ಜುಲೈ 8ರ ಮಂಗಳವಾರ ರಾಜ್ಯದಲ್ಲಿನ ಈ ಮಹಾನಗರ ಪಾಲಿಕೆಗಳು ಕ್ಲೋಸ್; ಕಾರಣ ಏನು ಗೊತ್ತಾ?
ಬೆಂಗಳೂರು, ಜುಲೈ, 6: ಸಾಮಾನ್ಯ ಜನರು ಪ್ರತಿನಿತ್ಯ ವಿವಿಧ ದಾಖಲೆಗಳಿಗಾಗಿ ಭೇಟಿ ನೀಡುವ ಮಹಾನಗರ ಪಾಲಿಕೆಗಳು ಜುಲೈ 8 ಮಂಗಳವಾರಂದು ಮುಚ್ಚಲಿವೆ. ಹಾಗಾದ್ರೆ ಯಾವ್ಯಾವ ಜಿಲ್ಲೆಗಳಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಬಿಬಿಎಂಪಿ ಸೇರಿದಂತೆ ರಾಜ್ಯದ ಹಲವು ಮಹಾನಗರ ಪಾಲಿಕೆಗಳ ನೌಕರರು ಮಂಗಳವಾರ ಸಾಮೂಹಿಕ ರಜೆ ಹಾಕಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ.

ಬಿಬಿಎಂಪಿಯಲ್ಲಿ ಸುಮಾರು ವಿವಿಧ ವೃಂದದ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳು ತುಂಬುತ್ತಿಲ್ಲ. ಪರಿಣಾಮ ಹಾಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಯಾವುದೇ ನೋಟಿಸ್ ನೀಡದೆ ನೌಕರರನ್ನು ಅಮಾನತ್ತು ಮಾಡಿರುವುದನ್ನು ತೆರವುಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಕೆ ಮಾಡಲಾಗಿದೆ. ಆದರೆ, ಇಲ್ಲಿವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ನೌಕರರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
* ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಕಾರ್ಯನಿರ್ವಾಹಕೇತರರು ಆಗಿದ್ದು, ಲಾಗ್ಸೇಫ್ ಪದ್ಧತಿಯಲ್ಲಿ ಹಾಜರಾತಿ ಸಲ್ಲಿಕೆ ಮಾಡಲು ಕಷ್ಠಕರ ಆಗುತ್ತಿರುವುದರಿಂದ ಕೂಡಲೇ ಬಿಬಿಎಂಪಿ ನೌಕರರಿಗೆ ಜಾರಿ ಮಾಡಿರುವ ಹಾಜರಾತಿ ಪದ್ಧತಿಯನ್ನು ಕೂಡಲೇ ಕೈ ಬಿಡಬೇಕು.
* ಬಿಬಿಎಂಪಿ 225 ವಾರ್ಡ್ಗಳಲ್ಲಿ ಖಾಲಿಯಿರುವ 6,000ಕ್ಕೂ ಅಧಿಕ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು.
* ಬಿಬಿಎಂಪಿ ವಿದ್ಯಾ ಇಲಾಖೆಯ ಪ್ರಾಂಶುಪಾಲರು, ಮುಖ್ಯೋಪಾಧ್ಯಯರುರವರ ಮೇಲೆ ಕ್ಷುಲಕ ಕಾರಣಕ್ಕೆ ಕರ್ತವ್ಯ ಲೋಪದ ಅಡಿಯಲ್ಲಿ ಕಾನೂನು ಬಾಹಿರವಾಗಿ ಇಲಾಖಾ ವಿಚರಣೆ ಜರುಗಿಸುತ್ತಿರುವುದನ್ನು ಕೂಡಲೇ ಕೈ ಬಿಡಬೇಕು.
* ವಿಶೇಷ ಆಯುಕ್ತರನ್ನು ಯಾವುದೇ ವಲಯಕ್ಕೆ ನೇಮಿಕ ಮಾಡದೆ ವಿಶೇಷ ಆಯುಕ್ತರು ಹುದ್ದೆಯಲ್ಲಿ ಮಾತ್ರ ನೇಮಿಸಬೇಕು ಹಾಗೂ ಮುಖ್ಯ ಆಯುಕ್ತರ ಅಧಿಕಾರ ಪ್ರತ್ಯೋಜನೆಯನ್ನು ವಿಶೇಷ ಆಯುಕ್ತರು ಉಪ ಆಯುಕ್ತರು ಅವರು ಕಟ್ಟು ನಿಟ್ಟಾಗಿ ಪಾಲಿಸಲು ಆದೇಶಿಸಬೇಕು.
* ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಯಿಂದ ಕಾರ್ಯಕಲಾಪ ಹುದ್ದೆಗೆ ಮುಂಬಡ್ತಿ ಹಾಗೂ ಕಾರ್ಯಪಾಲ ಅಭಿಯಂತರರ ಹುದ್ದೆಯಿಂದ ಅಧೀಕ್ಷಕ ಅಭಿಯಂತರರ ಹುದ್ದೆಗೆ ಕೂಡಲೇ ಮುಂಬಡ್ತಿ ನೀಡಬೇಕು.
* ಬಿಬಿಎಂಪಿ ಕಂದಾಯ ಇಲಾಖೆಯಲ್ಲಿ ಖಾತಾ ವರ್ಗಾವಣೆ/ಖಾತಾ ನೋಂದಣಿ/ಖಾತಾ ವಿಭಜನೆ/ಖಾತಾ ಹೊಂದುಗೂಡಿಸುವುದು ಇ-ಆಸ್ತಿ ಪದ್ಧತಿಯನ್ನು ನಿಯಮಾನುಸಾರ ಈ ಹಿಂದೆ ಇದ್ದ ಪದ್ಧತಿಯಲ್ಲಿಯೇ ಮುಂದುವರೆಸಬೇಕು.
* ಬಿಬಿಎಂಪಿಯಲ್ಲಿ ಕಾನೂನು ಬಾಹಿರವಾಗಿ ಎರವಲು ಸೇವೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೂಡಲೇ ಮಾತೃ ಇಲಾಖೆಗೆ ಹಿಂತಿರುಗಿಸಬೇಕು.
* ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೃಂದದ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ನೀಡಬೇಕು.
* ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಆರೋಗ್ಯ ಸೌಲಭ್ಯ/ಯೋಜನೆಯನ್ನು ಬಿಬಿಎಂಪಿ ಅಧಿಕಾರಿ/ನೌಕರರಿಗೂ ಜಾರಿ ಮಾಡಬೇಕು.
* ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ನೌಕರರ ಸೇವಾ ಜೇಷ್ಠತಾಪಟ್ಟಿಯನ್ನು ಅಂತಿಮಗೊಳಿಸಬೇಕು.
* ಬಿಬಿಎಂಪಿಯ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಲ್ತ್ ಸೂಪರ್ ವೈಸರ್ ಗಳು ಬಿ ಗ್ರೂಪ್ ಅಧಿಕಾರಿಗಳು ಆಗಿದ್ದು, ಇವರಿಗೆ ಉದ್ದಿಮೆ ಪರವಾನಗಿ ನೀಡಬೇಕು.
* ಬಿಬಿಎಂಪಿಯಲ್ಲಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮಾರ್ಷಲ್ಗಳ ಹುದ್ದೆಗಳನ್ನು ಕೂಡಲೇ ರದ್ದುಪಡಿಸಬೇಕು.
ಯಾವ್ಯಾವ ಪಾಲಿಕೆಗಳು ಕ್ಲೋಸ್?
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
* ಹುಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
* ತುಮಕೂರು ಮಹಾನಗರ ಪಾಲಿಕೆ
* ಮಂಗಳೂರು ಮಹಾನಗರ ಪಾಲಿಕೆ
* ಶಿವಮೊಗ್ಗ ಮಹಾನಗರ ಪಾಲಿಕೆ
* ದಾವಣಗೆರೆ ಮಹಾನಗರ ಪಾಲಿಕೆ
* ಮೈಸೂರು ಮಹಾನಗರ ಪಾಲಿಕೆ
* ಬೆಳಗಾವಿ ಮಹಾನಗರ ಪಾಲಿಕೆ
ಹೀಗೆ ಈ ಮಹಾನಗರ ಪಾಲಿಕೆಗಳ ನೌಕರರು ಜುಲೈ 8 ಮಂಗಳವಾರದಂದು ಕಚೇರಿ ಮುಚ್ಚಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ.












Click it and Unblock the Notifications