ಮುಜರಾಯಿ ಖಾತೆ ಹೊಣೆ ಟಿ.ಬಿ.ಜಯಚಂದ್ರ ಹೆಗಲಿಗೆ
ಬೆಂಗಳೂರು, ಜು. 22 : ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಳಿ ಇದ್ದ ಮುಜರಾಯಿ ಖಾತೆಯ ಹೊಣೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಹೆಚ್ಚುವರಿಯಾಗಿ ವಹಿಸಿದ್ದಾರೆ. ಸೋಮವಾರ ಈ ಖಾತೆ ಹಂಚಿಕೆ ಮಾಡಲಾಗಿದೆ.
ಮುಜರಾಯಿ ಖಾತೆ ಪ್ರಕಾಶ್ ಹುಕ್ಕೇರಿ ಅವರ ಬಳಿ ಇತ್ತು. ಸಂಸದರಾಗಿ ಆಯ್ಕೆಯಾದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಆ ಖಾತೆ ಮುಖ್ಯಮಂತ್ರಿಗಳ ಕೈಗೆ ಹೋಗಿತ್ತು. ಸದ್ಯ, ಖಾತೆಯನ್ನು ಸಿದ್ದರಾಮಯ್ಯ ಅವರು ಹಂಚಿಕೆ ಮಾಡಿದ್ದು, ಮುಜರಾಯಿ ಖಾತೆಯ ಹೊಣೆಯನ್ನು ಟಿ.ಬಿ.ಜಯಚಂದ್ರ ಅವರಿಗೆ ನೀಡಲಾಗಿದೆ.

ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿಗಳು ಸಲ್ಲಿಸಿದ್ದ ಪ್ರಸ್ತಾವನೆಗೆ ಹಂಗಾಮಿ ರಾಜ್ಯಪಾಲರಾದ ರೋಸಯ್ಯ ಅವರು ಒಪ್ಪಿಗೆ ನೀಡಿ ಸೋಮವಾರ ಆದೇಶ ಹೊರಡಿಸಿದ್ದಾರೆ. ಸಚಿವ ಜಯಚಂದ್ರ ಅವರು ಕಾನೂನು, ಸಂಸದೀಯ ವ್ಯವಹಾರ, ಮಾನವ ಹಕ್ಕುಗಳು ಹಾಗೂ ಪಶುಸಂಗೋಪನೆ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದು, ಹೆಚ್ಚುವರಿಯಾಗಿ ಮುಜರಾಯಿ ಖಾತೆ ಅವರ ಹೆಗಲೇರಿದೆ. [ಮುಖ್ಯಮಂತ್ರಿ ಕೈಗೆ ಮುಜರಾಯಿ ಖಾತೆ]
ಮುಖ್ಯಮಂತ್ರಿಗಳ ಇರುವ ಖಾತೆಗಳು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕೈಯಲ್ಲಿ ಹಲವಾರು ಖಾತೆಗಳನ್ನು ಹೊಂದಿದ್ದಾರೆ. ಹಣಕಾಸು, ಗುಪ್ತಚರ, ಬೆಂಗಳೂರು ನಗರಾಭಿವೃದ್ಧಿ, ಕೈಗಾರಿಕೆ, ಗಣಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳು ಮುಖ್ಯಮಂತ್ರಿಗಳ ಬಳಿ ಇದೆ.
ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಪ್ರಕಾಶ್ ಹುಕ್ಕೇರಿ ರಾಜೀನಾಮೆ ಸಲ್ಲಿಸಿದ್ದರು. ಹುಕ್ಕೇರಿ ಅವರು ನಿರ್ವ ಹಿಸುತ್ತಿದ್ದ ಮುಜರಾಯಿ ಹಾಗೂ ಸಣ್ಣ ಕೈಗಾರಿಕೆ ಖಾತೆಗಳನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಸದ್ಯ ಅದನ್ನು ಜಯಚಂದ್ರ ಅವರಿಗೆ ನೀಡಿದ್ದಾರೆ.












Click it and Unblock the Notifications