ಸದ್ಯದಲ್ಲೇ ಮನೆಯ ಬಾಗಿಲಿಗೆ ಅನ್ನಭಾಗ್ಯದ ಅಕ್ಕಿ: ಈ ಯೋಜನೆಗೆ ಯಾರ್ಯಾರು ಅರ್ಹರು..?
ಬೆಂಗಳೂರು, ಅಕ್ಟೋಬರ್ 17: ರಾಜ್ಯದಲ್ಲಿ ಯಾರೋಬ್ಬರೂ ಹಸಿವಿನಿಂದ ಇರಬಾರದು ಎಂದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಮತ್ತೊಂದು ಜನರಿಗೆ ಅನುಕೂಲಕರವಾದ ವ್ಯವಸ್ಥೆಗೆ ಮುಂದಾಗಿದ್ದಾರೆ.
ಅನ್ನಭಾಗ್ಯದ ಉಚಿತ ಅಕ್ಕಿ ಜೊತೆಗೆ ಶೀಘ್ರದಲ್ಲಿಯೇ ಅನ್ನಭಾಗ್ಯ ಡೋರ್ ಡೆಲಿವರಿ ಸರ್ವಿಸ್ ಸಿಗಲಿದ್ದು ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರದಿಂದ ಹೊಸ ಉಡುಗೊರೆ ದೊರೆಯಲಿದೆ. ಹಾಗಿದ್ದರೆ ಅನ್ನಭಾಗ್ಯದ ಅಕ್ಕಿಯನ್ನು ಸರ್ಕಾರ ನೇರವಾಗಿ ಮನೆಬಾಗಿಲಿಗೆ ತಲುಪಿಸುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.

5 ಕೆಜಿ ಅಕ್ಕಿ ಬದಲು ದುಡ್ಡು ಹಾಕುವ ಅನ್ನಭಾಗ್ಯ ಹಣದ ಯೋಜನೆ ಈ ತಿಂಗಳು ಮುಂದುವರೆಯುವ ಸಾಧ್ಯತೆ ಇದೆ. ಇದರ ಮಧ್ಯೆ ಆಹಾರ ಇಲಾಖೆ ಮಗದೊಂದು ಸಿಹಿಸುದ್ದಿ ಕೊಟ್ಟಿದೆ. ಶೀಘ್ರದಲ್ಲಿಯೇ ಅನ್ನಭಾಗ್ಯದ ಡೋರ್ ಡೆಲಿವರಿ ಸರ್ವಿಸ್ ಆರಂಭವಾಗಲಿದೆ.
ಹಾಗಂತ ಎಲ್ಲರಿಗೂ ಈ ಸೇವೆ ಲಭ್ಯ ಇರುವುದಿಲ್ಲ. ಬದಲಾಗಿ 60 ವರ್ಷ ಮೇಲ್ಪಟ್ಟ ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ಹಾಗೂ ಅವ ಮನೆಯಲ್ಲಿ ಒಬ್ಬರೇ ಇದ್ದರೆ ಅಂದರೆ ಪಡಿತರ ಚೀಟಿ ಪ್ರಕಾರ ಒಬ್ಬರೇ ಸದಸ್ಯರಾಗಿದ್ದರೆ, ಅವರ ಮನೆಬಾಗಿಲಿಗೆ ಅನ್ನಭಾಗ್ಯದ ಅಕ್ಕಿ ಹಾಗೂ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಇತರ ಸೌಲಭ್ಯವನ್ನು ತಲುಪಿಸುವ ಕೆಲಸವನ್ನು ಶೀಘ್ರದಲ್ಲಿಯೇ ಮಾಡಲಾಗುತ್ತದೆ.
ರಾಜ್ಯಾದ್ಯಂತ ಕೆಲವೇ ದಿನದಲ್ಲಿ ಈ ಯೋಜನೆಗೆ ಚಾಲನೆ ಸಿಗಲಿದೆ. ಸದ್ಯ ಕರ್ನಾಟಕದಲ್ಲಿ ಒಟ್ಟು 10 ಸಾವಿರ ರೇಷನ್ ಕಾರ್ಡ್ನಲ್ಲಿ 60 ವರ್ಷ ಮೇಲ್ಪಟ್ಟ ಏಕಸದಸ್ಯರಿರುವ ಪಡಿತರ ಚೀಟಿ ಹೊಂದಿರುವವರು ಇದ್ದಾರೆ. ಈ ತಿಂಗಳಲ್ಲಿಯೇ ಈ ಯೋಜನೆ ಜಾರಿಗೆ ಆಹಾರ ಇಲಾಖೆ ಪ್ರಯತ್ನ ಪಡುತ್ತಿದೆ. ನಿಜವಾಗಿಯೂ ಇದು ಉತ್ತಮ ಜನಸ್ನೇಹಿ ಯೋಜನೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಯಾವುದೇ ವಿಳಂಬವಾಗದೇ ಈ ಯೋಜನೆ ಜಾರಿಯಾದರೆ ವಯಸ್ಸಾದ ವೃದ್ಧರಿಗೆ ಬಹಳಷ್ಟು ಸಹಾಯವಾಗಲಿದೆ.












Click it and Unblock the Notifications