ಹುಲಿ: ಅರಣ್ಯ ಇಲಾಖೆಗೆ ವನ್ಯಜೀವಿ ಮಂಡಳಿ ಪತ್ರ
ಬೆಂಗೂಳೂರು, ಜ. 16 : ಚಿಕ್ಕಮಗಳೂರು ಅರಣ್ಯ ಪ್ರದೇಶದಿಂದ ಬೆಳಗಾವಿಗೆ ಸ್ಥಳಾಂತರಿಸಿದ್ದ ನರಭಕ್ಷಕ ಹುಲಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಕುರಿತು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಡಾ. ಸೂರ್ಯ ಎನ್. ಆರ್. ಅಡ್ಡೂರು, ಅರಣ್ಯ ಸಚಿವ ಬಿ. ರಮಾನಾಥ ರೈ ಅವರಿಗೆ ಪತ್ರ ಬರೆದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಾಧ್ಯಮಗಳಿಗೆ ಪತ್ರ ಬಿಡುಗಡೆ ಮಾಡಿರುವ ಅವರು, ಚಿಕ್ಕಮಗಳೂರು ಮತ್ತು ಬೆಳಗಾವಿಯ ಭೌಗೋಳಿಕ ಪರಿಸ್ಥಿತಿಗೆ ಅಜಗಜಾಂತರ ವ್ಯತ್ಯಾಸ ಇದೆ. ಯಾವುದೇ ಪ್ರಾಣಿಗೂ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದಲ್ಲದೆ ಮಾಂಸ ಭಕ್ಷಕ ಪ್ರಾಣಿಯಾಗಿರುವ ಹುಲಿಯು ಸಹಜವಾಗಿಯೇ ತನ್ನ ಭೌಗೋಳಿಕ ಆವಾಸ ಸ್ಥಾನವನ್ನು ಸಂರಕ್ಷಿಸಿಕೊಳ್ಳುತ್ತದೆ. ಇತರೆ ಮಾಂಸ ಭಕ್ಷಕ ಪ್ರಾಣಿಗಳ ಜೊತೆಗೆ ಪ್ರತಿಬಾರಿಯೂ ತನ್ನ ಆಹಾರಕ್ಕಾಗಿ ಪೈಪೋಟಿ ನಡೆಸಬೇಕಾಗುತ್ತದೆ.[ಚಿಕ್ಕಮಗಳೂರು ಹುಲಿಗೆ ಬೆಳಗಾವಿಯಲ್ಲೂ ಮಹಿಳೆ ಬಲಿ]
ಚಿಕ್ಕಮಗಳೂರಿನಲ್ಲಿ ಹಿಡಿಯಲಾದ ಹುಲಿಯನ್ನು ಅದರ ಮೂಲ ಆವಾಸ ಸ್ಥಾನದಿಂದ ಸ್ಥಳಾಂತರಿಸುವಾಗ ಹುಲಿಗೆ ಬೇಕಾದ ಸಹಜ ಆಹಾರಗಳು ಲಭ್ಯವಿದೆಯೇ ಅನ್ನುವ ಬಗ್ಗೆ ಹಾಗೂ ಅಲ್ಲಿ ಈಗಾಗಲೇ ಇರುವ ಇತರ ಮಾಂಸ ಭಕ್ಷಕ ಪ್ರಾಣಿಗಳ ಸಂಖ್ಯೆಯ ಬಗ್ಗೆ ಸಮೀಕ್ಷೆ ಮಾಡಲಾಗಿದೆಯೇ ಅನ್ನುವ ವಿಚಾರದ ಬಗ್ಗೆ ಇನ್ನೂ ಯಾವುದೇ ಈ ವೇಳೆ ಯಾವುದೇ ಸ್ಪಷ್ಟತೆಗಳಿರಲಿಲ್ಲ ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನಿಂದ ತರಲಾದ ಹುಲಿಯನ್ನು ಬೆಳಗಾವಿಯ ಕಾಡಿಗೆ ತಂದು ಬಿಟ್ಟ ಬಳಿಕ, ಅಲ್ಲಿಯ ಪರಿಸರದಲ್ಲಿ ಆಹಾರಕ್ಕಾಗಿ ಇತರ ಮಾಂಸಭಕ್ಷಕ ಪ್ರಾಣಿಗಳ ಜೊತೆ ಪೈಪೋಟಿ ನಡೆಸಬೇಕಾದ ಪ್ರಸಂಗ ಬಂದೊದಗಿತು. ಹಾಗಾಗಿ ಹುಲಿ ಮಾನವರನ್ನು ತಿನ್ನಲು ತೊಡಗಿರಬಹುದು ಎಂದು ಹೇಳಿದ್ದಾರೆ.[ಬೆಳಗಾವಿಯ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ]
ಮುಂದಿನ ಸಾರಿ ಇಂಥ ಕ್ರಮಗಳನ್ನು ತೆಗೆದುಕೊಳ್ಳುವ ಮುನ್ನ ಸೂಕ್ತ ಎಚ್ಚರಿಕೆ ವಹಿಸಬೇಕು. ಪ್ರಾಣಿಗಳಿಗೆ ಅಗತ್ಯ ಆಹಾರ ಲಭ್ಯವಿದೆಯೇ ಎಂಬ ಮಾಹಿತಿ ಆಧಾರದಲ್ಲಿ ಹುಲಿಯಂಥ ಪ್ರಾಣಿ ಸ್ಥಳಾಂತರ ಮಾಡಬೇಕು. ಇಲ್ಲವಾದಲ್ಲಿ ಅನಾಹುತಗಳಾಗುತ್ತವೆ ಎಂದು ಹೇಳಿದ್ದಾರೆ.