ಹಾಸನ: ಹಿಮಕುಸಿತದಲ್ಲಿ ಹುತಾತ್ಮನಾದ ಯೋಧನಿಗೆ ಕಂಬನಿ
ಜಮ್ಮು ಮತ್ತು ಕಾಶ್ಮೀರದ ಗೂರೆಜ್ ಪ್ರದೇಶದಲ್ಲಿ ಎರಡು ಸೇನಾ ಕ್ಯಾಂಪುಗಳ ಮೇಲೆ ಹಿಮ ಕುಸಿತ ಸಂಭವಿಸಿ 10 ಜನ ಸಾವನ್ನಪ್ಪಿದ್ದರು. ಇದರಲ್ಲಿ ಪ್ರಾಣ ತ್ಯಾಗ ಮಾಡಿದ ಸಂದೀಪ್ ಕುಮಾರ್ ಗೆ ಹಾಸನ ಜನತೆ ಕಂಬನಿ ಮಿಡಿದಿದ್ದಾರೆ.
ಹಾಸನ, ಜನವರಿ 26: ಜಮ್ಮು ಕಾಶ್ಮೀರದ ಗುರೇಜ್ನಲ್ಲಿ ಬುಧವಾರ ಸಂಭವಿಸಿದ ಹಿಮ ಕುಸಿತದಲ್ಲಿ ಹಾಸನ ಜಿಲ್ಲೆಯ ಯೋಧ ಸಂದೀಪ್ ಕುಮಾರ್ ಹುತಾತ್ಮರಾಗಿದ್ದಾರೆ. ಇವರು ಇಲ್ಲಿನ ಶಾಂತಿ ಗ್ರಾಮ ಹೋಬಳಿ ದೇವಿಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಫೆ.22 ರಂದು ಸಂದೀಪ್ ಕುಮಾರ್ ಮದುವೆ ನಡೆಯಬೇಕಾಗಿತ್ತು. ಸಂದೀಪ್ ಅವರಿಗೆ 2 ತಿಂಗಳ ಹಿಂದಷ್ಟೇ ಮದುವೆ ನಿಶ್ಚಯವಾಗಿತ್ತು. ಹಿಮ ಕುಸಿತ ದುರಂತ ಸಂಭವಿಸುವ ಕೆಲವು ದಿನಗಳ ಹಿಂದೆಯಷ್ಟೆ ಮನೆಯವರಿಗೆ ಕರೆ ಮಾಡಿ ತಾನಿದ್ದಲ್ಲಿ ದಟ್ಟ ಹಿಮ ಆವರಿಸಿರುವ ಬಗ್ಗೆ ತಿಳಿಸಿದ್ದರು. ಆದರೆ ಅದಾಗಿ ಕೆಲವೇ ಗಂಟೆಗಳಲ್ಲಿ ಸಂದೀಪ್ ಇಹಲೋಕ ತ್ಯಜಿಸಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ಸಂದೀಪ್ ಸೇನೆಗೆ ಸೇರಿದ್ದರು.[ಶತ್ರು ಪಾಳಯದಿಂದ ವಾಪಸ್ ಬಂದ ಸೈನಿಕರಿಗೆ ಸಿಗುವ ಸ್ವಾಗತ ಎಂಥದ್ದು?]
ಸಂದೀಪ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹುಟ್ಟೂರಿನಲ್ಲಿ ಹೆತ್ತವರು ಸೇರಿದಂತೆ ಬಂಧು ಬಳಗ, ಗ್ರಾಮಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ವೀರ ಮರಣವನ್ನಪ್ಪಿರುವ ಯೋಧನಿಗೆ ಜಿಲ್ಲಾ ಉಸ್ತವಾರಿ, ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವರಾದ ಎ. ಮಂಜು ಕಂಬನಿ ಮಿಡಿದಿದ್ದಾರೆ.
"ಇದೊಂದು ಅತ್ಯಂತ ದುಃಖದ ಸಂಗತಿ ದೇಶದ ಜನರ ಜೀವ ರಕ್ಷಣೆಗಾಗಿ ಭಾರತೀಯ ಸೇನೆಯಲ್ಲಿ ಹಗಲಿರುಳು ದುಡಿದು, ಪ್ರಕೃತಿ ವಿಕೋಪದಲ್ಲಿ ಹುತಾತ್ಮರಾದ ಸಂದೀಪ್ ಕುಮಾರ್ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ," ಎಂದು ಮಂಜು ಹೇಳಿದ್ದಾರೆ .[ಹಿಮ ಕುಸಿತ: ಇನ್ನೂ ನಾಲ್ವರು ಸೈನಿಕರ ಶವ ಪತ್ತೆ]
"ಜಿಲ್ಲೆಯ ಯೋಧ ಸಂದೀಪ್ ಕುಮಾರ್ ಅವರು ಜಮ್ಮು ಕಾಶ್ಮೀರದ ಗುರೇಜ್ನಲ್ಲಿ ಹಿಮಪಾತಕ್ಕೆ ಬಲಿಯಾಗಿರುವುದು ಅತ್ಯಂತ ಶೋಕದ ವಿಚಾರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಈ ದುಃಖವನ್ನು ಭರಿಸುವ ಶಕ್ತಿ ಅವರ ತಂದೆ ತಾಯಿ ಮತ್ತು ಕುಟುಂಬಕ್ಕೆ ಭಗವಂತ ನೀಡಲಿ," ಎಂದು ಶಾಸಕರಾದ ಹೆಚ್. ಎಸ್. ಪ್ರಕಾಶ್ ಸಂತಾಪ ವ್ಯಕ್ತಪಡಿಸಿದ್ದಾರೆ.