ರಾಮಚಂದ್ರಾಪುರ ಮಠದ ಮೇಲಿನ ಷಡ್ಯಂತ್ರಕ್ಕೆ ಸಾಕೇತ ಯುವ ವೇದಿಕೆ ಖಂಡನೆ
ಉಗ್ರಪ್ಪನವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಇವರಿಗೂ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾಕೇತ ಯುವ ವೇದಿಕೆ ಸ್ಪಷ್ಟನೆ ನೀಡಿದೆ.
ಬೆಂಗಳೂರು, ಡಿ 25: ವಿಧಾನ ಪರಿಷತ್ ಸದಸ್ಯ ಮತ್ತು ದೌರ್ಜನ್ಯ, ಅತ್ಯಾಚಾರ ತಡೆ ಸಮಿತಿ ಅಧ್ಯಕ್ಷ ವಿ ಎಸ್ ಉಗ್ರಪ್ಪನವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಸಾಕೇತ ಯುವ ವೇದಿಕೆ ಸ್ಪಷ್ಟನೆ ನೀಡಿದ್ದು, ಬಂಧಿತರಾಗಿರುವ ಇಬ್ಬರನ್ನು ಮಠದ ಶಿಷ್ಯರು ಎಂಬಂತೆ ಬಿಂಬಿಸಲಾಗುತ್ತಿದ್ದು, ಇದು ಸತ್ಯಕ್ಕೆ ದೂರವಾದುದು, ಮಠ ಯಾವತ್ತಿಗೂ ಅಂತಹ ಹೇಳಿಕೆಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ವೇದಿಕೆ ಪ್ರತಿಪಾದಿಸಿದೆ. (ಉಗ್ರಪ್ಪಗೆ ಜೀವ ಬೆದರಿಕೆ, ಇಬ್ಬರ ಬಂಧನ)
ವಾಸ್ತವವಾಗಿ ರಾಜೇಶ್ವರಿ ಸುವಿಗ್ನ ಎನ್ನುವವರ ಫೇಸ್ಬುಕ್ ಖಾತೆಯಿಂದ ಕೊಲೆ ಬೆದರಿಕೆ ಎಂಬಂತಹ ಶಬ್ದಗಳನ್ನು ಉಪಯೋಗಿಸಿ ಕಾಮೆಂಟ್ ಮಾಡಿದ್ದು, ಅವರು ಮಠದ ಶಿಷ್ಯರಾಗಿರುವುದಿಲ್ಲ.
ಅವರಿಗೂ ಮಠಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಅಸಲಿಗೆ ಅಂತಹ ಹೆಸರಿನ ವ್ಯಕ್ತಿ ಇರುವುದೇ ಅನುಮಾನವಾಗಿದ್ದು, ಪೂರ್ವ ನಿಯೋಜಿತ ಕೃತ್ಯವೇನೋ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ, ಈ ಮೂಲಕ ಮಠದ ವಿರುದ್ಧದ ಇನ್ನೊಂದು ಷಡ್ಯಂತ್ರ ಬಯಲಿಗೆ ಬರುತ್ತಿರುವಂತಿದೆ ಎಂದು ವೇದಿಕೆ ಅನುಮಾನ ವ್ಯಕ್ತ ಪಡಿಸಿದೆ.
ರಾಮಚಂದ್ರಾಪುರ ಮಠದ ಸದ್ದಡಗಿಸಲು ಹಾಗೂ ರಾಘವೇಶ್ವರ ಶ್ರೀಗಳ ಪರಿಕಲ್ಪನೆಯಲ್ಲಿ ಸಾಗುತ್ತಿರುವ ಗೋ ಯಾತ್ರೆಯ ಯಶಸ್ಸನ್ನು ತಡೆಯಲು ಮಠದ ಶಿಷ್ಯರ ಮೇಲೆ ಮಾಡಿರುವ ತಂತ್ರ ಎಂಬುದು ದೃಢವಾಗುತ್ತಿದೆ. ಷಡ್ಯಂತ್ರಗಳಿಗೆ ಸರ್ಕಾರವೂ ಕೂಡ ಮಠ ವಿರೋಧಿಗಳಿಗೆ ಸಾಥ್ ನೀಡುತ್ತಿರುವುದು ನಿಜಕ್ಕೂ ಖೇದಕರ.
ಇದರ ಜೊತೆಗೆ 'ಸ್ವಚ್ಛ ಬ್ರಾಹ್ಮಣ ವೇದಿಕೆ' ಫೇಸ್ಬುಕ್ ಗುಂಪಿನ ನಿರ್ವಾಹಕರನ್ನೂ ಪೀಡಿಸುತ್ತಿರುವುದು ಮಠದ ಸಾಮಾಜಿಕ ಜಾಲತಾಣದಲ್ಲಿನ ಶಕ್ತಿ ಕುಂದಿಸುವ ಪ್ರಯತ್ನವಾಗಿದೆ.
ಫೇಸ್ಬುಕ್ಕಿನಲ್ಲಿ ಸಾರ್ವಜನಿಕ ಗುಂಪುಗಳಲ್ಲಿ ಸದಸ್ಯರು ಹಾಕುವ ಪೋಸ್ಟಗಳಿಗೆ ಮಾತ್ರ ನಿರ್ವಾಹಕ ಜವಾಬ್ದಾರಿಯಾಗಿದ್ದು, ಅದರ ಕೆಳಗೆ ಬರುವ ಕಮೆಂಟುಗಳಿಗೆ ಅಲ್ಲ ಎಂಬುದು ಸಾಮಾನ್ಯ ಜ್ಞಾನವಾಗಿದ್ದು, ಇದೇ ವಿಚಾರವನ್ನು ನ್ಯಾಯಾಲಯ ಈ ಹಿಂದೆ ತನ್ನ ತೀರ್ಪಿನಲ್ಲಿ ಹೇಳಿದೆ. (ರಾಮಚಂದ್ರಾಪುರ ಮಠದ ಆಡಳಿತಕ್ಕೆ ಐಎಸ್ಓ)
ಸತ್ಯಶೋಧಕ ಮಿತ್ರ ಮಂಡಲಿ ಎಂಬ ಫೇಸ್ಬುಕ್ ಗುಂಪಿನಲ್ಲಿ ಇದೇ ಉಗ್ರಪ್ಪನರಿಗೆ ಸಂಬಂಧಿಸಿದ ಪೋಸ್ಟಿಗೆ ರಾಘವೇಶ್ವರ ಶ್ರೀಗಳಿಗೆ ಕೊಲೆ ಬೆದರಿಕೆ ಹಾಕಿರುವ ಕಮೆಂಟ್ ಮಾಡಲಾಗಿದ್ದು, ಅದನ್ನು ಹತ್ತು ನಿಮಿಷದಲ್ಲಿ ತೆಗೆದುಹಾಕಲಾಗಿತ್ತು. ಅವರ ವಿರುದ್ಧ ಯಾಕೆ ಯಾವುದೇ ರೀತಿಯ ತನಿಖೆ ಅಥವಾ ಕ್ರಮ ಕೈಗೊಂಡಿಲ್ಲ? ಇದು ಸರಕಾರದ ಏಕಪಕ್ಷೀಯ ನಿಲುವನ್ನು ತೋರುತ್ತದೆ.
ಈ ಮೂಲಕ ಸಾಕೇತ ಯುವ ವೇದಿಕೆಯು ಷಡ್ಯಂತ್ರಿಗಳಿಗೆ ಮತ್ತು ಸರಕಾರಕ್ಕೆ ಎಚ್ಚರಿಸುವುದೇನೆಂದರೆ ರಾಮಚಂದ್ರಾಪುರ ಮಠದ ಮೇಲಾಗಲಿ, ರಾಘವೇಶ್ವರ ಶ್ರೀಗಳ ಮೇಲಾಗಲಿ, ಅಥವಾ ರಾಮಚಂದ್ರಾಪುರ ಮಠದ ಶಿಷ್ಯ ಭಕ್ತರ ಮೇಲಾಗಲಿ ಕಾನೂನು ದುರುಪಯೋಗ ಮಾಡುವುದನ್ನು ನಿಲ್ಲಿಸಬೇಕು.
ಇಲ್ಲದಿದ್ದರೆ ಬೃಹತ್ ಮಟ್ಟದ ಹೋರಾಟದೊಂದಿಗೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಸಾಕೇತ ಯುವ ವೇದಿಕೆಯ ವಕ್ತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.