ಮೂಡಿಗೆರೆಯ ಬಾನಹಳ್ಳಿಯಲ್ಲಿ ಅಲುಗಾಡಿದ ಹುತ್ತ, ಭಕ್ತರಲ್ಲಿ ಪುಳಕ
ಮೂಡಿಗೆರೆ, ನವೆಂಬರ್04: ಹುತ್ತಕ್ಕೆಪೂಜೆ ಸಲ್ಲಿಸಿ ಮಂತ್ರಘೋಷ ಆಗುತ್ತಿದ್ದಂತೆಯೇ, ಹುತ್ತದ ಮೇಲಿಟ್ಟಿದ್ದ ಕಳಶ ಬಾಹ್ಯ ಒತ್ತಡಿವಿಲ್ಲದೇ ತನ್ನಂತಾನೇ ಅಲುಗಾಡಲು ಪ್ರಾರಂಭವಾಯಿತು. ಈ ಪವಾಡವನ್ನು ನೋಡಲೆಂದೇ ಸೇರಿದ್ದ ಭಕ್ತಸಮೂಹದಲ್ಲಿ ಆ ಕ್ಷಣದಲ್ಲಿ ಹರ್ಷೋದ್ಘಾರ. ಭಕ್ತಿ ಭಾವದ ಪುಳಕ.
ಮೂಡಿಗೆರೆ ತಾಲ್ಲೂಕಿನ ಬಾನಹಳ್ಳಿ ಗ್ರಾಮದಲ್ಲಿ ನಡೆಯುವ ಉಣ್ಣಕ್ಕಿ ಜಾತ್ರೆಯ ಪ್ರಮುಖ ಆಕರ್ಷಣೆಯೇ ಈ ಹುತ್ತ ಅಲುಗಾಡುವ ಪವಾಡ. ಈ ಬಾರಿ ನವೆಂಬರ್ ೦2 ಗುರುವಾರ ರಾತ್ರಿ ನಡೆದ ಜಾತ್ರಾ ಮಹೋತ್ಸವದಲ್ಲಿ ಹುತ್ತ ಅಲುಗಾಡುವ ಪವಾಡ ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದರು. ಪ್ರತಿ ಬಾರಿಯಂತೆ ಈ ಬಾರಿಯೂ 4 ಬಾರಿ ಅಲುಗಾಡಿದ ಹುತ್ತ ತನ್ನ ಶಕ್ತಿಯನ್ನು ಸಾರಿತು.(ಚಿತ್ರಕೃಪೆ: ಸಂಜಯ್ ಗೌಡ, ಕೊಟ್ಟಿಗೆಹಾರ)

ಹುತ್ತ ಅಲುಗಾಡಿದ ನಂತರ
ಹುತ್ತ ಅಲುಗಾಡಿದ ನಂತರ ಉಪವಾಸ ವ್ರತ ಕೈಗೊಂಡಿದ್ದ ಗೋಪಾಲಕನ ನೇತೃತ್ವದಲ್ಲಿ ಕರುವನ್ನು ತಂದು ಅದರ ಕಿವಿ ಚುಚ್ಚಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ನಡೆಸಿ ಕರುವಿನ ಮೆರವಣಿಗೆ ನಡೆಸಲಾಯಿತು. ಕರುವಿನ ಮೇಲೆ ಕಡ್ಲೆಪುರಿ ಎರಚುವ ಮೂಲಕ ಭಕ್ತರು ಹರಕೆ ಸಮರ್ಪಿಸಿದರು. ಬಾನಹಳ್ಳಿ, ಬಗ್ಗಸಗೋಡು, ಚಕ್ಕಮಕ್ಕಿ, ಹೊರಟ್ಟಿ, ಕೆಂಜಿಗೆ ಸೇರಿದಂತೆ ವಿವಿಧ ಗ್ರಾಮಗಳ ಜನತೆ ಜಾತ್ರೆ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಸುಮಾರು 300 ವರ್ಷಗಳ ಇತಿಹಾಸ
ಇತಿಹಾಸ: ಸುಮಾರು 300 ವರ್ಷಗಳ ಹಿಂದೆ ದನ ಮೇಯಿಸಲು ಹೋಗುತ್ತಿದ್ದ ಮಕ್ಕಳು ಇಲ್ಲಿದ್ದ ಗೆದ್ದಲಿನ ಹುತ್ತಕ್ಕೆ ಮಣ್ಣಿನ ಲೇಪ ಮಾಡಿ ಪ್ರತಿ ದಿನ ತಮ್ಮ ದನಗಳನ್ನು ಕಾಪಾಡುವಂತೆ ಬೇಡುತ್ತಿದ್ದರು, ದೀಪಾವಳಿಯ ನಂತರದ ಹುಣ್ಣಿಮೆಯಲ್ಲಿ ರಾತ್ರಿ ವೇಳೆ ಸರಿಯಾಗಿ 8.30ಕ್ಕೆ ಗ್ರಾಮದವರೆಲ್ಲ ಸೇರಿ ವಿಶೇಷ ಪೂಜೆ ಸಲ್ಲಿಸಿದ ನಂತರ ಎಲ್ಲರಿಗೂ ಗೋಚರಿಸುವಂತೆ ನಾಲ್ಕಾರು ಬಾರಿ ಅಲುಗಾಡುತ್ತದೆ ಎಂಬುದು ಪ್ರತೀತಿ.

ಪ್ರತಿ ವರ್ಷ ಗ್ರಾಮದ ಒಂದೊಂದು ಮನೆ
ಹಿಂದಿನಿಂದ ಪ್ರತಿ ವರ್ಷ ಗ್ರಾಮದ ಒಂದೊಂದು ಮನೆಯವರು ಅಂದು ಹಸಿದುಕೊಂಡೆ ಇದ್ದು ತಮ್ಮ ಮನೆಯ ಒಂದು ಕರುವಿನ ಕಿವಿಯ ಸಣ್ಣ ಚರ್ಮ ತೆಗೆದು ದೇವಾಲಯದ ಸುತ್ತ 3 ಬಾರಿ ಸುತ್ತಿಸುತ್ತಾರೆ. ಆಗ ನೆರದಿದ್ದ ಸಾವಿರಾರು ಭಕ್ತರಿಂದ ನೂರಾರು ಕೆಜಿ ಮಂಡಕ್ಕಿ ಎರಚಿ ತಮ್ಮ ಹರಕೆ ಪೂರೈಸುವುದು ಇಲ್ಲಿ ನಡೆದುಕೊಂಡು ಬಂದಿರುವ ವಾಡಿಕೆ.

ಗ್ರಾಮಸ್ಥರ ಮನೆಯಿಂದ
ನಂತರ ಗ್ರಾಮಸ್ಥರ ಮನೆಯಿಂದ ಸಂಗ್ರಹಿಸಿದ ಹಾಲು ಮತ್ತು ಅಕ್ಕಿಯಿಂದ ತಯಾರಿಸಿದ ವಿಶೇಷ 'ಮಡೆಅನ್ನ'ವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಇಲ್ಲಿ ಬೇಡಿದ ಹರಕೆ ನೆರವೇರುತ್ತಿದ್ದು ಭಕ್ತಾದಿಗಳು ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತಿದ್ದಾರೆ.












Click it and Unblock the Notifications