ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ರಾಜ್ಯದಲ್ಲಿ ರೈತ ಸಮಾವೇಶ: ಚುಕ್ಕಿ ನಂಜುಂಡಸ್ವಾಮಿ
ಬೆಂಗಳೂರು, ಫೆ. 19: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ತಮ್ಮದೇ ಆದ ರೀತಿಯಲ್ಲಿ ಬಲ ತುಂಬಲು ರಾಜ್ಯ ರೈತ ಸಂಘ ಹಾಗೂ ಹಸಿರುವ ಸೇನೆ ತೀರ್ಮಾನಿಸಿದೆ. ಈ ಕುರಿತು ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿರುವ ರೈತರ ಸಂಘದ ಹಿರಿಯ ಮುಖಂಡರಾದ ಚಿಕ್ಕಿ ನಂಜುಂಡಸ್ವಾಮಿ, ಕೆ.ಟಿ. ಗಂಗಾಧರ್ ಅವರು ಕೇಂದ್ರದ ಮೂರು ರೈತ ವಿರೋಧಿ ಕಾನೂನುಗಳನ್ನು ನಮ್ಮ ರಾಜ್ಯದಲ್ಲಿಯೂ ಬಲಗೊಳಿಸಬೇಕಾಗಿದೆ ಎಂದಿದ್ದಾರೆ.
ರೈತ ಚಳುವಳಿಯನ್ನು ಕರ್ನಾಟಕದಲ್ಲಿಯೂ ವಿಸ್ತರಿಸಲು ರೈತ ಸಂಘ ತೀರ್ಮಾನಿಸಿದ್ದು, ಮೊದಲ ಸಮಾವೇಶ ಮಾರ್ಚ್ 20 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿದೆ. ನಂತರ ಮಾರ್ಚ್ 21ರಂದು ಹಾವೇರಿ ಜಿಲ್ಲೆಯಲ್ಲಿ ಹಾಗೂ ಮಾರ್ಚ್ 22ರಂದು ಬೆಳಗಾವಿ ಜಿಲ್ಲೆಯಲ್ಲಿ ಸಮಾವೇಶ ನಡೆಯಲಿವೆ. ಭಾರತೀಯ ಕಿಸಾನ್ ಯೂನಿಯನ್ನ ರಾಕೇಶ್ ಟಿಕಾಯತ್ ಅವರ ಉಪಸ್ಥಿತಿಯಲ್ಲಿ ಮೂರು ಜಿಲ್ಲೆಗಳಲ್ಲಿ ರೈತ ಸಮಾವೇಶಗಳು ನಡೆಯಲಿದೆ ಎಂದು ರೈತ ಸಂಘಟನೆಯ ಹಿರಿಯ ನಾಯಕರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚುಕ್ಕಿ ನಂಜುಂಡಸ್ವಾಮಿ ಅವರು, ಕೇಂದ್ರದ ಜನವಿರೋಧಿ ಧೋರಣೆ ಬೆಲೆ ಏರಿಕೆಯಲ್ಲಿ ಕಾಣುತ್ತಿದೆ. ಕೇಂದ್ರದ ಜೊತೆಗೆ ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಹಾಗೂ ಗೋ ಹತ್ಯೆ ನಿಷೇಧ ಕಾನೂನುಗಳ ವಿರುದ್ಧ ಚಳುವಳಿಯನ್ನು ತೀವ್ರಗೊಳಿಸಬೇಕಿದೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ರೈತರ ವಿರೋಧಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ರೈತರು ಮಾಡುತ್ತಿರುವ ಪ್ರತಿಭಟನೆ 87ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ಮಾಡುತ್ತಿದ್ದ 130 ರೈತರು ಹುತಾತ್ಮರಾಗಿದ್ದಾರೆ. ಆದರೂ ಕೇಂದ್ರ ಸರ್ಕಾರ ರೈತರ ಒತ್ತಾಯಗಳಿಗೆ ಸ್ಪಂಧಿಸುತ್ತಿಲ್ಲ.
ಈ ಮಧ್ಯೆ ದೆಹಲಿ ಗಡಿಯಲ್ಲಿ ರಸ್ತೆಗೆ ಮೊಳೆಗಳನ್ನು ಹೊಡೆದು, ಮುಳ್ಳು ಬೇಲಿಗಳನ್ನು ಕೇಂದ್ರ ಸರ್ಕಾರ ಹಾಕಿದೆ. ಆ ಕಾನೂನುಗಳು ಸಂಫೂರ್ಣವಾಗಿ ಜಾರಿಯಾದಲ್ಲಿ ನಾವು ನಮ್ಮ ಆಹಾರದ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತೇವೆ ಎಂದು ಚುಕ್ಕಿ ನಂಜುಂಡಸ್ವಾಮಿ ಅವರು ವಿವರಿಸಿದರು.
ದೆಹಲಿ ಹೋರಾಟಗಾರರಿಗೆ ಹಸಿರು ಶಾಲುಗಳು: ದೆಹಲಿ ಗಡಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಟ ನಡೆಸುತ್ತಿರುವ ರೈತರಿಗೆ ರಾಜ್ಯದ ರೈತರ ಘನತೆಯ ಸಂಕೇತವಾಗಿರುವ ಹಸಿರು ಶಾಲುಗಳನ್ನು ಕಳುಹಿಸುವ ಮೂಲಕ ಹೋರಾಟಕ್ಕೆ ಚೈತನ್ಯ ತುಂಬಲು ಹಾಗೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ರೈತರ ನಡುವೆ ಸಹೋದರತ್ವ ಬೆಸೆಯಲು ತೀರ್ಮಾನ ಮಾಡಲಾಗಿದೆ. ಆ ಮೂಲಕ ಉತ್ತರ ಭಾರತದ ರೈತರು ಒಬ್ಬಂಟಿಯಲ್ಲ ಎಂಬ ಸಂದೇಶ ರವಾನಿಸಲು ತೀರ್ಮಾನ ಮಾಡಲಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ತಿಳಿಸಿದ್ದಾರೆ.