ಟಿಪ್ಪು ಸುಲ್ತಾನ್ ವಿರುದ್ಧ ಕ್ರೈಸ್ತ ಸಮುದಾಯದ ವಿರೋಧವೇಕೆ?
ಬೆಂಗಳೂರು, ನ.10: ರಾಜ್ಯ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅದರೆ, ಈ ಬಾರಿ ಕೊಡಗಿನ ಕ್ಯಾಥೋಲಿಕ್ ಸಮುದಾಯ ಕೂಡಾ ಭಾರಿ ವಿರೋಧ ವ್ಯಕ್ತಪಡಿಸುತ್ತಿದೆ.
ನವೆಂಬರ್ 10ರ ಕೊಡಗು ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಲು ಕೊಡಗಿನ ಎಲ್ಲಾ ಸಮುದಾಯಗಳು ಕೈಜೋಡಿಸುವುದೇ ಕಾರಣವಾಗಿದೆ. ಯುನೈಟೆಡ್ ಕ್ರೈಸ್ತ ಸಮಿತಿ ನವೆಂಬರ್ 06ರಿಂದಲೇ ಪ್ರತಿಭಟನೆ ಶುರು ಮಾಡಿವೆ. ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಯುಸಿಎ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಇಷ್ಟಕ್ಕೂ ಮಂಗಳೂರಿನ ಕ್ರೈಸ್ತ ಸಮುದಾಯ ಕೊಡವರಿಗೆ ಬೆಂಬಲ ಸೂಚಿಸಲು ಕಾರಣ ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
1784ರಲ್ಲಿ ಮಂಗಳೂರಿನಲ್ಲಿದ್ದ ಮಿಲಾಗ್ರೇಸ್ ಚರ್ಚ್ ವೊಂದನ್ನು ಟಿಪ್ಪು ಸುಲ್ತಾನ್ ಧ್ವಂಸಗೊಳಿಸಿದ್ದ. 1680ರಲ್ಲಿ ನಿರ್ಮಿಸಲಾಗಿದ್ದ ಮಂಗಳೂರಿನ ಹೆಮ್ಮೆಯ ಸಂಕೇತವಾಗಿದ್ದ ಚರ್ಚ್ ನಾಶವಾಗಿದ್ದು ಕ್ರೈಸ್ತ ಸಮುದಾಯದ ಭಾವನೆಗೆ ಧಕ್ಕೆ ತಂದಿತ್ತು. ಇದರ ಬೆನ್ನಲ್ಲೇ ಸುಮಾರು 50,000ಕ್ಕೂ ಅಧಿಕ ಕ್ಯಾಥೋಲಿಕ್ಸ್ ಗಳನ್ನು ಬ್ರಿಟಿಷರ ಗೂಢಾಚಾರರು ಎಂದು ಹೇಳಿ ಬಂಧನ ಮಾಡಲಾಗಿತ್ತು.

ಸುಮಾರು 4,000ಕ್ಕೂ ಅಧಿಕ ಕ್ಯಾಥೋಲಿಕ್ಸ್ ಗಳ ಮಾರಣ ಹೋಮ ನಡೆಸಿದ ಟಿಪ್ಪು ವಿರುದ್ಧ ಸಹಜವಾಗಿ ಕ್ರೈಸ್ತ ಸಮುದಾಯದಲ್ಲಿ ದ್ವೇಷ ಬೆಳೆದಿತ್ತು. ಬಂಧಿತ ಕ್ರೈಸ್ತರನ್ನು ಮಂಗಳೂರಿನಿಂದ ಮೈಸೂರಿನ ತನಕ ಕಾಲ್ನಡಿಗೆಯಲ್ಲಿ ಕರೆದೊಯ್ದ ಟಿಪ್ಪು ಒಬ್ಬ ಕ್ರೂರಿ ಎಂದು ಕ್ರೈಸ್ತರು ನಂಬಿದ್ದಾರೆ. [ಟಿಪ್ಪು ವಿರೋಧಿಸಿ ಕೊಡಗು ಬಂದ್, ಕಲ್ಲು ತೂರಾಟ]
ಟಿಪ್ಪುವಿನ ದೌರ್ಜನ್ಯಕ್ಕೆ ಬಲಿಯಾದ ಕ್ರೈಸ್ತರ ನೆನಪಲ್ಲಿ ಒಂದು ದಿನ ಶೋಕಾಚಾರಣೆ ಇಂದಿಗೂ ಜಾರಿಯಲ್ಲಿದೆ. ಹೀಗಾಗಿ ಮಂಗಳೂರಿನ ಕ್ರೈಸ್ತ ಸಮುದಾಯ ಕೂಡಾ ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸಿ ಕೊಡವರಿಗೆ ಬೆಂಬಲ ಸೂಚಿಸುತ್ತಿದೆ.
ಟಿಪ್ಪು ಒಬ್ಬ ದೇಶದ್ರೋಹಿ, ಮತಾಂಧ, ಬಲವಂತವಾಗಿ ಹಿಂದೂಗಳನ್ನು ಮತಾಂತರ ಮಾಡಿದ ಎಂಬ ಆರೋಪ ಹೊರೆಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಕೊಡವರನ್ನು ಕೊಂದ ಕಾರಣಕ್ಕೆ ಕೊಡಗಿನಲ್ಲಿ ವಿರೋಧ ವ್ಯಕ್ತವಾಗಿದೆ. ಟಿಪ್ಪು ಸುಲ್ತಾನ ಜಯಂತಿ ಅಚರಣೆಯನ್ನು ಬಹಿಷ್ಕರಿಸಲಾಗಿದೆ.












Click it and Unblock the Notifications