Temple Fee Hike: ಬಿಜೆಪಿ ಅವಧಿಯಲ್ಲೇ 24 ದೇವಾಲಯಗಳ ಪೂಜಾ ಶುಲ್ಕ ಹೆಚ್ಚಳ: ರಾಮಲಿಂಗಾ ರೆಡ್ಡಿ
ಕಾಂಗ್ರೆಸ್ ಸರ್ಕಾರ ಬಂದು ಅನೇಕ ತೆರಿಗೆಗಳನ್ನು ಹೆಚ್ಚಳ ಮಾಡಿದೆ. ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಶ್ಲೇಷ ಪೂಜೆ ದರ ಹೆಚ್ಚಿಸಿದ್ದನ್ನು ವಿಪಕ್ಷ ನಾಯಕರು ಖಂಡಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ರಾಜ್ಯ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಿಜೆಪಿ ಅವಧಿಯಲ್ಲಿ 24 ಹಿಂದೂ ದೇವಾಲಯಗಳ ಪೂಜಾ ಸೇವಾ ಶುಲ್ಕ ಹೆಚ್ಚಳ ಮಾಡಿದ್ದರ ಪಟ್ಟಿ ನೀಡಿ ತಿರುಗೇಟು ಕೊಟ್ಟಿದ್ದಾರೆ.
ಈ ವಿಚಾರದಲ್ಲಿ ಆರೋಪಿಸುತ್ತಿರುವ ಬಿಜೆಪಿ ನಾಯಕರ ಬೌದ್ಧಿಕ ಅಧಃಪತನದ ಪರಾಮಾವಧಿ ಸೂಚಿಸುತ್ತದೆ. ಧರ್ಮದ ಹೆಸರಲ್ಲಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ಹತಾಶ ಪ್ರಯತ್ನ ಮಾಡುತ್ತಿದ್ದಾರೆ. ಧರ್ಮ ರಕ್ಷಣೆಗಾಗಿಯೇ ಅಧಿಕಾರಕ್ಕೆ ಬಂದವರು ನಾವು ಎನ್ನುವ 'ನಕಲಿ ಧರ್ಮರಕ್ಷಕ' ಬಿಜೆಪಿ ಸರ್ಕಾರದ ಅವಧಿಯಲ್ಲಿ ಹತ್ತಾರು ಹಿಂದೂ ದೇವಾಲಯಗಳಲ್ಲಿನ ಪೂಜೆ ಸೇವಾ ಶುಲ್ಕ ಹೆಚ್ಚಾಗಿದೆ ಎಂದು ವಿವರಿಸಿದರು.

ಈ ಹಿಂದೆ ಅಧಿಕಾರದಲ್ಲಿ ಕರ್ನಾಟಕ ಬಿಜೆಪಿ ನೇತೃತ್ವದ ಸರ್ಕಾರದ 2019-2023 ಅವಧಿಯಲ್ಲಿ ಒಟ್ಟು 24 ಹಿಂದೂ ದೇವಾಲಯಗಳ ಪೂಜಾ ಸೇವಾ ಶುಲ್ಕವನ್ನು ಏರಿಕೆ ಮಾಡಿದ್ದರು. ಇದು ಧರ್ಮ ವಿರೋಧಿ ನಡೆಯೇ? ಎಂದು ರಾಮಲಿಂಗಾ ರೆಡ್ಡಿ ಅವರು ಪ್ರಶ್ನಿಸಿದ್ದಾರೆ. ಜೊತೆಗೆ ಬಿಜೆಪಿ ಅವಧಿಯಲ್ಲಿ ಪೂಜೆ ಶುಲ್ಕ ಯಾವೆಲ್ಲ ದೇವಸ್ಥಾನಗಳಲ್ಲಿ ಹೆಚ್ಚಾಯಿತು ಎಂಬುದರ ಪಟ್ಟಿ ಕೊಟ್ಟಿದ್ದಾರೆ.
1. ಶ್ರೀ ವೀರಭದ್ರ ಸ್ವಾಮಿ ದೇವಾಲಯ, ನೆಲಮಂಗಲ ತಾಲ್ಲೂಕು
2. ಶ್ರೀ ಮಹಾಲಿಂಗೇಶ್ವರಸ್ವಾಮಿ ದೇವಾಲಯ, ಕವೂರು
3. ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯ, ದರೂರು ಗ್ರಾಮ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ
4. ಶ್ರೀ ಮೈಲಾರಲಿಂಗಸ್ವಾಮಿ ದೇವಾಲಯ, ಹೂವಿನಹಡಗಲಿ ತಾಲ್ಲೂಕು, ಬಳ್ಳಾರಿ
5. ಶ್ರೀ ಹೊಸೂರಮ್ಮ ದೇವಾಲಯ, ಹೊಸಪೇಟೆ ತಾಲ್ಲೂಕು, ಬಳ್ಳಾರಿ
6. ಶ್ರೀ ವಿಶ್ವೇಶ್ವರಸ್ವಾಮಿ ದೇವಾಲಯ, ಎಲ್ಲೂರು, ಕಾಪು ತಾಲ್ಲೂಕು, ಉಡುಪಿ
7. ಶ್ರೀಬೋಳರಾಮೇಶ್ವರಸ್ವಾಮಿ ದೇವಾಲಯ, ಚಿಕ್ಕಮಗಳೂರು ನಗರ
8. ಶ್ರೀ ಕೋಟಿಲಿಂಗೇಶ್ವರಸ್ವಾಮಿ ದೇವಾಲಯ, ಕುಂದಾಪುರ ತಾಲ್ಲೂಕು, ಉಡುಪಿ
9. ಶ್ರೀ ನಾಗೇಶ್ವರಸ್ವಾಮಿ ದೇವಾಲಯ, ಚನ್ನರಾಯಪಟ್ಟಣ, ಹಾಸನ
10. ಶ್ರೀ ಮಹಿಷಮರ್ಧಿನಿ ದೇವಾಲಯ, ಕಡಿಯಾಳಿ, ಉಡುಪಿ
11. ತಿಪಟೂರು ಕಿಬ್ಬನಹಳ್ಳಿ ರಜತಾದ್ರಿಪುರ ಹತ್ಯಾಳು ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾದೇವಾಲ. ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯ, ಕುಣಿಗಲ್ ತಾಲ್ಲೂಕು, ತುಮಕೂರು
12. ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯ, ಕುಣಿಗಲ್ ತಾಲ್ಲೂಕು, ತುಮಕೂರು
13. ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು, ನಾಗಲಮಡಿಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ
14. ಮೈಸೂರು ಜಿಲ್ಲೆ ನಂಜನಗೂಡು ತಾ. ಚಿಕ್ಕಯ್ಯನ ಛತ್ರದಲ್ಲಿರುವ ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಾಲಯ
15. ದ.ಕ. ಜಿಲ್ಲೆರವರ ಕೋರಿಕೆಯಂತೆ, ಕುತ್ಯಾರು ಶ್ರೀ ಸೋಮನಾಥೇಶ್ವರ ದೇ. ಬೆಳ್ತಂಗಡಿ
16. ಕನಕಪುರ ತಾಲ್ಲೂಕು ಸಾತನೂರು ಹೋಬಳಿ ಕಬ್ಬಾಳು ಗ್ರಾಮದ ಶ್ರೀ ಕಬ್ಬಾಳಮ್ಮ ದೇವಾಲಯ
17. ಬೆಂಗಳೂರು ನಗರ ಸಂಪಂಗಿರಾಮನಗರದಲ್ಲಿರುವ ಶ್ರೀ ಪ್ರಸನ್ನ ಗಣಪತಿ ಮತ್ತು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ
18. ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲ್ಲೂಕು, ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ
19. ಶ್ರೀ ಅಮೃತೇಶ್ವರಸ್ವಾಮಿ ದೇವಾಲಯ, ಬ್ರಹ್ಮಾವರ ತಾಲ್ಲೂಕು, ಉಡುಪಿ
20. ಶ್ರೀ ದೊಡ್ಡಗಣಪತಿ ಮತ್ತು ಸಮೂಹ ದೇವಾಲಯಗಳು, ಬಸವನಗುಡಿ, ಬೆಂಗಳೂರು.
21. ಶ್ರೀ ಕಾಶಿವಿಶ್ವೇಶ್ವರಸ್ವಾಮಿ ದೇವಾಲಯ, ಅಂತರಗಂಗೆ, ಕೋಲಾರ
22. ಚನ್ನಪಟ್ಟಣ ತಾಲ್ಲೂಕು, ವಂದಾರಗುಪ್ಪೆ ಗ್ರಾಮದ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ
23. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಎಡೆಯೂರು ಗ್ರಾಮದ ಶ್ರೀಶ್ರೀಸಿದ್ದಲಿಂಗೇಶ್ವರ ದೇವಾಲಯ
24. ಬೆಂಗಳೂರು ನಗರ ಜಿಲ್ಲೆ ಹನುಮಂತನಗರ ಶ್ರೀ ಕುಮಾರಸ್ವಾಮಿ ದೇವಾಲಯ ಶ್ರೀ ಪಂಚಮುಖಿ ಸನ್ನಿಧಿ ಮತ್ತು ಶ್ರೀ ಉದ್ಭವ ಆಧಿಶೇಷ ಸನ್ನಿಧಿ
ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ
ಕರ್ನಾಟಕದಲ್ಲಿ 35,554 ದೇವಸ್ಥಾಗಳ ಪೈಕಿ ವಿವಿಧ ಭಾಗಗಳ 14 ದೇವಸ್ಥಾನಗಳಲ್ಲಿ ಮಾತ್ರ ದೇವಾಲಯಗಳ ಸೇವಾಶುಲ್ಕ ಹೆಚ್ಚಳವಾಗಿದೆ. ಸಂಬಂಧಪಟ್ಟ 14 ದೇವಸ್ಥಾನಗಳ ಆಡಳಿತ ಮಂಡಳಿಗಳ ಕೋರಿಕೆ ಮೇರೆಗೆ ಈ ಸೇವಾ ಶುಲ್ಕ ಹೆಚ್ಚಳ ಮಾಡಿರುವುದನ್ನು ಗಮನಿಸಬೇಕು.
ಈ ದೇವಾಲಯಗಳ ಸೇವಾ ಶುಲ್ಕ ಸುಮಾರು 7 ರಿಂದ 15 ವರ್ಷಗಳ ಹಿಂದೆ ಪರಿಷ್ಕರಣೆ ಆಗಿತ್ತು. ಅದಾದ ಬಳಿಕ ಈಗ ಹೆಚ್ಚಿಸಲಾಗಿದೆ. ಈ ಬಗ್ಗೆ ನಿರ್ಣಯ ಕೈಗೊಂಡಿರುವುದು ಕೂಡ ದೇವಾಲಯಗಳ ವ್ಯವಸ್ಥಾಪನಾ ಸಮಿತಿ. ಹೊಸ ಸೇವಾಶುಲ್ಕದಿಂದ ಸಂಗ್ರಹವಾಗುವ ಹಣ ಕೂಡ ಅದೇ ದೇವಾಲಯಗಳ ನಿರ್ವಹಣೆ, ಅಭಿವೃದ್ಧಿಗೆ ಬಳಕೆಯಾಗಲಿದೆ. ಇಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವೇ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಹಿಂದು ಪರ' ಎನ್ನುವ ಮತ್ತು ಸದಾ ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಬಿಜೆಪಿ ನಾಯಕರು, ಇನ್ನಾದರೂ ತಮ್ಮ ಮುಖವಾಡವನ್ನು ಕಳಚಲಿ, ಧರ್ಮ- ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುವ ಇವರುಗಳಿಗೆ ಆ ದೇವರೇ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಲೇವಡಿ ಮಾಡಿದರು.












Click it and Unblock the Notifications