುನಾವಣೆಯಲ್ಲಿ ಅಲ್ಪ ಅಂತರದ ಸೋಲು ಅನುಭವಿಸಿದ ನಂತರ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ರಾಜಕೀಯದಿಂದ ಅನಧಿಕೃತವಾಗಿ ದೂರಸರಿದಿದ್ದರು.
ರಮ್ಯಾ ಎಲ್ಲಿದ್ದಾರೆ, ಹೇಗಿದ್ದಾರೆ ಎನ್ನುವುದರ ಕೊಂಚ ಸುಳಿವೂ ಮಾಧ್ಯಮದವರಿಗೆ ಸಿಗದಂತೆ ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ರಮ್ಯಾ ಸಫಲರಾಗಿದ್ದರು ಕೂಡಾ.
ಬೆಂಗಳೂರಿನ ಮಾಲ್ ಒಂದರಲ್ಲಿ ಅಭಿಮಾನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಸುದ್ದಿ ಮಾಧ್ಯಮದಲ್ಲಿ ಸದ್ದಾದ ನಂತರ, ರಮ್ಯಾ ಮೊನ್ನೆ ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬಂದಿದ್ದಾರೆ. (ಮಂಡ್ಯದಲ್ಲಿ ರಮ್ಯಾ)
ಮೃತ ಕುಟುಂಬಕ್ಕೆ ತನ್ನ ವೈಯಕ್ತಿಕ ಅಕೌಂಟಿನಿಂದ ಹಣ ನೀಡಿ ಬಂದಿರುವ ರಮ್ಯಾ ಅವರ ಈ ನಡೆ, ಸಕ್ರಿಯವಾಗಿ ರಾಜ್ಯ ರಾಜಕಾರಣಕ್ಕೆ ಮತ್ತೆ ಧುಮುಕುವ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷರಿಗಾಗಲಿ ಅಥವಾ ಒಂದು ಕಾಲದಲ್ಲಿ ತನ್ನ ಗುರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಗಮನಕ್ಕೂ ತರದೆ, ರಮ್ಯಾ ಮಂಡ್ಯಕ್ಕೆ ಭೇಟಿ ನೀಡಿ, ರೈತ ಕುಟುಂಬವನ್ನು ಭೇಟಿ ಮಾಡಿ ಬಂದಿದ್ದಾರೆ.
ರಮ್ಯಾ ಇಡುತ್ತಿರುವ ಎಲ್ಲಾ ರಾಜಕೀಯ ನಡೆಯ ಹಿಂದೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ರಾಜಕೀಯ ತಂತ್ರಗಾರಿಕೆ ಇದೆ ಎನ್ನುವುದು ಗೌಪ್ಯವಾಗಿ ಉಳಿದಿಲ್ಲ. (ರಮ್ಯಾ, ಕೃಷ್ಣ ಭೇಟಿ)
ರೈತ ಕುಟುಂಬವನ್ನು ಭೇಟಿಯಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಸ್ ಎಂ ಕೃಷ್ಣ ಅವರ ಜೊತೆ ರಮ್ಯಾ ಮಾತುಕತೆ ನಡೆಸಿದ್ದೂ ಆಗಿದೆ. ಮುಂದೆ ಓದಿ..

ಪುಣೆಯಲ್ಲಿ ರಾಹುಲ್ ಜೊತೆ
ಹೋದ ವಾರ ಪುಣೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಜೊತೆ ರಮ್ಯಾ ಕಾಣಿಸಿಕೊಂಡಿದ್ದರು. ರಮ್ಯಾ ಅಲ್ಪ ಅಂತರದ ಸೋಲು ಅನುಭವಿಸಿದ ನಂತರ ಮತ್ತು ಸೋಲಿಗೆ ಸ್ವಪಕ್ಷೀಯರ ಕಾರಣವೂ ಇದೆ ಎನ್ನುವ ಮಾಹಿತಿ ಹೈಕಮಾಂಡಿಗೆ ಹೋಗಿರುವ ಹಿನ್ನಲೆಯಲ್ಲಿ ರಮ್ಯಾ ಮೇಲೆ ರಾಹುಲ್ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎನ್ನುವ ಸುದ್ದಿಯೂ ಇದೆ.

ಅಂಬರೀಶ್ ದರ್ಬಾರ್
ಮಂಡ್ಯದಲ್ಲಿ ಸದ್ಯ ರೆಬೆಲ್ ಸ್ಟಾರ್ ಅಂಬರೀಶ್ ಅವರದ್ದೇ ದರ್ಬಾರ್. ತನ್ನ ರಾಜಕೀಯ ವಿರೋಧಿ ಅಂಬರೀಶ್ ಅವರನ್ನು ರಾಜಕೀಯವಾಗಿ ಮಟ್ಟಹಾಕಲು ಎಸ್ ಎಂ ಕೃಷ್ಣ, ರಮ್ಯಾ ಅವರನ್ನು ವಿಧಾನಪರಿಷತ್ತಿಗೆ ಕಳುಹಿಸುವ ತಂತ್ರಗಾರಿಕೆ ಹಣೆಯುತ್ತಿದ್ದಾರೆ ಎನ್ನುವ ಸುದ್ದಿ ಕಾಂಗ್ರೆಸ್ ಪಡಶಾಲೆಯಲ್ಲಿ ಹರಿದಾಡುತ್ತಿದೆ.

ಸಿನಿಮಾ ರಂಗದ ಪ್ರಭಾವಿಗಳು
ರಮ್ಯಾ ಅವರನ್ನು ರಾಜ್ಯ ರಾಜಕೀಯಕ್ಕೆ ತಂದು ಸಿನಿಮಾ ರಂಗದ ಇನ್ನೊಬ್ಬರನ್ನು ರಾಜಕೀಯದ ಮೈನ್ ಸ್ಟ್ರೀಂಗೆ ಕರೆತರುವ ಮೂಲಕ ಅಂಬರೀಶ್ ಗೆ ಸಡ್ಡು ಹೊಡೆಯವುದು ಕೃಷ್ಣ ಅವರ ಪ್ಲಾನ್ ಎನ್ನಲಾಗುತ್ತಿದೆ.

ಕೃಷ್ಣ ಮಾತಿಗೆ ಬೆಲೆಯಿದೆ
ಕೃಷ್ಣ ಅವರ ಮಾತಿಗೆ ಈಗಲೂ ಹೈಕಮಾಂಡಿನಲ್ಲಿ ಕಮಾಂಡ್ ಇರುವುದರಿಂದ ರಮ್ಯಾ ಅವರನ್ನು ಮತ್ತೆ ಶಾಸಕಿಯನ್ನಾಗಿ ಮಾಡುವುದು ಕೃಷ್ಣ ಅವರಿಗೆ ಕಷ್ಟದ ಕೆಲಸವೇನೂ ಅಲ್ಲ. ರೈತರ ಸರಣಿ ಆತ್ಮಹತ್ಯೆ ಮತ್ತು ಡಿ ಕೆ ರವಿ ಸಾವಿನ ವಿಚಾರದಲ್ಲೂ, ಹೈಕಮಾಂಡ್, ರಾಜ್ಯ ಸರಕಾರ ನೀಡಿರುವ ವರದಿಗಿಂತ ಹೆಚ್ಚಾಗಿ ಕೃಷ್ಣ ಅವರು ನೀಡಿದ ವರದಿಗೆ ಒತ್ತು ನೀಡಿತ್ತು.

ಮಂಡ್ಯದಲ್ಲಿ ಬಣ ಜಗಳ
ಮಂಡ್ಯದಲ್ಲಿ ಕಾಂಗ್ರೆಸ್ ಬಣಗಳ ನಡುವೆ ಆಗಾಗ ನಡೆಯುವ ಮೇಲಾಟ, ಹೊಡೆದಾಟ, ವೈಮನಸ್ಸಿನಿಂದ ಅಂಬರೀಶ್ ಹೆಸರಿಗೂ ಕಳಂಕ ಬಂದಿದೆ. ಜೊತೆಗೆ ಉಸ್ತುವಾರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಅಲ್ಲ ಎನ್ನುವ ಮಾತೂ ಕಾಂಗ್ರೆಸ್ ಹೈಕಮಾಂಡಿನಲ್ಲೂ ಸುದ್ದಿಯಾಗಿದೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆಯಲ್ಲಿನ ಸೋಲು
ಕಳೆದ ಚುನಾವಣೆಯಲ್ಲಿ ರಮ್ಯಾ ಸೋಲಲು ಅಂಬರೀಶ್ ನಡೆಸಿದ ರಾಜಕೀಯ ತಂತ್ರಗಾರಿಕೆಯೇ ಕಾರಣ ಎಂದು ನೇರವಾಗಿ ರಮ್ಯಾ ಹಿಂಬಾಲಕರು ದೆಹಲಿಗೆ ದೂರು ನೀಡಿದ್ದನ್ನೂ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಂಡಿದೆ. ಮಂಡ್ಯ ಚುನಾವಣೆ ಸೋಲಿನ ನಂತರ ಅಂಬರೀಶ್ ಮತ್ತು ರಮ್ಯಾ ಅವರ ನಡುವೆ ರಾಜಕೀಯ ಒಡನಾಟ ಅಷ್ಟಕಷ್ಟೇ..

ಸಿಎಂ ಕೂಡಾ ಅಂಬರೀಶ್ ಸಾಧನೆಯ ಬಗ್ಗೆ
ಅಂಬರೀಶ್ ಸಾಧನೆ ಶೂನ್ಯ ಎಂದು ಖುದ್ದು ಮುಖ್ಯಮಂತ್ರಿಗಳೇ ಅಸೆಂಬ್ಲಿಯಲ್ಲಿ ಹೇಳಿರುವುದು ಅಂಬರೀಶ್ ಅವರಿಗಾಗಿರುವ ಮತ್ತೊಂದು ಹಿನ್ನಡೆ. ವಸತಿ ಸಚಿವಾಲಯದಂತಹ ಪ್ರಭಾವಿ ಸಚಿವರಾಗಿದ್ದರೂ ಅಂಬರೀಶ್ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಸಿಎಂ, ಮುಂದಿನ ದಿನದಲ್ಲಿ ಅಂಬರೀಶ್ ಅವರನ್ನು ಖಾತೆ ರಹಿತ ಮಾಡಿದರೂ ಅಥವಾ ಯಾರಿಗೂ ಬೇಡವಾದ ಖಾತೆ ನೀಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.

ರಮ್ಯಾ ರಾಜ್ಯ ರಾಜಕೀಯ
ಈ ಎಲ್ಲಾ ಕಾರಣಗಳಿಂದ ರಮ್ಯಾ ವಿಧಾನಪರಿಷತ್ ಮೂಲಕ ರಾಜ್ಯ ರಾಜಕೀಯ ಪ್ರವೇಶಿಸುವುದು ಖಂಡಿತ ಎನ್ನಲಾಗುತ್ತಿದೆ. ಮಂಡ್ಯದಲ್ಲಿನ ಬಣ ಕಿತ್ತಾಟ, ಅಂಬರೀಶ್ ಫರ್ಫಾರ್ಮೆನ್ಸ್, ಇವೆಲ್ಲವನ್ನೂ ಮುಂದಿಟ್ಟುಕೊಂಡು ಕೃಷ್ಣ, ಅಂಬರೀಶ್ ಮಟ್ಟಹಾಕಲು ಸಜ್ಜಾಗಿದ್ದಾರೆ ಎನ್ನುವುದು ಸದ್ಯ ಕಾಂಗ್ರೆಸ್ ವಲಯದಲ್ಲಿನ ಬಹು ಚರ್ಚಿತ ವಿಚಾರ.












Click it and Unblock the Notifications