ಮೂವರು ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ಪಕ್ಕಾ
Recommended Video
ಬೆಂಗಳೂರು, ಜೂನ್ 07: ಸಚಿವ ಸಂಪುಟ ಪುನರ್ ರಚನೆ ಆಗುವುದು ಪಕ್ಕಾ ಆಗಿದ್ದು, ಸಂಪುಟಕ್ಕೆ ಈ ಬಾರಿ ಹೊಸದಾಗಿ ಸೇರ್ಪಡೆ ಆಗಲಿರುವ ಪಟ್ಟಿಯನ್ನೂ ಸಹ ತಯಾರಿಸಿಟ್ಟುಕೊಂಡಿದೆ.
ಅಧಿಕೃತ ಮಾಹಿತಿ ಪ್ರಕಾರ ರಾಮಲಿಂಗಾ ರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಕುಷ್ಟಗಿ ಶಾಸಕ ಅಮರೇಗೌಡ ಲಿಂಗನಗೌಡ ಪಾಟೀಲ್ ಬಯ್ಯಾಪುರ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ.
ವಿ.ಮುನಿಯಪ್ಪ ಹಾಗೂ ಅಮರೇಗೌಡ ಬಯ್ಯಾಪುರ ಅವರು ಮೊದಲ ಬಾರಿಗೆ ಸಚಿವ ಸಂಪುಟ ಸೇರುತ್ತಿದ್ದರೆ, ರಾಮಲಿಂಗಾ ರೆಡ್ಡಿ ಅವರು ಹಿರಿತನ ಹಾಗೂ ಅನುಭವದ ಆಧಾರದ ಮೇಲೆ ಮತ್ತೊಮ್ಮೆ ಸಚಿವ ಸ್ಥಾನವನ್ನು ಧಕ್ಕಿಸಿಕೊಳ್ಳುತ್ತಿದ್ದಾರೆ.
ಇದು ಕೇವಲ ಪ್ರಾಥಮಿಕ ಪಟ್ಟಿ ಎನ್ನಲಾಗುತ್ತಿದ್ದು, ಅತೃಪ್ತ ಶಾಸಕರ ಬಣದಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಮಹೇಶ್ ಕುಮಟಳ್ಳಿ ಜೊತೆ ಮತ್ತೊಬ್ಬ ಅತೃಪ್ತರಿಗೆ ಈ ಸಂಪುಟ ಸೇರುವ ಅವಕಾಶ ಒದಗಿಬರಲಿದೆ. ಈ ಬಗ್ಗೆ ಅಧಿಕೃತ ಹೇಳಿಕೆಗಳು ಇನ್ನೂ ಹೊರಬಿದ್ದಿಲ್ಲ.

ಈ ಮೂವರಿಗೆ ಸಚಿವ ಸ್ಥಾನ ಪಕ್ಕಾ
ರಾಮಲಿಂಗಾ ರೆಡ್ಡಿ, ವಿ.ಮುನಿಯಪ್ಪ ಮತ್ತು ಅಮರೇಗೌಡ ಬಯ್ಯಾಪುರ ಅವರಿಗೆ ಸಚಿವ ಸ್ಥಾನ ದೊರಕುತ್ತಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ಇಂದು ಮಾಧ್ಯಮದ ಮುಂದೆ ಹೇಳಿದ್ದಾರೆ. ರಾಮಲಿಂಗಾ ರೆಡ್ಡಿ ಅವರಿಗೆ ದಿವಂಗತ ಶಿವಳ್ಳಿ ಅವರು ನಿರ್ವಹಿಸುತ್ತಿದ್ದ ಪೌರಾಡಳಿತ ಖಾತೆ ನೀಡುವುದಾಗಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೆ ಹೇಳಿದ್ದರು.

ದಿನೇಶ್ ಗುಂಡೂರಾವ್ ಹೇಳಿಕೆ
ಪಕ್ಷ ಯಾರನ್ನೂ ಕಡೆಗಣಿಸಿಲ್ಲ, ಸಂಪುಟ ಪುನರ್ ರಚನೆ ಆದರೆ, ರಾಮಲಿಂಗಾ ರೆಡ್ಡಿ, ವಿ.ಮುನಿಯಪ್ಪ, ಅಮರೇಗೌಡ ಬಯ್ಯಾಪುರ ಅವರಿಗೆ ಅವಕಾಶ ಸಿಗಲಿದೆ. ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಕೃಪಾಶೀರ್ವಾದ?
ಸಚಿವರಾಗುತ್ತಿರುವ ಮೂವರು ಶಾಸಕರಲ್ಲಿ ಇಬ್ಬರು ಸಿದ್ದರಾಮಯ್ಯ ಅವರ ಬೆಂಬಲಿತರಾಗಿದ್ದರೆ, ಇನ್ನೊಬ್ಬರು ಸಿದ್ದರಾಮಯ್ಯ ಅವರ ಸಮಕಾಲೀನರು. ವಿ.ಮುನಿಯಪ್ಪ ಹಾಗೂ ಅಮರೇಗೌಡ ಬಯ್ಯಾಪುರ ಅವರು ಸಚಿವ ಸ್ಥಾನ ಪಡೆಯುವಲ್ಲಿ ಸಿದ್ದರಾಮಯ್ಯ ಅವರ ಕೈವಾಡ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬುಧವಾರವೇ ದಿನಾಂಕ ನಿಗದಿಪಡಿಸಲಾಗಿತ್ತು
ಕಳೆದ ಬುಧವಾರವೇ ಸಚಿವ ಸಂಪುಟ ಪುನರ್ ರಚನೆಗೆ ಮುಹೂರ್ತ ನಿಗದಿಪಡಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಸಂಪುಟ ಪುನರ್ ರಚನೆ ಆಗಲಿಲ್ಲ. ಇದೀಗ ಸೋಮವಾರದಂದು ಸಂಪುಟ ಪುನರ್ರಚನೆಯ ಮುಹೂರ್ತ ಫಿಕ್ಸ್ ಮಾಡಲಾಗಿದೆ ಎನ್ನಲಾಗುತ್ತಿದೆ.

ರಮೇಶ್ ಜಾರಕಿಹೊಳಿ ಸಮಾನ ಮನಸ್ಕರ ಸಭೆ
ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅವರು ಶನಿವಾರ ಸಮಾನ ಮನಸ್ಕರ ಸಭೆ ಕರೆದಿದ್ದು, ರಮೇಶ್ ಜಾರಕಿಹೊಳಿ ಅವರ ಸಭೆಗೆ ಯಾವ-ಯಾವ ಶಾಸಕರು ಪಾಲ್ಗೊಳ್ಳುತ್ತಾರೆ ಎಂಬುದನ್ನು ನೋಡಿಕೊಂಡು ಸಂಪುಟ ಸೇರಲಿರುವ ಪಟ್ಟಿಯನ್ನು ಪುನರ್ ತಿದ್ದಲಾಗುತ್ತದೆ ಎಂಬ ಅನುಮಾನವೂ ಇದೆ.











Click it and Unblock the Notifications