ಹಲಾಲ್ ಮಾಂಸ ನಿಷೇಧಿಸುವ ಮಸೂದೆ ತರಲು ಚಿಂತನೆ
ಬೆಂಗಳೂರು, ಡಿಸೆಂಬರ್ 19: ಬೆಳಗಾವಿಯಲ್ಲಿ ಆರಂಭವಾಗಿರುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸುವ ಹಲಾಲ್ ವಿರೋಧಿ ಮಸೂದೆಯನ್ನು ಪರಿಚಯಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಎಫ್ಎಸ್ಎಸ್ಎಐ ಹೊರತುಪಡಿಸಿ ಯಾವುದೇ ಸಂಸ್ಥೆಯಿಂದ ಆಹಾರ ಪ್ರಮಾಣೀಕರಣವನ್ನು ನಿಷೇಧಿಸುವ ಮಸೂದೆಯನ್ನು ತರಲು ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ಉಪಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ವರ್ಷ ಮಾರ್ಚ್ನಲ್ಲಿ ಯುಗಾದಿ ಹಬ್ಬದಂದು ಹಲಾಲ್ ಮಾಂಸವನ್ನು ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳು ಕರೆ ನೀಡಿದ ನಂತರ ಹಲಾಲ್ ಮಾಂಸದ ವಿಷಯವು ಸಮಾಜದಲ್ಲಿ ಅಶಾಂತಿಯನ್ನು ಹುಟ್ಟುಹಾಕಿತ್ತು.
ರವಿಕುಮಾರ್ ಅವರು ಖಾಸಗಿ ಮಸೂದೆಯನ್ನು ಮಂಡಿಸಲು ಯೋಜಿಸಿ ಕಾರ್ನಾಟಕ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ಗೆ ಪತ್ರ ಬರೆದಿದ್ದರು. ಆದರೆ, ಈಗ ಅದನ್ನು ಸರ್ಕಾರದ ಮಸೂದೆಯಾಗಿ ಮಂಡಿಸಲು ಮುಂದಾಗಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಹಲಾಲ್ ಮಾಂಸ ವಿರೋಧಿ ಶಾಸನವನ್ನು ತರಲು ಬಿಜೆಪಿ ಯೋಜಿಸುತ್ತಿದೆ. ಇದು ಚುನಾವಣೆ ಬರಲಿರುವ ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಮುಖಾಮುಖಿಗೆ ವೇದಿಕೆಯಾಗಿದೆ. ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ಇದನ್ನು ಖಾಸಗಿ ಮಸೂದೆಯಾಗಿ ತರಲು ಯೋಜಿಸಿದ್ದರು. ಆದರೆ ಈಗ ಪಕ್ಷದ ನಾಯಕತ್ವವು ಅದರ ಅಧಿಕೃತ ಶಾಸನವಾಗಲು ಆದ್ಯತೆ ನೀಡಿದೆ ಎಂದು ವರದಿಯಾಗಿದೆ.

ಕಾನೂನುಬಾಹಿರವಾಗಿ ಮಾರುಕಟ್ಟೆ ನಿಯಂತ್ರಣ
ರವಿಕುಮಾರ್ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕೆಲವು ಅನಧಿಕೃತ ಸಂಸ್ಥೆಗಳು ಆಹಾರ ಉತ್ಪನ್ನಗಳನ್ನು ಪ್ರಮಾಣೀಕರಿಸುವಲ್ಲಿ ತೊಡಗಿವೆ. ಆದ್ದರಿಂದ ಕಾನೂನುಬಾಹಿರವಾಗಿ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ. ಇದನ್ನು ತಡೆಯುವ ಉದ್ದೇಶದಿಂದ, ಮಸೂದೆಯು ಪ್ರಕ್ರಿಯೆಯಲ್ಲಿ ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು ಎಂದು ಡಿಎಚ್ ವರದಿ ಮಾಡಿದೆ.

ಬಿಜೆಪಿಯೊಂದಿಗೆ ಕಾಂಗ್ರೆಸ್ ವಾಗ್ವಾದ
ವಿಧಾನಸಭೆಯಲ್ಲಿ ಖಜಾನೆ ಮತ್ತು ವಿರೋಧ ಪಕ್ಷದ ಪೀಠಗಳ ನಡುವೆ ಮಾತಿನ ಸಮರಕ್ಕೆ ಸಿದ್ಧವಾಗಲಿದೆ. ಹಿಂದಿನ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ವಿರೋಧಿ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿಯೊಂದಿಗೆ ಕಾಂಗ್ರೆಸ್ ವಾಗ್ವಾದ ನಡೆಸಿತ್ತು. ಈ ಬಾರಿಯೂ ಅಂತಹ ದೃಶ್ಯಗಳನ್ನು ನಿರೀಕ್ಷಿಸಲಾಗಿದೆ. ಹಲಾಲ್ ಖಾಸಗಿ ಮಸೂದೆಗೆ ಅನುಮೋದನೆ ನೀಡದಂತೆ ಕೌನ್ಸಿಲ್ ಅಧ್ಯಕ್ಷರನ್ನು ಒತ್ತಾಯಿಸುತ್ತೇವೆ ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ಬಿಜೆಪಿಯ ಕಾರ್ಯತಂತ್ರ ಅರ್ಥೈಸಿಕೊಂಡಿದ್ದೇವೆ
ವಿಧಾನಸಭೆಯಲ್ಲೂ ಮಸೂದೆಯನ್ನು ವಿರೋಧಿಸಲು ಕಾಂಗ್ರೆಸ್ ಸಿದ್ಧವಾಗಿದೆ. ಬಿಜೆಪಿಯ ಕಾರ್ಯತಂತ್ರವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅದರ ವೈಫಲ್ಯ, ಭ್ರಷ್ಟಾಚಾರ ಮತ್ತು ಮತದಾರರ ಡೇಟಾ ಕಳ್ಳತನದಂತಹ ವಿಷಯಗಳಿಂದ ಸಾರ್ವಜನಿಕ ಗಮನವನ್ನು ಬೇರೆಡೆಗೆ ಸೆಳೆಯಲು ಅದು ಬಯಸಿದೆ. ಹಲಾಲ್ ವಿರೋಧಿ ಮಸೂದೆಯು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರನ್ನು ಕೋಮುವಾದದ ಆಧಾರದ ಮೇಲೆ ಧ್ರುವೀಕರಿಸುವ ಗುರಿಯನ್ನು ಹೊಂದಿದೆ ಎಂದು ವಿಧಾನಸಭೆಯ ಕಾಂಗ್ರೆಸ್ ಉಪನಾಯಕ ಯು ಟಿ ಖಾದರ್ ಹೇಳಿದ್ದಾರೆ.

ವಿಧೇಯಕಗಳಿಗೆ ಸಂಪುಟ ಒಪ್ಪಿಗೆ ನೀಡಬೇಕಿದೆ
ಅಲ್ಲದೆ, ಎಸ್ಸಿ, ಎಸ್ಟಿಗಳ ಕೋಟಾದ ಪ್ರಮಾಣವನ್ನು ಹೆಚ್ಚಿಸುವುದು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವುದು ಸೇರಿದಂತೆ 14 ಮಸೂದೆಗಳನ್ನು ತರಲು ಸರ್ಕಾರ ಮುಂದಾಗಿದೆ. ಇನ್ನು ಕೆಲವು ವಿಧೇಯಕಗಳಿಗೆ ಸಂಪುಟ ಒಪ್ಪಿಗೆ ನೀಡಬೇಕಿದೆ. ಈ ಅಧಿವೇಶನದಲ್ಲಿ ಪ್ರಸ್ತಾವಿತ ಎಲ್ಲಾ ವಿಧೇಯಕಗಳನ್ನು ಪಡೆಯುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ಈ ಅಧಿವೇಶನದಲ್ಲಿ ಪರಿಷತ್ತಿನ ಅಧ್ಯಕ್ಷ ಮತ್ತು ಉಪ ಸಭಾಪತಿ ಮತ್ತು ವಿಧಾನಸಭೆಯ ಉಪಸಭಾಪತಿ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ.












Click it and Unblock the Notifications