ಸಂಕ್ರಾಂತಿಗೆ ಸರಕಾರದ ಕೊಡುಗೆ: ವಿಸ್ಕಿ ಕೊಂಡರೆ ರಮ್ ಫ್ರೀ
ಸದಾ ಹೊಸತನವನ್ನು ಬಯಸಿ ಹೊಸಹೊಸ ಯೋಜನೆಗಳ ಬಗ್ಗೆ ಚಿಂತಿಸುತ್ತಾ, ಸಾರ್ವಜನಿಕರಿಂದ ಟೀಕೆ ಮತ್ತು ಪ್ರಶಂಸೆಗಳನ್ನು ಏಕಕಾಲದಲ್ಲಿ ಎದುರಿಸುತ್ತಿರುವ ಸರಕಾರ ಈಗ ಹೊಸ ಯೋಜನೆಯೊಂದನ್ನು ಕಾರ್ಯಗತಗೊಳಿಸಲು ಮುಂದಾಗಿದೆ.
ಇದೇ ಬರುವ ಸಂಕ್ರಾಂತಿ ಹಬ್ಬದ ದಿನದಂದು ಎಳ್ಳುಬೆಲ್ಲ ಬೀರುವುದರ ಜೊತೆಗೆ, ಅಬಕಾರಿ ಇಲಾಖೆ ರಾಜ್ಯದ ಜನತೆಗೆ ಹಬ್ಬದ ದಿನದಂದು 'ಮದ್ಯಭಾಗ್ಯ' ಜನಸ್ನೇಹಿ ಯೋಜನೆಗೆ ಹಸಿರು ನಿಶಾನೆ ತೋರುವ ನಿರ್ಧಾರಕ್ಕೆ ಬಂದಿದೆ.
ಪ್ರಾಯೋಗಿಕವಾಗಿ ಸಂಕ್ರಾಂತಿ ಹಬ್ಬದ ದಿನದಂದು ಇನ್ನೂರು ರೂಪಾಯಿ ಮೇಲ್ಪಟ್ಟ ವಿಸ್ಕಿ ಮತ್ತು ವೋಡ್ಕಾ (180 ಎಂಎಲ್ ಮೇಲ್ಪಟ್ಟು) ಪದಾರ್ಥಗಳ ಮೇಲೆ ಆಫರ್ ಘೋಷಿಸಲು ಸರಕಾರ ನಿರ್ಧರಿಸಿದೆ. (ಒಂದು ಗಂಟೆಯವರೆಗೆ ಬಾರ್ ಓಪನ್)

ಹಬ್ಬದ ದಿನಕ್ಕೆ ಮಾತ್ರ ಅನ್ವಯಿಸುವಂತೆ ಸರಕಾರದ ಈ ನೂತನ ಕಾರ್ಯಕ್ರಮದಡಿ, ಈ ಎರಡು ವಿಧದ ಮದ್ಯವನ್ನು ಗ್ರಾಹಕ ಖರೀದಿಸಿದರೆ 180 ಎಂಎಲ್ ಉಚಿತವಾಗಿ ರಮ್ ನೀಡಲು ಅಬಕಾರಿ ಇಲಾಖೆ ಈಗಾಗಲೇ ಸಂಪುಟದ ಅನುಮತಿಯನ್ನು ಪಡೆದುಕೊಂಡಿದೆ ಎನ್ನಲಾಗುತ್ತಿದೆ.
ಸಗಟು ಮತ್ತು ರೀಟೇಲ್ ಮದ್ಯ ಮಾರಾಟಗಾರರು ಸಂಕ್ರಾಂತಿ ಹಬ್ಬಕ್ಕೆ ಒಂದು ದಿನ ಮುನ್ನ ಅಬಕಾರಿ ಸಚಿವಾಲಯಕ್ಕೆ ಇಂಡೆಂಟ್ ಹಾಕಿ 'ಎಣ್ಣೆ' ದಾಸ್ತಾನು ಮಾಡಿಟ್ಟು ಕೊಳ್ಳಬೇಕಾಗಿ ಸೂಚಿಸುವ ಪತ್ರವೂ ಇನ್ನೇನು ಅಬಕಾರಿ ಇಲಾಖೆಯಿಂದ ಮಾರಾಟುಗಾರರಿಗೆ ರವಾನೆಯಾಗಲಿದೆ ಎನ್ನುವ ಮಾಹಿತಿ ಬಂದಿದೆ.
ಸಂಕ್ರಾಂತಿ ಹಬ್ಬಕ್ಕೆ ಇನ್ನೆರಡೇ ದಿನ ಉಳಿದಿರುವುದರಿಂದ ರಾಜ್ಯದ ಎಲ್ಲಾ ಪ್ರಮುಖ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಜಾಹೀರಾತು ನೀಡಿ, ಜನರಿಗೆ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೂ ಇಲಾಖೆ ಮುಂದಾಗಿದೆ.
ಜಾಹೀರಾತಿಗೆ ತಗಲುವ ಖರ್ಚನ್ನು ಸಾರ್ವಜನಿಕರ ತೆರಿಗೆ ಹಣದ ಮೂಲಕ ಬಳಸಿಕೊಳ್ಳುವ ನಿರ್ಧಾರಕ್ಕೆ ಹಣಕಾಸು ಇಲಾಖೆ ಬಂದಿದೆ.
ಸರಕಾರ ಜನತೆಗೆ ಹಬ್ಬದ ಕೊಡುಗೆ ನೀಡಲು ಅಬಕಾರಿ ಇಲಾಖೆಯ ಪದಾರ್ಥಗಳನ್ನೇ ಬಳಸಿಕೊಳ್ಳಲು ಕಾರಣ ಇಲ್ಲದಿಲ್ಲ.
ಅಬಕಾರಿ ಇಲಾಖೆಗೆ ಮುಖ್ಯಮಂತ್ರಿಗಳು ನೀಡಿರುವ ಆದಾಯ ಕ್ರೋಢೀಕರಣದ ಟಾರ್ಗೆಟ್ (ವಾರ್ಷಿಕ 14,400 ಕೋಟಿ) ಹೆಚ್ಚಾಗಿರುವುದರಿಂದಲೇ ಸಚಿವರ ಮನವಿ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಸರಕಾರೀ ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಮೌಢ್ಯ, ಮೂಢನಂಬಿಕೆಗೆ ಡೋಂಟ್ ಕೇರ್ ಅನ್ನದ ಅಬಕಾರಿ ಸಚಿವರು ಈ ಯೋಜನೆಯನ್ನು ಸಂಕ್ರಾತಿಯ ದಿನದಂದು ರಾಹು, ಗುಳಿಗೆಕಾಲ ನೋಡದೇ ಸ್ಮಶಾನದಲ್ಲೇ ಚಾಲನೆ ನೀಡಲು ಮುಂದಾಗಿರುವುದು ಮತ್ತೊಂದು ವಿಶೇಷ.

ಪ್ರಾಯೋಗಿಕವಾಗಿ ಸಂಕ್ರಾಂತಿಯ ದಿನದಂದು ಈ ಯೋಜನೆಯನ್ನು ಜಾರಿ ತರಲಿದ್ದೇವೆ. ಜನರು ಯಾವ ರೀತಿಯಲ್ಲಿ ಸ್ಪಂಧಿಸುತ್ತಾರೆ ಎನ್ನುವುದನ್ನು ಅವಲೋಕಿಸಿ ಮುಂದಿನ ಯುಗಾದಿ, ಗೌರಿ ಗಣೇಶ, ದಸರಾ ಮತ್ತು ದೀಪಾವಳಿಯ ಹಬ್ಬಕ್ಕೂ ಯೋಜನೆ ವಿಸ್ತರಿಸುವುದರ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎನ್ನುವುದು ಸಚಿವರು ಮನದಾಳದ ಮಾತು. (ಕುಡುಕರಿಗೆ ಸರಕಾರದ ಸಿಹಿ ಟಾನಿಕ್)
ಸರಕಾರದ ಈ ನಿರ್ಧಾರ ಇನ್ನೇನು ಹೊರಬೀಳುವ ವಾಸನೆ ಕಂಡು ಬರುತ್ತಿದ್ದಂತೆಯೇ ವಿವಿಧ ಸಂಘಟನೆಗಳು ಹಬ್ಬದ ದಿನದಂದೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಭಾರೀ ಪ್ರತಿಭಟನೆ ನಡೆಸಲು ಸಜ್ಜಾಗಿವೆ.
ಸಚಿವರು ಈ ಹಿಂದೆ ಸ್ಮಶಾನದಲ್ಲಿ ಸರಕಾರೀ ಕಾರ್ಯಕ್ರಮ ಆಯೋಜಿಸಿರುವುದರಿಂದಲೇ ಇಂತಹ ಮನೆಹಾಳು ಐಡಿಯಾ ಸರಕಾರಕ್ಕೆ ಹೊಳೆಯಲು ಕಾರಣ. ಸ್ಮಶಾನದಲ್ಲಿ ಕಾರ್ಯಕ್ರಮ ಮಾಡಿ, ಊಟದ ವ್ಯವಸ್ಥೆ ಮಾಡಿದರೆ ದುಷ್ಟ ಶಕ್ತಿಗಳು ಸುಮ್ಮನೆ ಬಿಡ್ತಾವಾ..
ಅಬಕಾರಿ ಖಾತೆಯಿಂದ ಸಚಿವರಿಗೆ ಅರ್ಧಚಂದ್ರ ನೀಡಿ, ಯಾರಿಗೂ ಬೇಡವಾದ ಪವಿತ್ರ ಮುಜರಾಯಿ ಖಾತೆಯೇ ಅವರಿಗೆ ಸಿಗುವಂತಾಗಬೇಕು ಎನ್ನುವ ಬೇಡಿಕೆಯನ್ನೂ ಪ್ರತಿಭಟನೆಯ ವೇಳೆ ನಡೆಸಲು ಸಂಘಟನೆಗಳು ನಿರ್ಧರಿಸಿವೆ. (ಇದೊಂದು ವಿಢಂಬನಾತ್ಮಕ, ಕಾಲ್ಪನಿಕ ಲೇಖನ)












Click it and Unblock the Notifications