ಮತದಾರರ ಮಾಹಿತಿ ಕಳವು ಪ್ರಕರಣ: ಇಬ್ಬರ ಬಂಧನ, ಎನ್ಜಿಒ ಮುಖ್ಯಸ್ಥ ಪರಾರಿ
ಬೆಂಗಳೂರು, ನವೆಂಬರ್ 19: ಬೆಂಗಳೂರಿನಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣದ ಸಂಬಂಧ ಚಿಲುವೆ ಸಂಸ್ಥೆ ವಿರುದ್ಧ ಹಲಸೂರು ಗೇಟ್ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ಈ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಚಿಲುಮೆ ಸಂಸ್ಥೆಯ ನಿರ್ದೇಶಕ ಸೇರಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಶುಕ್ರವಾರ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಇದೇ ವೇಳೆ ಬಿಬಿಎಂಪಿ ಹಾಗೂ ಚಿಲುಮೆ ಸಂಸ್ಥೆಯ ಕಚೇರಿಯ ಕೆಲವು ಮಹತ್ವದ ದಾಖಲೆಗಳನ್ನು ಕೂಡ ವಶಕ್ಕೆ ಪಡೆಲಾಗಿದೆ. ಚಿಲುಮೆ ಸಂಸ್ಥೆಯ ನಿರ್ದೇಶಕ ರೇಣುಕಾ ಪ್ರಸಾದ್ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಧರ್ಮೇಶ್ರನ್ನ ಬಂಧಿಸಿದ್ದು, ಮತ್ತಿಬ್ಬರು ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಪೊಲೀಸರು ಕಳುಹಿಸಿದ್ದಾರೆ. ಈ ಸಂಸ್ಥೆಯ ಆಡಳಿತಾಧಿಕಾರಿಗಳು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇನ್ನೂ ಮಲ್ಲೇಶ್ವರಂನ ಚಿಲುಮೆ ಸಂಸ್ಥೆಯ ಕಚೇರಿಗೆ ಸಿಸಿಬಿ ಟೆಕ್ನಿಕಲ್ ತಂಡ ಕೂಡ ಆಗಮಿಸಿದ್ದು, ಚಿಲುಮೆ ಕಚೇರಿಯ ಕಂಪ್ಯೂಟರ್ನಲ್ಲಿರುವ ಡೇಟಾ ಪರಿಶೀಲನೆ ಮಾಡುತ್ತಿದೆ. ಸಿಸಿಬಿ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ನೇತೃತ್ವದ ತಂಡ ಡಿಲೀಟ್ ಆಗಿರುವ ಡೇಟಾ ರಿಟ್ರೀವ್ ಮಾಡಿದೆ. ಇನ್ನೂ ಈ ಕೃತ್ಯ ಬೆಳಕಿಗೆ ಬಂದ ತಕ್ಷಣ ಕಚೇರಿಗೆ ಬೀಗ ಹಾಕಿಕೊಂಡು ಚಿಲುಮೆ ಸಂಸ್ಥೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಪರಾರಿಯಾಗಿದ್ದರು. ಹೀಗಾಗಿ ನ್ಯಾಯಾಲಯದ ಸರ್ಚ್ ವಾರೆಂಟ್ ಪಡೆದು ಚಿಲುಮೆ ಸಂಸ್ಥೆಯ ಕಚೇರಿಯನ್ನು ಪೊಲೀಸರು ಜಾಲಾಡಿದ್ದು, ಈ ವೇಳೆ ಕೆಲಸವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಚಿಲುಮೆ ಸಂಸ್ಥೆ ಬಗ್ಗೆ ದೂರು ಬಂದಿದ್ದು ಷರತ್ತು ಉಲ್ಲಂಘಿಸಿರುವುದದನ್ನ ಪರಿಗಣಿಸಿ ಅನುಮತಿ ಪತ್ರವನ್ನು ರದ್ದುಪಡಿಸಲಾಗಿದೆ. ಜೊತೆಗೆ ಈ ಸಂಸ್ಥೆಯ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವಿಭಾಗದ ಅಪರ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ವಿಶೇಷ ಅಯುಕ್ತ ರಂಗಪ್ಪ ಅವರ ಕಚೇರಿಯಲ್ಲಿಯೂ ಸಹ ಪೊಲೀಸರು ಶೋಧ ನಡೆಸಿದ್ದಾರೆ. ಈ ವೇಳೆ ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನೂ ಚಿಲುಮೆ ಎನ್ಜಿಒ ವಿರುದ್ದ ಹಲಸೂರು ಗೇಟ್ ಪೊಲೀಸ್ ಠಾಣೆ ಮತ್ತು ಕಾಡುಗೊಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಈವರೆಗೆ ಯಾವುದೇ ಬಿಬಿಎಂಪಿ ಕಂದಾಯ ಅಧಿಕಾರಿಗಳನ್ನು ಬಂಧಿಸಿಲ್ಲ ಎಂದು ಬಿಬಿಎಂಪಿ ಉನ್ನತ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಂತೆಯೇ ವಿವರವಾದ ವರದಿ ಸಲ್ಲಿಸುವಂತೆ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಅಧಿಕಾರಿಗಳ ಪಾತ್ರ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ವಿಶೇಷ ಆಯುಕ್ತ ಎಸ್ ರಂಗಪ್ಪ ಅವರು ಆರು ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಪಾಲಿಕೆಯ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಅಂತೆಯೇ ಚಿಲುಮೆಯೊಂದಿಗೆ ಭಾಗಿಯಾದ ಆರೋಪವನ್ನು ತಳ್ಳಿಹಾಕಿದ್ದಾರೆ. ಗುರುತಿನ ಚೀಟಿಗೆ ಸಹಿ ಹಾಕಿದ ಆರೋಪದಲ್ಲಿ ಕರ್ತವ್ಯಲೋಪ ಎಸಗಿದ ಕಾರಣ ಮಹದೇವಪುರ ವಲಯದ ಚಂದ್ರಶೇಖರ ಎಆರ್ಒ ಅವರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನೂ ತನಿಖೆ ನಡೆಯುತ್ತಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಇನ್ನೂ ಮತದಾರರ ಮಾಹಿತಿ ಕಳವು ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ತಲೆಮರೆಸಿಕೊಂಡ ಚಿಲುಮೆ ಸಂಸ್ಥೆಯ ವ್ಯವಸ್ಥಾಪಕರ ಪತ್ತೆಗಾಗಿ ಖಾಕಿ ಹುಡುಕಾಟ ನಡೆಸಿದೆ. ಇನ್ನೂ ಬೀಗ ಹಾಕಿರುವ ಚಿಲುಮೆ ಸಂಸ್ಥೆ ಕಚೇರಿಗೆ ಪೊಲೀಸರನ್ನ ಕಾವಲಿಗೆ ನಿಯೋಜಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.