ಸಾರ್ವಜನಿಕ ಉದ್ಯೋಗಾಕಾಂಕ್ಷಿಗಳು ಶುದ್ಧ ಹಸ್ತರಾಗಿರಬೇಕು-ಹೈಕೋರ್ಟ್
ಬೆಂಗಳೂರು, ಜೂ.22. ಸಾರ್ವಜನಿಕ ಉದ್ಯೋಗಾಕಾಂಕ್ಷಿಗಳು ಶುದ್ಧಹಸ್ತರಾಗಿರಬೇಕು, ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಭಾರತೀಯ ರೈಲ್ವೇಯ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮಗಳಲ್ಲಿ ತೊಡಗಿದ್ದಾರೆಂಬುದು ತನಿಖೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಅರ್ಹತೆಯ ಪಟ್ಟಿಯಿಂದ ತೆಗೆದುಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಹುಬ್ಬಳ್ಳಿ ಮೂಲದ ಜಿ.ರಾಜೇಶ್ ಮತ್ತು ವಿ.ಜಿ.ಪ್ರಕಾಶ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರನ್ನೊಳಗೊಂಡ ವಿಭಾಗೀಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಅಲ್ಲದೆ, ನ್ಯಾಯಪೀಠ ವಾದ-ಪ್ರತಿವಾದ ಆಲಿಸಿದ ಬಳಿಕ, "ಸಾರ್ವಜನಿಕ ನೇಮಕ ಪ್ರಕ್ರಿಯೆಯಲ್ಲಿ ಅನ್ಯಾಯದ ಕ್ರಮಗಳಿಂದ ಭಾಗವಹಿಸುವ ವ್ಯಕ್ತಿಗಳಿಗೆ ಒಲವು ತೋರಲು ಸಾಧ್ಯವಿಲ್ಲ, ಏಕೆಂದರೆ ವಿಶೇಷವಾಗಿ ಮುಕ್ತ ಮಾರುಕಟ್ಟೆಯಲ್ಲಿ ಕಳಂಕವಿಲ್ಲದ ಬಹಳಷ್ಟು ಜನರು ಲಭ್ಯವಿದ್ದಾರೆ'' ಎಂದು ನ್ಯಾಯಾಲಯ ಹೇಳಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ "ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯವಹಾರಗಳು ಸಂಭವಿಸಿದಾಗ, ಪರೀಕ್ಷೆಯಲ್ಲಿನ ಅವ್ಯವಹಾರವು ಅವುಗಳಲ್ಲಿ ಒಂದಾದಾಗ ಅವರು ಕೆಲವು ಸಮಂಜಸವಾದ ವಿಚಾರಣೆ ನಡೆಸಿ ಸತ್ಯಾಂಶ ತಿಳಿದ ನಂತರವೂ ಉದ್ಯೋಗ ನೀಡುವ ಏಜೆನ್ಸಿಗಳು ಎಡವಲು ಸಾಧ್ಯವಿಲ್ಲ'' ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ಕೇಂದ್ರೀಯ ಆಡಳಿತ ನ್ಯಾಯಮಂಡಳಿ(ಸಿಎಟಿ) ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಪೀಠವು "ಸಿಬಿಐನಂತಹ ಪರಿಣಿತ ಸಂಸ್ಥೆಯು ಸಮಂಜಸವಾದ ತನಿಖೆಯನ್ನು ನಡೆಸಿದೆ ಮತ್ತು ಕೆಲವು ಅಭ್ಯರ್ಥಿಗಳು ಮೇಲ್ನೋಟಕ್ಕೆ ದುಷ್ಕೃತ್ಯ ಎಸಗಿದ್ದಾರೆ ಎಂಬ ಅಂಶವನ್ನು ಪತ್ತೆ ಹಚ್ಚಿದೆ. ಅಂತಹವರನ್ನು ಸಾರ್ವಜನಿಕ ಸೇವೆಗೆ ಸೇರಿಸುವುದು ಸೂಕ್ತವಲ್ಲ'' ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ:
2013ರಲ್ಲಿ ಆರಂಭವಾದ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಅವ್ಯವಹಾರಗಳ ಆರೋಪಗಳ ಹಿನ್ನೆಲೆಯಲ್ಲಿ ಆ ಬಗ್ಗೆ ತನಿಖೆ ನಡೆಸುವಂತೆ ರೈಲ್ವೆ ಇಲಾಖೆಯು 2015ರಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಗೆ ಪತ್ರ ಬರೆದಿತ್ತು.
ಅದನ್ನು ಆಧರಿಸಿ ತನಿಖೆ ನಡೆಸಿದ ಸಿಬಿಐ, ಆರೋಪಿಗಳಿಬ್ಬರು ಅಕ್ರಮ ಆರೋಪದಲ್ಲಿ ತಪ್ಪಿತಸ್ಥರು ಎಂದು ಹೇಳಿದ್ದು, ಅವರು ಎಸ್ಎಂಎಸ್ ಮೂಲಕ ಲಿಖಿತ ಪರೀಕ್ಷೆಯ ಉತ್ತರಗಳನ್ನು ಪಡೆಯಲು ಅಕ್ರಮಗಳ ಪ್ರಮುಖ ಸಂಚುಕೋರರು ಕೈ ಜೋಡಿಸಿದ್ದಾರೆ ಎಂದು ಹೇಳಿತ್ತು.
ಆ ಹಿನ್ನೆಲೆಯಲ್ಲಿಯೇ ಅರ್ಜಿದಾರರನ್ನು ನೇಮಕ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಅರ್ಜಿದಾರರು ತನಿಖೆಯ ಕಾನೂನು ಬದ್ಧತೆಯನ್ನು ಪ್ರಶ್ನಿಸಿದ್ದು, ನೇಮಕಾತಿ ಪ್ರಕ್ರಿಯೆಯ ನಿಯಮಗಳ ಪ್ರಕಾರ ನೇಮಕಾತಿ ಪ್ರಕ್ರಿಯೆಯ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಹಾಗಾಗಿ ಅವರು ಸಾರ್ವಜನಿಕ ಹುದ್ದೆಗಳಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಮತ್ತು ಉತ್ತೀರ್ಣರಾಗಿದ್ದರೂ ತಮ್ಮನ್ನು ಆಯ್ಕೆಗೆ ಪರಿಗಣಿಸದ ರೈಲ್ವೆ ನೇಮಕಾತಿ ಮಂಡಳಿಯ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಕೇಂದ್ರೀಯ ಆಡಳಿತ ನ್ಯಾಯಮಂಡಳಿ ವಜಾಗೊಳಿಸಿತ್ತು. ಆ ಸಿಎಟಿ ಆದೇಶದ ವಿರುದ್ಧ ಅರ್ಜಿದಾರರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications