ರಾಮನಗರ ಕೋರ್ಟ್ಗೆ ಬಂದ ನಿತ್ಯಾನಂದ ಸ್ವಾಮಿ
ರಾಮನಗರ, ಆ.18 : ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ಅರ್ಜಿ ವಿಚಾರಣೆಯನ್ನು ರಾಮನಗರದ ಸಿಜೆಎಂ ನ್ಯಾಯಾಲಯ ಆ.23ಕ್ಕೆ ಮುಂದೂಡಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸೋಮವಾರ ನಿತ್ಯಾನಂದ ಸ್ವಾಮಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಸುಪ್ರೀಂಕೋರ್ಟ್ ಆಗಸ್ಟ್ 18ರಂದು ರಾಮನಗರ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ನಿತ್ಯಾನಂದ ಹಾಜರಾಗಬೇಕು ಎಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವಿಚಾರಣೆಗೆ ಆಗಮಿಸಿದ್ದರು.

ಸೋಮವಾರ ಐವರು ಶಿಷ್ಯರೊಡನೆ ನಿತ್ಯಾನಂದ ಸ್ವಾಮಿ ರಾಮನಗರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಆ.23ಕ್ಕೆ ಮುಂದೂಡಿತು. ರಾಸಲೀಲೆ ಹಾಗೂ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿಗೆ ನಡೆಸಬೇಕಿದ್ದ ಪುರುಷತ್ವ ಪರೀಕ್ಷೆಯನ್ನು ಸುಪ್ರೀಂಕೋರ್ಟ್ ಮುಂದೂಡಿತ್ತು. [ಪುರುಷತ್ವ ಪರೀಕ್ಷೆ ನಡೆಯುವುದೇ ಅನುಮಾನ?]
ಆಗಸ್ಟ್ 6ರಂದು ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನಿತ್ಯಾನಂದ ಪರ ವಕೀಲರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಆ.18ರಂದು ನಿತ್ಯಾನಂದ ಸ್ವಾಮಿ ಖುದ್ದು ರಾಮನಗರ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡಿತ್ತು.
ನಿತ್ಯಾನಂದನ ವಿರುದ್ಧ ಸಿಐಡಿ ತನಿಖೆ ಹಾಗೂ ಪುರುಷತ್ವ ಪರೀಕ್ಷೆ ನಡೆಸುವಂತೆ ರಾಮನಗರದ ಸಿಜೆಎಂ ಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಆದರೆ ರಾಮನಗರ ಕೋರ್ಟ್ ಆದೇಶವನ್ನು ಪ್ರಶ್ನಿಸಿ ನಿತ್ಯಾನಂದ ಮತ್ತು ಇತರೆ ನಾಲ್ವರು ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. [ನಿತ್ಯಾನಂದ ವಿರುದ್ಧದ ಜಾಮೀನು ರಹಿತ ವಾರೆಂಟ್ ರದ್ದು]












Click it and Unblock the Notifications