ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇಗುಲ ಪ್ರವೇಶ ಮಾಡಿದ್ದು ತಪ್ಪೆ?
Recommended Video
ಬೆಂಗಳೂರು, ಅಕ್ಟೋಬರ್ 23: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಇತರ ಸಂಪುಟ ಸಹೋದ್ಯೋಗಿಗಳು ಮಾಂಸಾಹಾರ ಸೇವಿಸಿದ ಬಳಿಕ ಧರ್ಮಸ್ಥಳ ದೇವಸ್ಥಾನ ಪ್ರವೇಶ ಮಾಡಿದ್ದಾರೆ ಎಂಬ ಸುದ್ದಿ ಸೋಮವಾರ ಹಬ್ಬಿದಷ್ಟೇ ವೇಗವಾಗಿ ಕಾವು ಕಳೆದುಕೊಂಡಿದೆ. ಮಾಂಸ ಸೇವಿಸಿ ದೇವಸ್ಥಾನ ಪ್ರವೇಶ ಮಾಡಬಾರದು ಎಂಬ ನಿಯಮ ನಮ್ಮಲ್ಲೇನೂ ಇಲ್ಲಎಂದು ದೇವಾಲಯದಿಂದಲೇ ಸ್ಪಷ್ಟನೆ ಬಂದಿದೆ.
ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಭಾನುವಾರ ಬಂಟ್ವಾಳದಲ್ಲಿ ಮೀನು ಊಟ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸುವ ಕಾರ್ಯಕ್ರಮಕ್ಕಾಗಿ ಧರ್ಮಸ್ಥಳಕ್ಕೆ ತೆರಳಿದ್ದರು.
ಯಡಿಯೂರಪ್ಪ ಮಿಷನ್-150ಈಗ ಮಿಷನ್-50 : ಸಿದ್ದರಾಮಯ್ಯ ವ್ಯಂಗ್ಯ
ಆ ಸಂದರ್ಭದಲ್ಲಿ ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ ಸಹ ಭೇಟಿ ನೀಡಿದ್ದರು. ಮಾಂಸಾಹಾರ ಸೇವನೆ ಬಳಿಕ ದೇವಾಲಯ ಪ್ರವೇಶ ಮಾಡುವುದು ನಿಷಿದ್ಧ ಎಂಬ ನಂಬಿಕೆ ಕೆಲವರಲ್ಲಿದೆ. ಸೋಮವಾರ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಯಿತು. ಆದರೆ ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಪ್ತ ಸಹಾಯಕರೇ ಸ್ಪಷ್ಟನೆ ನೀಡಿದ್ದಾರೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ವಿವಿಧ ವರ್ಗದ ಅಭಿಪ್ರಾಯವನ್ನು ಇಲ್ಲಿ ಕೊಡಲಾಗಿದೆ.
ಬಿ.ಮಂಜುನಾಥ್, ಖಾಸಗಿ ಕಂಪನಿ ಉದ್ಯೋಗಿ
ಕೆಲವು ದೇವಾಲಯಗಳ ದೇವರಿಗೆ ಪ್ರಾಣಿ ಬಲಿ ಕೊಡುವುದು ನಮ್ಮ ನಂಬಿಕೆ. ಆದರೆ ಮೊದಲಿಗೆ ದೇವರ ದರ್ಶನ ಮಾಡಿ, ಆ ನಂತರ ದೇವಾಲಯದಿಂದ ಬಹಳ ದೂರದಲ್ಲಿ ಪ್ರಾಣಿಯನ್ನು ಬಲಿ ಕೊಟ್ಟು, ಅಡುಗೆ ಮಾಡಿ, ಊಟ ಮಾಡುತ್ತೇವೆ. ಆದರೆ ಯಾವ ಕಾರಣಕ್ಕೂ ಮಾಂಸಾಹಾರ ಸೇವನೆ ನಂತರ ದೇವಾಲಯದೊಳಗೆ ಪ್ರವೇಶ ಮಾಡುವ ಪರಿಪಾಠ ನಮ್ಮಲ್ಲಿಲ್ಲ.
ಪಂಡಿತ್ ವಿಠ್ಠಲ ಭಟ್, ಜ್ಯೋತಿಷಿ
ಮಾಂಸಾಹಾರ ಸೇವನೆ ಮಾಡಿ ದೇವಾಲಯ ಪ್ರವೇಶ ಮಾಡಬಾರದು ಎಂಬ ನಿಯಮ ಏನಿಲ್ಲ ಅಂತ ವಾದ ಮಾಡುವವರಿಗೆ ನನ್ನ ಉತ್ತರವಿದು. ಆಗಮ ಪ್ರಕಾರವಾಗಿ ಪ್ರತಿಷ್ಠಾಪನೆಯಾದ ದೇವಾಲಯಕ್ಕೆ ಮಾಂಸಾಹಾರ ಸೇವನೆ ಮಾಡಿ ಪ್ರವೇಶಿಸುವುದು ತಪ್ಪು. ಈ ವಿಚಾರದಲ್ಲಿ ಬರೆದಿಟ್ಟ ನಿಯಮಗಳಿಗಿಂತ ಮನಸ್ಸು, ಭಕ್ತಿಯ ವಿಚಾರವೇ ಪ್ರಾಶಸ್ತ್ಯ ಪಡೆಯುತ್ತದೆ. ಮಾಂಸಾಹಾರ ನಂತರ ದೇವಾಲಯ ಪ್ರವೇಶ ಮಾಡಬಾರದು ಅಂತ ನಮ್ಮ ಮೇಲೆ ನಾವೇ ನಿಯಮ ಹಾಕಿಕೊಳ್ಳಬೇಕು.
ಅನಿಲ್, ಖಾಸಗಿ ಕಂಪನಿ ಉದ್ಯೋಗಿ
ದೇವರಾಯನ ದುರ್ಗ, ಅಹೋಬಿಲಂ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಕುರಿ-ಕೋಳಿ ಬಲಿ ಕೊಡುವ ಪದ್ಧತಿ ಇದೆ. ಸ್ವತಃ ಈಶ್ವರ ಕಪಾಲ ಹಿಡಿದು, ರುಂಡ ಮಾಲೆ ಧರಿಸಿ, ಗಜ ಚರ್ಮವನ್ನು ಧರಿಸಿದವನು. ಸ್ಮಶಾನಗಳಲ್ಲಿ ಸಂಚರಿಸುವವನು ಎಂಬುದು ನಮ್ಮ ಪುರಾಣಗಳಲ್ಲೇ ಇದೆ. ಅಂಥ ಶಿವನ ದೇವಾಲಯಕ್ಕೆ ಮಾಂಸಾಹಾರ ಸೇವನೆ ನಂತರ ಏಕೆ ಹೋಗಬಾರದು?
ರವಿ, ಖಾಸಗಿ ಸಂಸ್ಥೆ ಉದ್ಯೋಗಿ
ಎಂಥ ಹಳೆ ದೇವಾಲಯಗಳಲ್ಲೇ ಕೆಲ ನಿಯಮಗಳ ಫಲಕ ಹಾಕಿರುತ್ತಾರೆ. ಅದು ಏನೆಂದರೆ, ಷರ್ಟ್- ಬನಿಯನ್ ಧರಿಸಿ ಒಳಗೆ ಪ್ರವೇಶ ಇಲ್ಲ. ಹಿಂದೂಯೇತರರಿಗೆ ದೇವಾಲಯದೊಳಗೆ ಪ್ರವೇಶ ಇಲ್ಲ. ಮಹಿಳೆಯರು ಈ ವಯಸ್ಸಿನಿಂದ ಇಂಥ ವಯೋಮಾನದವರಿಗೆ ಪ್ರವೇಶವಿಲ್ಲ...ಇಂಥ ನಿಯಮಗಳನ್ನು ನೋಡುತ್ತೇವೆಯೇ ವಿನಾ ಮಾಂಸಾಹಾರ ಸೇವನೆ ನಂತರ ದೇಗುಲಕ್ಕೆ ಪ್ರವೇಶ ಇಲ್ಲ ಎಂಬ ನಿಯಮ ಎಲ್ಲಿದೆ?
ಸದಾನಂದ್, ಪತ್ರಕರ್ತ
ಗ್ರಾಮಗಳಲ್ಲಿ ದೇವತೆಗಳ ಜಾತ್ರೆ ಅಂತ ಮಾಡಿದಾಗ ಮೂರು ದಿನ ಕಾರ್ಯಕ್ರಮ ಇದ್ದರೆ, ಆ ಪೈಕಿ ಒಂದು ದಿನ ಮಾಂಸಾಹಾರಕ್ಕೆ ಸೀಮಿತ. ಊರ ಜನರೆಲ್ಲ ಒಂದಾಗಿ ಕುರಿ-ಕೋಳಿ ಬಲಿ ನೀಡಿ, ಮಾಂಸಾಹಾರ ಸೇವನೆ ಮಾಡುತ್ತಾರೆ. ಈ ವಿಚಾರದಲ್ಲಿ ಆ ಜಾತಿ, ಈ ಜಾತಿ ಎನ್ನದೆ ಎಲ್ಲ ಜಾತಿಯವರೂ ಹಣವನ್ನು ನೀಡುತ್ತಾರೆ.
ಮಂಜುನಾಥ್, ಸರಕಾರಿ ಉದ್ಯೋಗಿ
ಇನ್ನು ಮಲೆನಾಡಿನಲ್ಲಿ ಚೌಡಿಗಾಗಿ ಕುರಿ- ಕೋಳಿ ಬಲಿ ನೀಡುವ ಪದ್ಧತಿ ಇದೆ. ಮಾಲೀಕರು ಯಾವುದೇ ಜಾತಿಯವರಾದರೂ ಕೊಟ್ಟಿಗೆ, ತೋಟಕ್ಕೆ ಸುತ್ತುಬರಿಸಿ ಚೌಡಿಗೆ ಕೋಳಿ ಅಥವಾ ಕುರಿ ಬಲಿ ನೀಡಲಾಗುತ್ತದೆ. ಮಾಂಸಾಹಾರ ಸೇವನೆ ಮಾಡದವರು ಇಂತಿಷ್ಟು ಹಣ ಅಂತ ಕೊಟ್ಟು, ಬೇರೆಯವರ ಮೂಲಕ ಬಲಿ ಕೊಡಿಸುತ್ತಾರೆ. ಅಂದರೆ ದೇವತೆಗಳಲ್ಲೂ ಅದೆಂಥ ವೆಜ್ -ನಾನ್ ವೆಜ್ ಎಂಬ ಭಾವ?
ಶಿವಮಾಧು, ಖಾಸಗಿ ಕಂಪನಿ ಉದ್ಯೋಗಿ
ಶಿವ, ವೀರಭದ್ರನೂ ಸೇರಿದಂತೆ ಅದೆಷ್ಟೋ ದೇವತೆಗಳೂ ಬುಡಕಟ್ಟು ಜನಾಂಗದ ಆರಾಧನೆ ಪಡೆಯುವಂಥವು. ಅವರ ಆಹಾರ ಪದ್ಧತಿಯೇ ಅವರು ಪೂಜಿಸುವ ದೇವರ ಆಹಾರವೂ ಹೌದು. ಆದ್ದರಿಂದಲೇ ಕುರಿ-ಕೋಳಿ, ಮೇಕೆ ಮೊದಲಾದ ಪ್ರಾಣಿಗಳನ್ನು ಬಲಿ ಕೊಟ್ಟು, ಆಹಾರ ಸೇವಿಸುವ ಪದ್ಧತಿ ಇದೆ. ಇದಕ್ಕೆ ಕೆಲವು ಸಸ್ಯಾಹಾರಿ ಜಾತಿಯವರು ಇಲ್ಲದ ನೀತಿ-ನಿಯಮ ಮುಂದಿಡುತ್ತಾರೆ.