ಟಿಪ್ಪು ಹಿಡ್ಕೊಂಡ ಸಿದ್ದರಾಮಯ್ಯನವರಿಗೆ ಆದ ಗತಿ ಎಚ್ಡಿಕೆಗೂ ಆಗುತ್ತೆ: ಈಶ್ವರಪ್ಪ
ಹಾಸನ, ನ 7: ಇಷ್ಟೊಂದು ಪ್ರತಿರೋಧ ವ್ಯಕ್ತವಾಗುತ್ತಿದ್ದರೂ ಟಿಪ್ಪು ಜಯಂತಿ ಆಚರಿಸಲು ಸರಕಾರ ಯಾಕಿಷ್ಟು ಉತ್ಸುಕವಾಗಿದೆ ಎನ್ನುವುದೇ ಅರ್ಥವಾಗುವುದಿಲ್ಲ ಎಂದು ಬಿಜೆಪಿ ಶಾಸಕ ಮತ್ತು ಮಾಜಿ ಡಿಸಿಎಂ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ (ನ 7) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಈಶ್ವರಪ್ಪ, ಟಿಪ್ಪು ಸುಲ್ತಾನ್ ನನ್ನು ಹಿಡ್ಕೊಂಡ ಸಿದ್ದರಾಮಯ್ಯನವರ ಗತಿಯೇನಾಯಿತು, ಉದ್ಯಮಿ ವಿಜಯ್ ಮಲ್ಯ ಗತಿಯೇನಾಯಿತು ಎನ್ನುವುದನ್ನು ಅರಿತಿದ್ದರೂ ಕುಮಾರಸ್ವಾಮಿ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವುದು ವಿಷಾದನೀಯ ಎಂದು ಈಶ್ವರಪ್ಪ ಹೇಳಿದ್ದಾರೆ.
ಕರ್ನಾಟಕದ ಜನತೆಗೆ ಟಿಪ್ಪು ಜಯಂತಿ ಆಚರಿಸುವುದು ಇಷ್ಟವಿಲ್ಲ, ಹಾಗಿದ್ದಾಗ್ಯೂ ಜಯಂತಿ ಆಚರಿಸಲು ಮುಂದಾದರೆ, ಸಿದ್ದರಾಮಯ್ಯನವರಿಗೆ ಆದ ಗತಿ ಕುಮಾರಸ್ವಾಮಿಯವರಿಗೂ ಆಗುತ್ತೆ ಎಂದು ಹೇಳಬೇಕಾಗುತ್ತದೆ. ಮತ ರಾಜಕಾರಣಕ್ಕಾಗಿ ಜನರ ಭಾವನೆಯನ್ನು ಕೆಣಕಬೇಡಿ ಎಂದು ಈಶ್ವರಪ್ಪ ಸರಕಾರವನ್ನು ಎಚ್ಚರಿಸಿದ್ದಾರೆ.

ಟಿಪ್ಪು ಜಯಂತಿ ಆಚರಿಸುವ ವೇಳೆ ಎಷ್ಟೊಂದು ಶಾಂತಿ ಕದಡುವ ಘಟನೆ ಈ ಹಿಂದೆ ನಡೆದಿತ್ತು, ಆದರೂ ಇವರಿಗೆ ಅರ್ಥವಾಗುತ್ತಿಲ್ಲ. ದರ್ಪದಿಂದ ಜಯಂತಿ ಆಚರಿಸಿದ ಸಿದ್ದರಾಮಯ್ಯ ಹಾಳಾಗಿಹೋದ್ರು, ಇನ್ನು ಕುಮಾರಸ್ವಾಮಿಯ ಸರದಿ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಟಿಪ್ಪು ಮತ್ತು ಸಿದ್ದರಾಮಯ್ಯನವರಿಗೆ ಅದೇನು ಸಂಬಂಧವಿತ್ತೋ ಗೊತ್ತಿಲ್ಲ. ಕುಮಾರಸ್ವಾಮಿಯವರ ಸರಕಾರದಲ್ಲಾದರೂ ಟಿಪ್ಪು ಜಯಂತಿ ನಡೆಯುವುದಿಲ್ಲ ಎಂದು ಅಂದುಕೊಂಡಿದ್ದೆವು. ಈಗ ಅವರೂ ಜಯಂತಿ ಆಚರಿಸಲು ಮುಂದಾಗಿದ್ದಾರೆ ಎಂದು ಈಶ್ವರಪ್ಪ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನ. 10ರಂದು ಕೊಡಗು ಬಂದ್ಗೆ ಕರೆ ನೀಡಲಾಗಿದೆ. ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ, ಜಿಲ್ಲೆಯ ಮೂರು ತಾಲೂಕಿನಲ್ಲಿ ಬಂದ್ಗೆ ಕರೆನೀಡಿದೆ.












Click it and Unblock the Notifications