'ದೇಶದ ಶೇಕಡಾ 63ರಷ್ಟು ಕೋವಿಡ್ ಪ್ರಕರಣಗಳಿಗೆ ತಬ್ಲಿಘಿ ಜಮಾತ್ ಕಾರಣ'
ಬೆಂಗಳೂರು, ಏ. 10: ಇಡೀ ಜಗತ್ತಿಗೆ ಸಂಕಷ್ಟ ತಂದಿರುವ ಕೊರೊನಾ ವೈರಸ್, ಭಾರತದಲ್ಲೂ ತನ್ನ ಕರಾಳ ಹಸ್ತವನ್ನು ಚಾಚುತ್ತಿದೆ. ಒಂದು ಹಂತದಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಕಂಟ್ರೋಲ್ನಲ್ಲಿದೆ ಎಂದೆ ಭಾವಿಸಲಾಗಿತ್ತು. ಆದರೆ ಕಳೆದ ಎರಡು ವಾರಗಳಿಂದ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಅದನ್ನು ಹುಸಿಗೊಳಿಸಿದೆ. ಚೀನಾದ ವುಹಾನ್ನಲ್ಲಿ ಶುರುವಾದ ಕೊರೊನಾ ವೈರಸ್ ಹಾವಳಿ ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ಸಂಕಷ್ಟ ತಂದಿಟ್ಟಿದೆ. ಕಳೆದ ನಾಲ್ಕು ತಿಂಗಳಲ್ಲಿ ಲಕ್ಷಾಂತರ ಜನರನ್ನು ಕೋವಿಡ್ 19 ಬಲಿ ಪಡೆದಿದೆ. ಜಗತ್ತಿನಾದ್ಯಂತ ಈ ವರೆಗೆ 17 ಲಕ್ಷಕ್ಕು ಅಧಿಕ ಜನರು ಸೋಂಕಿಗೆ ತುತ್ತಾಗಿದ್ದು, ಒಂದು ಲಕ್ಷಕ್ಕು ಅಧಿಕ ಜನರು ಜೀವ ಕಳೆದುಕೊಂಡಿದ್ದಾರೆ. ಈ ವರೆಗೆ ಕೇವಲ 4 ಲಕ್ಷಕ್ಕು ಕಡಿಮೆ ಜನರು ಮಾತ್ರ ಗುಣಮುಖರಾಗಿದ್ದಾರೆ.
ನಮ್ಮ ದೇಶದಲ್ಲಿ ಈವರೆಗೆ 7,444 ಜನರು ಸೋಂಕಿಗೆ ತುತ್ತಾಗಿದ್ದು, ಈಗಾಗಲೇ ಕೊರೊನಾ ವೈರಸ್ ಸೋಂಕಿಗೆ 239 ಜನರು ಬಲಿಯಾಗಿದ್ದಾರೆ. ರಾಜ್ಯದಲ್ಲಿ 218 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಆರು ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿನ ಪ್ರಕರಣಗಳಲ್ಲಿ ಶೇಕಡಾ 63ರಷ್ಟು ಪ್ರಕರಣಗಳಿಗೆ ದೆಹಲಿ ನಿಜಾಮುದ್ದೀನ್ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಕಾರಣ ಎಂದು ಆರೋಪಿಸಲಾಗಿದೆ.
ತಬ್ಲಿಘಿ ಜಮಾತ್ ಸದಸ್ಯ ಐಸೋಲೇಟೆಡ್ ನಲ್ಲಿ ಬೆತ್ತಲೆ ಓಡಾಡಿದ್ದು ನಿಜವೇ?
ಆರಂಭಿಕ ಹಂತದಲ್ಲಿ ದೇಶದಲ್ಲಿ ಹಿಡಿತದಲ್ಲಿದ್ದ ಕೋವಿಡ್ ಸೋಂಕು
ಚೀನಾ, ಇಟಲಿ, ಸ್ಪೇನ್, ಅಮೆರಿಕ, ಫ್ರಾನ್ಸ್ ಸೇರಿದಂತೆ ಮುಂದುವರೆದ ದೇಶಗಳಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸಿದೆ. ಈಗಾಗಲೇ ಕೋವಿಡ್ ಹೊಡೆತಕ್ಕೆ ಸಿಲುಕಿರುವ ಬಲಾಢ್ಯ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೂ ತುತ್ತಾಗಿವೆ. ಪರಿಸ್ಥಿತಿ ಹೀಗಿರುವಾಗ ಒಂದೇ ಸಲಕ್ಕೆ 130 ಕೋಟಿ ಜನರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವುದು ಸಾಧ್ಯವಿರಲಿಲ್ಲ. ಹೀಗಾಗಿಯೆ ದೇಶಾದ್ಯಂತ ಲಾಕ್ಡೌನ್ ಜಾರಿಗೆ ತರುವ ಮೂಲಕ ಸೋಂಕು ಹರಡದಂತೆ ತಡೆಯುವ ಪ್ರಯತ್ನ ನಡೆಸಲಾಗಿದೆ. ಆದರೆ ಇದಕ್ಕೆ ದೆಹಲಿಯ ತಬ್ಲಿಘಿ ಜಮಾತ್ ಪ್ರಕರಣ ಹಿನ್ನಡೆಯನ್ನುಂಟು ಮಾಡಿದೆ ಎಂಬ ಆರೋಪ ಮಾಡಲಾಗಿದೆ.
ಬಿ.ಎಲ್. ಸಂತೋಷ್ ಗಂಭೀರ ಆರೋಪ
ದೇಶದಲ್ಲಿನ ಶೇಕಡಾ 63ರಷ್ಟು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ನೇರವಾಗಿ ದೆಹಲಿಯ ತಬ್ಲಿಘಿ ಜಮಾತ್ಗೆ ಸಂಬಂಧಿಸಿದ ಪ್ರಕರಣಗಳು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆರೋಪಿಸಿದ್ದಾರೆ. ಮೂಲತಃ ಕರ್ನಾಟಕದವರಾಗಿರುವ ಬಿ.ಎಲ್. ಸಂತೋಷ್ ಅವರು ಈ ಬಗ್ಗೆ ಟ್ವೀಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಬ್ಲಿಘಿ ಜಮಾತ್ನಲ್ಲಿ ಭಾಗವಹಿಸಿದ್ದ ಇನ್ನೂ 500 ಕಾರ್ಯಕರ್ತರು ತಲೆಮರೆಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ದೆಹಲಿ, ಭೋಪಾಲ್ ಹಾಗೂ ಮೈಲಾಡುತುರೈನಲ್ಲಿ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ತಬ್ಲಿಘಿ ಜಮಾತ್ ಮರ್ಕಾಜ್ : ಭಾರತದ ಕೊರೊನಾ ಹಾಟ್ ಸ್ಪಾಟ್ ಎನಿಸಿದ್ದೇಕೆ?
ದೆಹಲಿ ಅಲ್ಪಸಂಖ್ಯಾತ ಆಯೋಗದ ಬಗ್ಗೆ ಸಂತೋಷ್ ಕಿಡಿ
ಇಷ್ಟೆಲ್ಲ ಅವಾಂತರಗಳನ್ನು ಸೃಷ್ಟಿಸಿದ್ದರೂ ದೆಹಲಿಯ ಅಲ್ಪಸಂಖ್ಯಾತ ಆಯೋಗವು ನಿಜಾಮುದ್ದೀನ್ ತಬ್ಲಿಘಿ ಜಮಾತ್ ಹೆಸರು ಉಲ್ಲೇಖಿಸದಂತೆ ಬೇಡಿಕೆ ಇಟ್ಟಿದೆ. ಆದರೆ ಹಲವರು ಭಾರತದಲ್ಲಿ ಮುಸ್ಲಿಮರನ್ನು ಗುರಿ ಮಾಡಲಾಗಿದೆ ಎಂದು ಜಾಗತಿಕ ಅಭಿಯಾನವನ್ನು ನಿರಾಧಾರವಾಗಿ ಆರೋಪ ಮಾಡುತ್ತ, ದೇಶಕ್ಕೆ ಕಳಂಕ ತರಲು ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟ್ರವು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿದ್ದಾರೆ 800ಕ್ಕೂ ಹೆಚ್ಚು ತಬ್ಲಿಘಿ ಜಮಾತ್ ಕಾರ್ಯಕರ್ತರು
ರಾಜ್ಯದಲ್ಲಿಯೂ ಈಗಾಗಲೇ 801 ತಬ್ಲಿಘಿ ಜಮಾತ್ನ ಕಾರ್ಯಕರ್ತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಇದರಲ್ಲಿ ಬೆಂಗಳೂರು ಒಂದರಲ್ಲೆ 269 ತಬ್ಲಿಘಿ ಜಮಾತ್ ಕಾರ್ಯಕರ್ತರನ್ನು ಪತ್ತೆಮಾಡಿ ಕ್ವಾರಂಟೈನ್ ಮಾಡಲಾಗಿದೆ. ಇತರ ಜಿಲ್ಲೆಗಳಲ್ಲಿ 482 ಕಾರ್ಯಕರ್ತರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಅಧೀಕೃತ ಮಾಹಿತಿ ಕೊಟ್ಟಿದೆ.
ಸಂತೋಷ್ ಆರೋಪವನ್ನು ಗಂಭೀರವಾಗಿ ಪರಿಗಣಿಸಲಿದೆ ಕೇಂದ್ರ
ಇನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯರ್ಶಿ ಬಿ.ಎಲ್. ಸಂತೋಷ್ ಆರೋಪವನ್ನು ಕೇಂದ್ರ ಸರ್ಕಾರ ತೀರಾ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆ ಸರ್ಕಾರ ಹಾಗೂ ಪಕ್ಷದಲ್ಲಿ ಅತ್ಯಂತ ಪ್ರಭಾವಿ ಹುದ್ದೆ. ಹೀಗಾಗಿ ಬಿ.ಎಲ್. ಸಂತೋಷ್ ಅವರ ಮಾತನ್ನು ಕೇಂದ್ರ ಸರ್ಕಾರ ಕೂಡ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಹೀಗಾಗಿ ಕೊರೊನಾ ವೈರಸ್ ಹತೋಟಿಗೆ ಬಂದ ಬಳಿಕ, ತಬ್ಲಿಘಿ ಜಮಾತ್ ನಿರ್ಲಕ್ಷದ ಕುರಿತು ಕೇಂದ್ರ ಸರ್ಕಾರ ಯಾವ ರೀತಿ ನಿಲುವು ತೆಗೆದು ಕೊಳ್ಳಲಿದೆ ಎಂಬುದು ಗೊತ್ತಾಗಲಿದೆ.