ದರ್ಶನ್ ವಿಚಾರದಲ್ಲಿ ಸರ್ಕಾರದ ಮಧ್ಯಸ್ಥಿಕೆ ಇಲ್ಲ-ಗೃಹ ಸಚಿವ ಡಾ.ಜಿ ಪರಮೇಶ್ವರ್
ತುಮಕೂರು, ಸೆಪ್ಟೆಂಬರ್ 03: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ನನ್ನು ಇತ್ತೀಚಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ಸ್ಥಳಾಂತರ ಮಾಡಲಾಗಿದೆ. ಇದೀಗ ಬಳ್ಳಾರಿ ಜೈಲಿನಲ್ಲಿ ದರ್ಶನ್ಗೆ ಅಧಿಕಾರಿಗಳು ಸರ್ಜಿಕಲ್ ಚೇರ್ ನೀಡಿರುವ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿದ್ದು, ಅದು ನಮ್ಮ ಕಾರಾಗೃಹ ಇಲಾಖೆಗೆ ಬಿಟ್ಟಿರುವ ವಿಚಾರ. ನಾವ್ಯಾರು ಹಾಗೂ ರಾಜ್ಯ ಸರ್ಕಾರ ಇದರಲ್ಲಿ ಮಧ್ಯಸ್ಥಿಕೆ ವಹಿಸಲ್ಲ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಾಗೃಹ ಇಲಾಖೆಗೆ ಮಾರ್ಗಸೂಚಿ ಇದೆ. ಅದರ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಅವರಿಗೆ ಆ ರೀತಿ ಏನಾದರೂ ಮನವಿ ಇದ್ದರೆ, ಮ್ಯಾನ್ಯೂಯಲ್ ಯಾವ ರೀತಿ ಇರುತ್ತದೆ ಹಾಗೆ ಮಾಡುತ್ತಾರೆ. ನಮಗೆ ಈ ರೀತಿಯ ಸೌಲಭ್ಯ ಬೇಕು ಅಂತಾ ಕೋರ್ಟ್ನಲ್ಲಿ ಅರ್ಜಿ ಹಾಕಬೇಕಾಗಿರುತ್ತದೆ ಎಂದರು.

ಆರೋಪಿಗಳು ನಮಗೆ ಈ ರೀತಿ ಆರೋಗ್ಯದ ದೃಷ್ಟಿಯಿಂದ ಸೌಲಭ್ಯ ಬೇಕು ಅಂತಾ ಅರ್ಜಿ ಹಾಕುತ್ತಾರೆ. ಆಗ ಕೋರ್ಟ್ ಏನು ನಿರ್ದೇಶನ ಕೊಡುತ್ತದೆ ಅಧಿಕಾರಿಗಳು ಹಾಗೆ ಮಾಡುತ್ತಾರೆ. ಕಾರಾಗೃಹ ಅಧಿಕಾರಿಗಳು ತೆಗೆದುಕೊಳ್ಳುವ ಕೆಲ ನಿರ್ಧಾರಗಳಿರುತ್ತದೆ. ಅದನ್ನು ಮೀರಿ ಕೆಲ ಸೌಲಭ್ಯಗಳು ಬೇಕು ಅಂದರೆ ಕೋರ್ಟ್ಗೆ ಹೋಗಬೇಕು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಇತ್ತೀಚಿಗೆ ಕಾಂಗ್ರೆಸ್ನಲ್ಲಿ ಸಿಎಂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಸಿಎಂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದರೆ ಆಗಲಿ. ನಿಮಗೇನು ಏನು ತೊಂದರೆ. ತೀರ್ಮಾನ ಮಾಡುವುದು ಹೈ ಕಮಾಂಡ್ನವರು. ಹೆಚ್ಚಾದರೆ ಅವರು ನಿಭಾಯಿಸುತ್ತಾರೆ. ಇನ್ನಷ್ಟು ಜನ ಆದರೂ ಅವರು ನಿಭಾಯಿಸುತ್ತಾರೆ ಎಂದರು.
ಏನೇ ಆದರೂ ಮುಖ್ಯಮಂತ್ರಿ ಆಗುವವರು ಒಬ್ಬರೇ ಅಲ್ವಾ, ಆ ಸಂದರ್ಭ ಬಂದಾಗ ಒಬ್ಬರೇ ಸಿಎಂ ಆಗುತ್ತಾರೆ. ಆ ಪರಿಸ್ಥಿತಿ ಈಗ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಮುಂದೆ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭರವಸೆ ವ್ಯಕ್ತಪಡಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಜೊತೆ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಅವತ್ತೇ ಸ್ಪಷ್ಟೀಕರಣ ಕೊಟ್ಟಿದ್ದೇನೆ. ನಾನು ವಿಧಾನಸೌಧದ ನನ್ನ ಕಚೇರಿಯಲ್ಲಿದ್ದೆ. ಅವರು ನನಗೆ ಕರೆ ಮಾಡಿದರು. ವರ್ಗಾವಣೆಗೆ ಸಂಬಂಧಿಸಿದ ವಿಚಾರದ ಬಗ್ಗೆ ಮಾತನಾಡಬೇಕು ಅಂದರು. ನಾನು ಹೇಳಿದೆ, ಊಟಕ್ಕೆ ಹೋಗುತ್ತಿದ್ದೇನೆ ಮಾರಾಯಾ, ಮಧ್ಯಾಹ್ನ ಸಿಗುತ್ತೇನೆ ಅಂದೆ. ಹಾಗಾದರೆ ನಮ್ಮ ಮನೆಗೆ ಬನ್ನಿ ಅಂದರು.
ಒಳ್ಳೆಯದಾಯ್ತಲ್ಲ, ರೊಟ್ಟಿ ತಿಂದು ಬಹಳ ದಿನ ಆಯ್ತಲ್ಲ ಎಂದು ಹೋಗಿ ಊಟ ಮಾಡಿದೆ, ಜೋಳದ ರೊಟ್ಟಿನೂ ಸಿಕ್ಕಿತು. ಹೋಗಿ ಮಾತನಾಡಿಕೊಂಡು ಬಂದೆ.ಇಬ್ಬರೂ ರಾಜಕಾರಣಿಗಳು ಸೇರಿದಾಗ ಏನು ಮಾತನಾಡುತ್ತಾರೆ. ರಾಜಕಾರಣನೇ ಮಾತನಾಡುತ್ತಾರೆ. ನಾವು ಕೂಡ ರಾಜಕಾರಣದ ಬಗ್ಗೆ ಮಾತಾಡಿದೆವು ಆದರೆ ಅದನ್ನು ಹಂಚಿಕೊಳ್ಳಲು ಆಗಲ್ಲ ಎಂದರು.












Click it and Unblock the Notifications