ಐರಾವತ ಯೋಜನೆಯಡಿ ಉದ್ಯೋಗ, 4,500 ಕಾರು ವಿತರಣೆ
ಬೆಂಗಳೂರು, ಮೇ 31 : 'ಸಮಾಜ ಕಲ್ಯಾಣ ಇಲಾಖೆಯ ಐರಾವತ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 4,500 ವಾಹನಗಳನ್ನು ವಿತರಣೆ ಮಾಡಲಾಗುತ್ತದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದ 209 ಫಲಾನುಭವಿಗಳಿಗೆ ಐರಾವತ ಯೋಜನೆಯಡಿ ಗುರುವಾರ ಕಾರುಗಳನ್ನು ವಿತರಣೆ ಮಾಡಲಾಗಿದೆ. 225 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.
ಮೈಸೂರು, ಬೆಳಗಾವಿ, ಕಲಬುರಗಿ, ದಕ್ಷಿಣ ಕನ್ನಡ, ಬಳ್ಳಾರಿ, ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಐರಾವತ ಯೋಜನೆಯ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿಯೇ ಅವರಿಗೆ ವಾಹನಗಳನ್ನು ವಿತರಣೆ ಮಾಡಲಾಗುತ್ತದೆ.
ಚಾಲಕರೇ ಮಾಲೀಕರು ಎಂಬ ಘೋಷಣೆಯೊಂದಿಗೆ ಈ ಯೋಜನೆ ಜಾರಿಗೆ ತರಲಾಗಿದ್ದು, ಫಲಾನುಭವಿಗಳಿಗೆ 5 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಒಟ್ಟು ವಿತರಣೆ ಮಾಡುವ ವಾಹನಗಳ ಪೈಕಿ ಶೇ 10ರಷ್ಟನ್ನು ಮಹಿಳೆಯರಿಗೆ ನೀಡಲಾಗುತ್ತಿದೆ....

ಏನಿದು ಐರಾವತ ಯೋಜನೆ
ಐರಾವತ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯುವಕ/ಯುವತಿಯರಿಗೆ ಉದ್ಯೋಗ ನೀಡಲಾಗುತ್ತದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ದಿ ನಿಗಮ, ಆದಿಜಾಂಬವ ನಿಗಮಗಳ ಸಹಯೋಗದಲ್ಲಿ ಸಮಾಜ ಕಲ್ಯಾಣ ಈ ಯೋಜನೆ ಜಾರಿಗೆ ತಂದಿದೆ.

ಫಲಾನುಭವಿಗಳಿಗೆ ಸಹಾಯ
ಐರಾವತ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಾಹನಗಳನ್ನು ಮಾತ್ರ ವಿತರಣೆ ಮಾಡುವುದಿಲ್ಲ. ಓಲಾ, ಊಬರ್ ಸಂಸ್ಥೆಯ ಸಹಯೋಗದಲ್ಲಿ ತರಬೇತಿ ಹಾಗೂ ಮಾರುಕಟ್ಟೆ ದೊರಕಿಸಿಕೊಡಲು ಸಹಾಯ ಮಾಡಲಾಗುತ್ತದೆ.

ಯೋಜನೆಯಲ್ಲಿ ತರಬೇತಿಯೂ ಸೇರಿದೆ
ಐರಾವತ ಯೋಜನೆಯಡಿ ಟ್ಯಾಕ್ಸಿ ಖರೀದಿಗೆ ಸಹಾಯ ಧನ ನೀಡುವ ಜೊತೆಗೆ ತರಬೇತಿಯನ್ನು ನೀಡಲಾಗುತ್ತದೆ. ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಎಸ್ಸಿ/ಎಸ್ಟಿ ವರ್ಗದ ನಿರುದ್ಯೋಗಿ ಯುವಕರಿಗಾಗಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ.

ಹೊಸ ಸ್ವರೂಪದಲ್ಲಿ ಯೋಜನೆ
ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಿಂದೆಯೂ ಟ್ಯಾಕ್ಸಿ ಖರೀದಿ ಯೋಜನೆ ಜಾರಿಯಲ್ಲಿತ್ತು. ಆದರೆ, ಅದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿರಲಿಲ್ಲ. ಆದ್ದರಿಂದ, ಈಗ ಯೋಜನೆಯನ್ನು ಆನ್ಲೈನ್ ವ್ಯಾಪ್ತಿಗೆ ತರಲಾಗಿದ್ದು, ಹೊಸ ಸ್ವರೂಪ ನೀಡಲಾಗಿದೆ.












Click it and Unblock the Notifications