ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ವಿರೋಧವೇಕೆ?
ಬೆಂಗಳೂರು, ನವೆಂಬರ್ 8 : ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಕಳೆದ ಎರಡು ವರ್ಷಗಳಿಂದ ನವೆಂಬರ್ 10 ರಂದು ಆಚರಿಸಿಕೊಂಡು ಬರುತ್ತಿರುವ ಟಿಪ್ಪು ಜಯಂತಿ ವಿವಾದ ತಾರಕಕ್ಕೇರಿದೆ. ಬಿಜೆಪಿ ನಾಯಕರು ಈ ಬಾರಿ ಚುನಾವಣೆ ವಿಷಯವನ್ನಾಗಿ ಇದನ್ನು ಬಳಸಿಕೊಂಡು ಬರುತ್ತಿದ್ದಾರೆ.
2018ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದು ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ. ಚುನಾವಣಾ ವಿಷಯವನ್ನಾಗಿಯೂ ಇದನ್ನು ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದೆ.

ಟಿಪ್ಪು ಲಕ್ಷಾಂತರ ಹಿಂದೂ-ಕ್ರೈಸ್ತರ ಮಾರಣಹೋಮ, ಮತಾಂತರ ಮಾಡಿದ್ದಾನೆ. ದೇವಸ್ಥಾನ-ಚರ್ಚುಗಳನ್ನು ನಾಶ ಮಾಡಿದ್ದಾನೆ ಎನ್ನುವುದನ್ನು ಕಮ್ಯುನಿಸ್ಟ್ ಇತಿಹಾಸಕಾರರು ನಮ್ಮಿಂದ ಮುಚ್ಚಿಟ್ಟಿದ್ದರು. ಕಾಲ ಕ್ರಮೇಣ ಈ ವಿಷಯಗಳೆಲ್ಲ ಬಹಿರಂಗವಾದಾಗ ಅವನೊಬ್ಬ ರಾಜ, ತನ್ನ ರಾಜ್ಯದ ವಿರುದ್ಧ ದಂಗೆಯೆದ್ದವರನ್ನು ಎಲ್ಲಾ ರಾಜರಂತೆ ಕ್ರೂರವಾಗಿ ಶಿಕ್ಷೆ ನೀಡಿದ್ದಾನೆ, ಅಷ್ಟೇ ಹೊರತು ಆತ ಮತಾಂಧನೂ ಅಲ್ಲ, ಕ್ರೂರಿಯೂ ಅಲ್ಲ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ.
ಆದರೆ, ಟಿಪ್ಪು ತನ್ನ ರಾಜ್ಯದ, ತನ್ನ ವಿರುದ್ಧ ದಂಗೆ ಏಳದೇ ತಮ್ಮ ಪಾಡಿಗೆ ತಮ್ಮ ಬದುಕನ್ನು ಬದುಕುತ್ತಿದ್ದ ತನ್ನದೇ ರಾಜ್ಯದ ಸೈನಿಕ ಕುಟುಂಬಗಳ ಮೇಲೆ ನಡೆಸಿದ ಕ್ರೌರ್ಯದ ಕಥೆಯನ್ನು ಕೇಳಿ ಆತನನ್ನು ಏನೆಂದು ಉದ್ಘರಿಸಬೇಕು ಎನ್ನುವುದು ಬಿಜೆಪಿ ನಾಯಕರ ವಾದವಾಗಿದೆ.
ಬಿಜೆಪಿ ಟಿಪ್ಪು ಜಯಂತಿ ವಿರೋಧಿಸಲು ಪ್ರಮುಖ ಕಾರಣಗಳು
1)ಬ್ರಿಟಿಷರ ಗೂಢಾಚಾರಿಗಳೆಂದು ಕ್ರೈಸ್ತರನ್ನು, ಪ್ರತಿರೋಧ ತೋರಿದರೆಂದು ಕೊಡವರನ್ನು ಕೊಂದ, ಮತಾಂತರಿಸಿದ.
2) ಮೈಸೂರು ಸೇನೆಯಲ್ಲಿ ಸಾಮಾನ್ಯ ಸೈನಿಕನಾಗಿದ್ದ ಹೈದರಾಲಿ ಮೋಸದಿಂದ ಮೈಸೂರು ಅರಸರನ್ನು ಕೆಳಗಿಳಿಸಿ ತಾನೇ ಪಟ್ಟವೇರಿದ.
3)ಮೇಲುಕೋಟೆಯಲ್ಲಿ ೮೦೦ ಮಂಡ್ಯಮ್ ಅಯ್ಯಂಗಾರ್ ಕುಟುಂಬಗಳನ್ನು ನರಕ ಚತುರ್ದಶಿಯ ರಾತ್ರಿಯಂದು ಹತ್ಯೆ.
4) ತನ್ನ ಅಧಿಕಾರಾವಧಿಯಲ್ಲಿ ಕನ್ನಡ ಭಾಷೆಯನ್ನು ಬಿಟ್ಟು ಆಡಳಿತ ಭಾಷೆಯಾಗಿ ಉರ್ದು ಮತ್ತು ಪಾರ್ಸಿಯನ್ನು ಚಾಲನೆಗೆ ತಂದಿದ್ದು.
5) ಚಿತ್ರದುರ್ಗದಲ್ಲಿ ಮತ್ತು ಮದಕರಿನಾಯಕನ ಸೈನ್ಯದಲ್ಲಿದ್ದ ಮುಸಲ್ಮಾನರ ಬೆಂಬಲ ಪಡೆದು ಮೋಸದಿಂದ ವೀರ ಮದಕರಿನಾಯಕ, ವೀರ ಒನಿತೆ ಓಬವ್ವ ಅವರನ್ನು ಸಾಯಿಸಿದ್ದು.
ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕುಗಳಿಗಾಗಿ ಅಥವಾ ಸಮಾಜದ ಒಳಿತಿಗಾಗಿ ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗ ಪ್ರತಿಭಟಿಸುವುದು ನಾಗರಿಕನ ಹಕ್ಕು ಮತ್ತು ಕರ್ತವ್ಯ ಕೂಡ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿಯವರೊಡನೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರತಿಭಟನೆಗಳಿಂದಲೇ ಬ್ರಿಟಿಷ್ ಆಡಳಿತದ ಕಣ್ಣು ತೆರೆಸಿದ್ದರು. ಆದರೆ, ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಹಲವು ಬೆಳವಣಿಗೆಗಳನ್ನು ಗಮನಿಸಿದಾಗ ಇವೆಲ್ಲಕ್ಕೆ ಅಪಮಾನವೆನಿಸುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಒಬ್ಬ ಆದರ್ಶ ಪುರುಷ/ಹೋರಾಟಗಾರನ ಜಯತಿ ಅಂದರೆ ಜನತೆ ಸಡಗರ, ಸಂಭ್ರಮದಿಂದ ಆಚರಿಸಬೇಕೇ ಹೊರತು ಗಲಾಟೆಗಳಿಂದಲ್ಲ ಎಂಬುದು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಟಿಪ್ಪು ಮುಸಲ್ಮಾನ ಆದ್ದರಿಂದ ಬಲಪಂಥೀಯರು ವಿರೋಧಿಸುತ್ತಿದ್ದಾರೆ ಎನ್ನುವ ಸರ್ಕಾರ ವೀರಯೋಧ ಅಬ್ದುಲ್ ಹಮೀದ್, ಸಂತ ಶಿಶುನಾಳ ಶರೀಫ್ರು, ಭಾರತರತ್ನ ಡಾ. ಅಬ್ದುಲ್ ಕಲಾಂ, ಸ್ವಾತಂತ್ರ್ಯ ಹೋರಾಟಗಾರ ಅಷ್ಫಾಕ್ ಉಲ್ಲಾಖಾನ್ ಅವರ ಜನ್ಮ ದಿನಾಚರಣೆಯನ್ನು ಬಲಪಂಥೀಯರೇ ಆಚರಿಸುತ್ತಿರುವುದು ಕಾಣುತ್ತಿಲ್ಲವೇ? ಎಂದು ಬಿಜೆಪಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.












Click it and Unblock the Notifications