Get Updates
Get notified of breaking news, exclusive insights, and must-see stories!

ತೀರ್ಥಹಳ್ಳಿಯಲ್ಲಿ ಹೆಚ್ಚಿದ ವನ್ಯಜೀವಿಗಳ ಹಾವಳಿ: ಚಿರತೆ ದಾಳಿಗೆ 3 ಹಸು ಬಲಿ, ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ವನ್ಯಜೀವಿಗಳ ಹಾವಳಿ ಮಿತಿಮೀರುತ್ತಿದ್ದು, ತೀರ್ಥಹಳ್ಳಿ ತಾಲೂಕಿನ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಒಂದೆಡೆ ರೈತರ ಜಾನುವಾರುಗಳ ಮೇಲೆ ಚಿರತೆಗಳು ಸರಣಿ ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಮಂಗ ಹಾಗೂ ಕಾಡುಕೋಣಗಳ ಹಾವಳಿಯಿಂದ ಬೆಳೆಗಳು ನಾಶವಾಗುತ್ತಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ಎಲ್ಲ ಅನಾಹುತಗಳಿಗೆ ಕಾರಣ ಎಂದು ಆರೋಪಿಸಿರುವ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಟ್ಟಿಗೆಗೆ ನುಗ್ಗಿ ದನಗಳ ರಕ್ತ ಹೀರಿದ ಚಿರತೆ

ತಾಲೂಕಿನಲ್ಲಿ ದಿನೇ ದಿನೇ ಚಿರತೆ ಕಾಟ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗಷ್ಟೇ ಅರಳಸುರಳಿ ಭಾಗದಲ್ಲಿ ಭಾರಿ ಸದ್ದು ಮಾಡಿದ್ದ ಚಿರತೆಗಳು, ಇದೀಗ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈಚಲಬೈಲು ಸುತ್ತಮುತ್ತ ಪ್ರತ್ಯಕ್ಷವಾಗಿವೆ. ಶುಕ್ರವಾರ ಬೆಳಗಿನ ಜಾವ ಈಚಲಬೈಲು ಗ್ರಾಮದ ನಿವಾಸಿ ನಾಗೇಶ್ ಎಂಬುವವರ ಮನೆಯ ಕೊಟ್ಟಿಗೆಗೆ ನುಗ್ಗಿರುವ ಚಿರತೆಯೊಂದು, ಕಟ್ಟಿದ್ದ ಹಸುವಿನ ಮೇಲೆ ಭೀಕರ ದಾಳಿ ನಡೆಸಿದೆ. ಹಸುವನ್ನು ಕೊಂದಿರುವ ಚಿರತೆ, ಅದರ ರಕ್ತ ಹೀರಿ ಪರಾರಿಯಾಗಿದೆ. ಬೆಳಿಗ್ಗೆ ಎದ್ದು ಕೊಟ್ಟಿಗೆಗೆ ಹೋದಾಗ ರೈತನಿಗೆ ಈ ಆಘಾತಕಾರಿ ಘಟನೆ ಕಂಡುಬಂದಿದೆ.

Thirthahalli Leopard Attack

ಕಳೆದ ವಾರವಷ್ಟೇ ಪಕ್ಕದ ಗ್ರಾಮದಲ್ಲಿ ಇದೇ ರೀತಿ ದಾಳಿ ಮಾಡಿದ್ದ ಚಿರತೆಗಳು ಎರಡು ಹಸುಗಳನ್ನು ಬಲಿಪಡೆದಿದ್ದವು. ಇದೀಗ ಮತ್ತೆ ದಾಳಿ ಮುಂದುವರಿದಿದ್ದು, ಒಟ್ಟಾರೆ ಮೂರು ಹಸುಗಳು ಚಿರತೆ ಪಾಲಾಗಿವೆ.

ರೈತರಲ್ಲಿ ಹೆಚ್ಚಿದ ಆತಂಕ

ಸರಣಿ ಚಿರತೆ ದಾಳಿಗಳಿಂದಾಗಿ ಈಚಲಬೈಲು, ಹಾಲಿಗೆ, ಸುಣ್ಣಧಮನೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹಗಲು ಹೊತ್ತಿನಲ್ಲೇ ತೋಟ, ಗದ್ದೆಗಳಿಗೆ ಹೋಗಲು ರೈತರು ಹಿಂದೇಟು ಹಾಕುವಂತಹ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ. ಜೀವ ಕೈಯಲ್ಲಿಡಿದುಕೊಂಡು ಕೃಷಿ ಮಾಡುವ ದುಸ್ಥಿತಿ ಮಲೆನಾಡಿನ ರೈತರದ್ದಾಗಿದೆ.

ಇಷ್ಟೆಲ್ಲಾ ಅನಾಹುತಗಳು ಕಣ್ಣೆದುರೇ ನಡೆಯುತ್ತಿದ್ದರೂ, ಮೇಗರವಳ್ಳಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದು ಗ್ರಾಮಸ್ಥರ ಗಂಭೀರ ಆರೋಪ. "ವಾರದ ಹಿಂದೆಯೇ ಹಸುಗಳು ಬಲಿಯಾಗಿದ್ದರೂ, ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನು ಇಡುವ ಅಥವಾ ಯಾವುದೇ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಗೋಜಿಗೇ ಹೋಗಿಲ್ಲ. ಇಲಾಖೆಯ ಈ ನಿರ್ಲಕ್ಷ್ಯದಿಂದಲೇ ಇಂದು ಮತ್ತೊಂದು ಹಸು ಬಲಿಯಾಗಿದೆ" ಎಂದು ರೈತರು ಕಿಡಿಕಾರಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಬೇಕು ಹಾಗೂ ಮೃತ ಜಾನುವಾರುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಂಗ, ಕಾಡುಕೋಣಗಳ ಉಪಟಳ: ಬೆಳೆ ಸಂಪೂರ್ಣ ನಾಶ

ರೈತರಿಗೆ ಕೇವಲ ಚಿರತೆಯ ಭಯ ಮಾತ್ರವಲ್ಲ, ಮಂಗಗಳು ಹಾಗೂ ಕಾಡುಕೋಣಗಳ (Indian Bison) ಹಾವಳಿಯೂ ವಿಪರೀತವಾಗಿದೆ. ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನಾದ್ಯಂತ ಮಂಗಗಳ ಕಾಟ ಮಿತಿಮೀರಿದ್ದು, ರೈತರು ಯಾವುದೇ ಬೆಳೆ ಬೆಳೆಯಲಾಗದ ಸ್ಥಿತಿ ತಲುಪಿದ್ದಾರೆ. ಅಡಿಕೆ ತೋಟಗಳಿಗೆ ನುಗ್ಗುವ ಮಂಗಗಳ ಹಿಂಡು, ಅಡಿಕೆ ಹಿಂಗಾರವನ್ನೇ ಕಿತ್ತು ತಿನ್ನುತ್ತಿವೆ. ಇದರಿಂದ ಇಳುವರಿ ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ.

ಇದರ ಜೊತೆಗೆ ಕಾಡುಕೋಣಗಳ ಹಿಂಡು ಕೂಡ ರಾತ್ರಿ ವೇಳೆ ಕೃಷಿ ಭೂಮಿಗೆ ಲಗ್ಗೆ ಇಡುತ್ತಿವೆ. ಗುಂಪು ಗುಂಪಾಗಿ ಬರುವ ಈ ಪ್ರಾಣಿಗಳು, ಗದ್ದೆ ಹಾಗೂ ತೋಟಗಳನ್ನು ತುಳಿದು ನಾಶಪಡಿಸುತ್ತಿವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ, ಹಗಲಿರುಳು ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ವನ್ಯಜೀವಿಗಳ ಪಾಲಾಗುತ್ತಿರುವುದನ್ನು ಕಂಡು ರೈತರು ಕಣ್ಣೀರು ಹಾಕುವಂತಾಗಿದೆ. ಸರ್ಕಾರ ಮತ್ತು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ, ಮಲೆನಾಡಿನಲ್ಲಿ ಕೃಷಿ ಮಾಡುವುದೇ ಅಸಾಧ್ಯ ಎಂಬ ಕೂಗು ಕೇಳಿಬರುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+