ಕೋಟ್ಯಧಿಪತಿಯಲ್ಲಿ 'ಕೇಳದ' ಈ ಪ್ರಶ್ನೆ, ಸಾಮಾಜಿಕ ತಾಣದಲ್ಲಿ ಫುಲ್ ವೈರಲ್
ಬೆಂಗಳೂರು, ಸೆ 9: ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ, ಪುನೀತ್ ರಾಜಕುಮಾರ್ ನಡೆಸಿಕೊಡುವ, 'ಕನ್ನಡದ ಕೋಟ್ಯಧಿಪತಿ'ಯ ಭಾನುವಾರದ (ಸೆ 8) ಎಪಿಸೋಡ್, ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಭಾನುವಾರದ ಕಾರ್ಯಕ್ರಮದಲ್ಲಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಎಂಪಿ ತೇಜಸ್ವಿ ಸೂರ್ಯ ಭಾಗವಹಿಸಿದ್ದರು.
ಕೋಟ್ಯಧಿಪತಿಯಲ್ಲಿ ತೇಜಸ್ವಿ ಸೂರ್ಯ-ಪ್ರತಾಪ್ ಸಿಂಹಗೆ ಕೈಕೊಟ್ಟ ಪ್ರಶ್ನೆ ಇದೇ
ಈ ಕಾರ್ಯಕ್ರಮದಲ್ಲಿ ಬರುವ ಮೊತ್ತವನ್ನು, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲಕ ನೀಡುವುದು, ಈ ಇಬ್ಬರು ಸಂಸದರ ಉದ್ದೇಶ.
ಕಾರ್ಯಕ್ರಮದಲ್ಲಿ, ' ವಾಸ್ಕೋಡಿಗಾಮ ಭಾರತಕ್ಕೆ ಯಾವ ಹಡಗಿನಲ್ಲಿ ಬಂದ' ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿಲ್ಲದೇ ಇರುವ ಕಾರಣಕ್ಕಾಗಿ, ಇಬ್ಬರೂ, ಕಾರ್ಯಕ್ರಮದಿಂದ 'ಕ್ವಿಟ್' ಆದರು. ಗೆದ್ದ ಮೊತ್ತವಾದ 12.5 ಲಕ್ಷ ರೂಪಾಯಿಯ ಚೆಕ್ ಅನ್ನು ಪಡೆದುಕೊಂಡರು.
ಇಷ್ಟೆಲ್ಲಾ ಕಣ್ಮುಂದೆ ನಡೆದಂತಹ ಕಾರ್ಯಕ್ರಮ. ಆದರೆ, ಕಾರ್ಯಕ್ರಮದಲ್ಲಿ ಕೇಳದೇ ಇರುವಂತಹ ಪ್ರಶ್ನೆಯೊಂದು, ಸಾಮಾಜಿಕ ತಾಣದಲ್ಲಿ ಫುಲ್ ವೈರಲ್ ಆಗಿದೆ.
ಸಂತ್ರಸ್ತರ ಬದುಕು ಬದಲಾಯಿಸುತ್ತ 'ಮನರಂಜನೆ' ಆಟದಲ್ಲಿ ಗೆದ್ದ 12.5 ಲಕ್ಷ?
ಇದು, ಇಬ್ಬರು ಬಿಜೆಪಿ ಸಂಸದರ ಮೂಲಕ, ಮೋದಿ ಸರಕಾರವನ್ನು, ಕೆಣಕುವ ಉದ್ದೇಶದಿಂದಲೇ, ಫೋಟೋಶಾಪ್ ಮೂಲಕ ಎಡಿಟ್ ಮಾಡಿ, ಸಾಮಾಜಿಕ ತಾಣದಲ್ಲಿ ಹರಿಯ ಬಿಟ್ಟದ್ದು ಎನ್ನುವುದು ಅತ್ಯಂತ ಸ್ಪಷ್ಟ. ಆದರೂ, ಫೋಟೋಶಾಪ್ ಮಾಡಿದವನ ಸಮಯಪ್ರಜ್ಞೆಯ ಈ ಪೋಸ್ಟ್, ವಸ್ತುಸ್ಥಿತಿಗೆ ಹಿಡಿದ ಕನ್ನಡಿಯಂತಿರುವುದಂತೂ ಹೌದು.
ಎಡಿಟ್ ಮಾಡಿರುವ ಪ್ರಶ್ನೆ ಮತ್ತು ಅದಕ್ಕೆ ನೀಡಲಾದ ನಾಲ್ಕು ಆಯ್ಕೆಗಳು ಹೀಗಿದೆ:
ಕೇಂದ್ರದ ಮೋದಿ ಸರಕಾರದಿಂದ ಕರ್ನಾಟಕ ನೆರೆ ಪೀಡಿತ ಪ್ರದೇಶಕ್ಕೆ ಎಷ್ಟು ಪರಿಹಾರ ಕೊಟ್ಟಿದ್ದಾರೆ?
A - 0: B - 5ಕೋಟಿ : C - 50 ಕೋಟಿ : D - 5 ಸಾವಿರ ಕೋಟಿ
ಇದಕ್ಕೆ ಇಬ್ಬರು ಸ್ಪರ್ಧಿಗಳಾದ ಪ್ರತಾಪ್ ಸಿಂಹ ಮತ್ತು ಜೇಜಸ್ವಿ ಸೂರ್ಯ, ಆಯ್ಕೆ 'A' ಅನ್ನು ಲಾಕ್ ಮಾಡುತ್ತಾರೆ, ಅದು ಸರಿಯಾದ ಉತ್ತರ ಎಂದು ಕಂಪ್ಯೂಟರ್ ತೋರಿಸುತ್ತದೆ.