ಸಂಪುಟ ಸಭೆ: ಸ್ಟಾರ್ಗಳಿಗೆ ಶುರುವಾಯ್ತು ಸಂಕಷ್ಟ
ಬೆಂಗಳೂರು, ಸೆ. 03: ಡ್ರಗ್ಸ್ ಮಾಫಿಯಾ ಮಟ್ಟಹಾಕುವ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಡ್ರಗ್ಸ್ ವಿಚಾರವಾಗಿ ಸಾರ್ವಜನಿಕವಾಗಿ ನಡೆಯುತ್ತಿರುವ ಚರ್ಚೆ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಂದಿದ್ದಾರೆ. ಜೊತೆಗೆ ಡ್ರಗ್ಸ್ ಮಾಫಿಯಾ ಮಟ್ಟಹಾಕಲು ಗೃಹ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
Recommended Video
ಕನ್ನಡ ಚಿತ್ರರಂಗ ಸೇರಿದಂತೆ ಯಾವುದೇ ಕ್ಷೇತ್ರವಾದರೂ ಸರಿ, ಕಠಿಣ ಕ್ರಮ ತೆಗೆದುಕೊಳ್ಳಲು ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಆದರೆ ಸೂಕ್ತ ಸಾಕ್ಷಿ, ಪುರಾವೆಗಳಿಲ್ಲದೆ ಯಾರನ್ನೂ ವಿಚಾರಣೆ ಕರೆಸದಿರುವಂತೆಯೂ ಗೃಹ ಇಲಾಖೆ ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದೆ ಎನ್ನಲಾಗಿದೆ. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ಕುರಿತು 2012ರಲ್ಲಿ ವಿಧಾನಸಭೆಯ ಅಂದಿನ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್ ಅವರ ವರದಿ ಬಗ್ಗೆಯೂ ಮಹತ್ವದ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಹೀಗಾಗಿ ಚಿತ್ರರಂಗದ ಇನ್ನಷ್ಟು ಸ್ಟಾರ್ಗಳು ವಿಚಾರಣೆಗೆ ಒಳಪಡುವ ಸಾಧ್ಯತೆಗಳು ದಟ್ಟವಾಗಿವೆ.
ಆರು ತಿಂಗಳುಗಳಿಂದ ತನಿಖೆ
ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಡ್ರಗ್ಸ್ ಮಾಫಿಯಾ ವಿರುದ್ಧ ಕಳೆದ ಆರು ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ. ವಿಚಾರಣೆ ಸಂದರ್ಭದಲ್ಲಿ ಆದಾದ ನಂತರ ಕೆಲ ಹೆಸರುಗಳು ಬಂದಿವೆ. ಅಂಥವರನ್ನು ಕರೆಸಿ ಈಗ ಮಾತನಾಡಿಸಿದ್ದೇವೆ. ಅವರಿಗೆ ನೋಟೀಸ್ ಕೊಟ್ಟು ಕರೆಸಿ ವಿಚಾರಣೆ ಮಾಡುತ್ತಿದ್ದೇವೆ. ಡ್ರಗ್ಸ್ ಮಾಫಿಯಾದಲ್ಲಿ ಯಾರು ಯಾರು ತೊಡಗಿದ್ದಾರೆ ಎಂಬಬುದರ ಕುರಿತು ತನಿಖೆ ನಡೆಯುತ್ತಿದೆ. ಸಾಕ್ಷಿ ಆಧಾರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ರಾಕೇಶ್ ಸಿದ್ದರಾಮಯ್ಯ ಮೃತಪಟ್ಟಿದ್ದು ಡ್ರಗ್ ಸೇವನೆಯಿಂದ: ಮುತಾಲಿಕ್ ನೇರ ಆರೋಪ
ನಟಿ ರಾಗಿಣಿ ದ್ವಿವೇದಿ
ಡ್ರಗ್ಸ್ ವಿಚಾರಣೆ ಸಂದರ್ಭದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಹಾಜರಾಗದ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಬಸವರಾಜ್ ಬೊಮ್ಮಾಯಿ ಅವರು, ನಮ್ಮ ಅಧಿಕಾರಿಗಳು ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತಾರೆ. ಹೆಸರು ಬಂದವರನ್ನು ಕರೆಯಿಸಿ ವಿಚಾರಣೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಒಂದು ರೇವ್ ಪಾರ್ಟಿಯಲ್ಲಿ ತೊಡಗಿದ್ದರು. ಅವರೆಲ್ಲರನ್ನೂ ಕರೆದು ವಿಚಾರಣೆ ಮಾಡುತ್ತಿದ್ದೇವೆ. ಒಟ್ಟಾರೆ ಒಂದು ವ್ಯವಸ್ಥಿತವಾದ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಸುಮ್ಮನೆ ಯಾರನ್ನೂ ಕರಿಸೊಲ್ಲ
ಕೆಲವರ ಹೆಸರನ್ನು ಬಹಿರಂಗ ಪಡಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಬೊಮ್ಮಾಯಿ ಅವರು, ತನಿಖೆ ನಡೆಯುವಾಗ ನಾವು ಯಾರೂ ಮಧ್ಯ ಪ್ರವೇಶ ಮಾಡಬಾರದು. ಪೊಲೀಸರು ಯಾವುದನ್ನು ಯಾವಾಗ ಹೇಳಬೇಕು ಎಂಬುದು ಅವರಿಗೇ ಬಿಟ್ಟ ವಿಚಾರ. ಸುಖಾಸುಮ್ಮನೆ ಯಾರ್ಯಾರದೋ ಹೆಸರುಗಳನ್ನು ಹೇಳುವುದು ತಪ್ಪಾಗುತ್ತದೆ ಎಂದರು.
ಡ್ರಗ್ಸ್ ಬಗ್ಗೆ ಮತ್ತೊಂದು ಆಘಾತಕಾರಿ ಸುದ್ದಿ ತಿಳಿಸಿದ ಪ್ರಮೋದ್ ಮುತಾಲಿಕ್
ಪ್ರತಿ ಪೊಲೀಸ್ ಠಾಣೆಯಲ್ಲೂ ತನಿಖೆ
ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗುವುದು. ಕೇವಲ ಸಿಸಿಬಿಯಲ್ಲಿ ಮಾತ್ರ ಮಾಡುವುದಲ್ಲ. ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೂ ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ನಮ್ಮ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ಗೆ ಸೂಚನೆ ಕೊಟ್ಟಿದ್ದೇನೆ. ಎಷ್ಟು ಜಾಲ ಇದೆ ಅಷ್ಟೇ ಜಾಲದಲ್ಲಿ ಅದನ್ನು ಕಡಿವಾಣ ಹಾಕುವಂತೆ ಸೂಚನೆ ಕೊಟ್ಟಿದ್ದೇನೆ. ಯಾವುದು ಸಾಕ್ಷಿ ಆಧಾರ ಇದೆ ಅದನ್ನು ಮಾತ್ರ ನಾವು ವಿಚಾರಣೆ ಮಾಡ್ತಿದ್ದೇವೆ.
ಯಾವುದೇ ರಂಗದಲ್ಲಿ ಆಗಲಿ, ಎಷ್ಟೇ ದೊಡ್ಡವರ ಮಕ್ಕಳಾಗಲಿ, ಎಷ್ಟೇ ದೊಡ್ಡವರಾಗಲಿ, ಎಷ್ಟೇ ಪ್ರಭಾವಿಗಳಾಗಲಿ, ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದರೆ ವಿಚಾರಣೆ ಮಾಡಿ, ಶಿಕ್ಷೆಗೆ ಒಳಪಡಿಸುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ.