ಅರ್ಕಾವತಿ ನದಿ ಪ್ರವಾಹದಲ್ಲಿ ವೃದ್ಧರೊಬ್ಬರು ಕೊಚ್ಚಿಹೋದ ದೂರು
ರಾಮನಗರ, ಅಕ್ಟೋಬರ್ 17: ಪ್ರವಾಹದ ಸೆಳೆತಕ್ಕೆ ವೃದ್ಧರೊಬ್ಬರು ಕೊಚ್ಚಿ ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸೋಮವಾರ ಬಹಿರ್ದೆಸೆಗೆಂದು ಹೋಗಿದ್ದ ವೃದ್ಧರೊಬ್ಬರು ಕಾಲು ಜಾರಿ ಬಿದ್ದು, ಅರ್ಕಾವತಿ ನದಿಯಲ್ಲಿ ಕೊಚ್ಚಿ ಹೋಗಿರಬಹುದು ಎಂಬ ಅನುಮಾನವು ವ್ಯಕ್ತವಾಗುತ್ತಿದೆ.
ರಾಮನಗರ ತಾಲೂಕಿನ ಹುಲಿಕೆರೆ ಗ್ರಾಮದ ಮಾದಯ್ಯ ಬಹಿರ್ದೆಸೆಗೆಂದು ಸೋಮವಾರ ಬೆಳಗ್ಗೆ ಹೋಗಿದ್ದರು. ಆದರೆ ಮನೆಗೆ ವಾಪಸಾಗದ ಮಾದಯ್ಯ ಅವರನ್ನು ಹುಡುಕಿ ಬಂದ ಕುಟುಂಬದವರಿಗೆ ಸ್ಥಳದಲ್ಲಿ ಒಂದು ಚಪ್ಪಲಿ ಬಿದ್ದಿದ್ದು ಕಂಡು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಮಾದಯ್ಯ ಅವರಿಗಾಗಿ ಸಾಯಂಕಾಲದವರೆಗೂ ತೀವ್ರ ಶೋಧ ನಡೆಸಿದರು. ಆದರೆ ಮಂಚನಬೆಲೆ ಜಲಾಶಯದಿಂದ ನೀರು ಹರಿಬಿಟ್ಟ ಪರಿಣಾಮ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದಿದ್ದರಿಂದ ಶೋಧ ಕಾರ್ಯವನ್ನು ನಿಲ್ಲಿಸಿದರು. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮರಳು ದಿಬ್ಬದ ಅಡಿ ಸಿಲುಕಿ ಯುವಕ ಸಾವು
ರಾಮನಗರ ತಾಲೂಕಿನ ಮೆಳೇಹಳ್ಳಿ ಗ್ರಾಮದಲ್ಲಿ ವಾಯು ವಿಹಾರಕ್ಕೆ ತೆರಳಿದ ಸಂದರ್ಭದಲ್ಲಿ ಮರಳು ದಿಬ್ಬ ಕುಸಿದು ಅರಳಿಮರದದೊಡ್ಡಿ ಗ್ರಾಮದ ನಂದೀಶ (35) ಎಂಬ ಯುವಕ ಸಾವನ್ನಪ್ಪಿದ್ದಾರೆ.
ನೀರಿನ ಫೋಟೊ ತೆಗೆಯಲು ಹೋದಾಗ ಭಾರೀ ಗಾತ್ರದ ದಿಬ್ಬದ ಕುಸಿದು ಅದರ ಅಡಿ ನಂದೀಶ ಸಿಲುಕಿದ್ದಾರೆ. ಹಳ್ಳದಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಹಲ ವರ್ಷಗಳಿಂದ ಹೊಳೆಯಲ್ಲಿ ನೀರಿಲ್ಲದ ಕಾರಣ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿತ್ತು. ಅದರಿಂದ ಕಾಲುವೆಯ ಪಕ್ಕದ ಜಮೀನುಗಳ ಅಂಚಿನ ಮರಳು ದಿಬ್ಬಗಳು ಸಡಿಲವಾಗಿವೆ. ಅದರಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.