ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಗ್ಯಾರಂಟಿಯೇ ರಕ್ಷಾಕವಚ: ಪ್ರಧಾನಿ 'ಹುಸಿ ಭರವಸೆ' ಟೀಕೆಗೆ ಸುರ್ಜೆವಾಲ ತಿರುಗೇಟು
ಕರ್ನಾಟಕ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೋಮವಾರ ಸಿಎಂ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ದರು. ಅದರ ಬೆನ್ನಲ್ಲೆ ಇಂದು ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಟಾಂಗ್ ನೀಡಿದ್ದಾರೆ. '1.31 ಲಕ್ಷ ಕೋಟಿ ಹಣ ಕನ್ನಡಿಗರ ಜೇಬು ಸೇರಿದೆ' ಎಂದು ಅವರು ಉತ್ತರಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ದೊಡ್ಡದಾಗಿ ಭರವಸೆ ನೀಡಿತ್ತು. ಆ ಭರವಸೆ ಏನಾಯ್ತು. ಕಾಂಗ್ರೆಸ್ನ ಹುಸಿ ಭರವಸೆಗಳನ್ನು ನಂಬಬೇಡಿ ಎಂದು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ 'ಕೈ' ನಾಯಕರ ಕಾಲೆಳೆದಿದ್ದರು. ಇದಕ್ಕೆ ಎಕ್ಸ್ ಪೋಸ್ಟ್ ಮೂಲಕ ಸುರ್ಜೆವಾಲ ಪ್ರತಿಕ್ರಿಯೆ ನೀಡಿದ್ದಾರೆ.

'ಕಾಂಗ್ರೆಸ್ ಕರ್ನಾಟಕದಲ್ಲಿ ಕೊಟ್ಟ ದೊಡ್ಡ ಭರವಸೆಗಳು (ಗ್ಯಾರಂಟಿಗಳು) ಯಶಸ್ವಿಯಾಗಿ ಜಾರಿಯಾಗಿವೆ. 1.31 ಲಕ್ಷ ಕೋಟಿ ಹಣ ಕನ್ನಡಿಗರ ಜೇಬು ಸೇರಿದೆ. ನಿಮ್ಮ ದುರಾಡಳಿತದಿಂದ ಆಗುತ್ತಿರುವ ಬೆಲೆ ಏರಿಕೆಯಿಂದ ಜನರನ್ನು ಕಾಪಾಡುವ ರಕ್ಷಾಕವಚವಾಗಿವೆ. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ತುಂಬಿದೆ. ಬಡವರ ಬದುಕಿನ ಬೆಳಕಾಗಿದೆ ಎಂದಿದ್ದಾರೆ.
ಪ್ರಧಾನಿಗೆ ಸಾಲು ಸಾಲು ಪ್ರಶ್ನೆ
ಪ್ರಧಾನಿ ನರೇಂದ್ರ ಮೋದಿಯವರ ನೀವು ಕೊಟ್ಟ ಅಚ್ಛೇ ದಿನದ ಭರವಸೆ ಏನಾಯ್ತು? ಬೆಲೆ ಏರಿಕೆ ಜಾಸ್ತಿಯಾಗಿದೆ, ಜನರ ಬದುಕು ಬೀದಿಗೆ ಬಿದ್ದಿದೆ. ಉದ್ಯೋಗಕ್ಕೆ ಕುತ್ತು ಬಂದಿದೆ. ದೇಶದ ಸಂಪತ್ತು ಕೆಲವು ಜನರು ಜೇಬಿಗೆ ಸೇರಿದೆ. ನಿಮಗೆ ಬಡವರು, ಮಧ್ಯಮವರ್ಗದವರ ಮೇಲೆ ಕಿಂಚಿತ್ತೂ ಅನುಕಂಪವಿಲ್ಲ. ಕೋವಿಡ್ ಸಮಯವಾಗಲಿ, ನೋಟು ರದ್ದತಿಯಾಗಲಿ, ಪ್ರಸ್ತುತ ಅಡುಗೆ ಅನಿಲ ಕೊರತೆಯಾಗಲಿ ನಿಮ್ಮ ನೀತಿಗಳಿಂದ ಪರದಾಡಿದ್ದು ಜನಸಾಮಾನ್ಯರು. ನಿಮ್ಮ ಕಣ್ಣಿಗೆ ಕಾಣುವುದು ಶ್ರೀಮಂತ ಉದ್ಯಮಿಗಳೇ ಹೊರತು, ಶ್ರಮಿಕ ವರ್ಗದ ಜನರಲ್ಲ ಎಂದು ಕಿಡಿ ಕಾರಿದರು.
ಮಹಾರಾಷ್ಟ್ರ, ಬಿಹಾರದಲ್ಲಿ ಬಿಜೆಪಿಯಿಂದ ಗ್ಯಾರಂಟಿ ನಕಲು
ನಿಮ್ಮ ನೀತಿಗಳಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಈಗ ಆಸರೆಯಾಗಿರುವುದು ಕಾಂಗ್ರೆಸ್ ಗ್ಯಾರಂಟಿಗಳೇ ಹೊರತು, ನಿಮ್ಮ ಬಣ್ಣದ ಮಾತುಗಳಲ್ಲ. ಅಂದಹಾಗೆ, ಮಹಾರಾಷ್ಟ್ರ, ಬಿಹಾರದಲ್ಲಿ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನಿಮ್ಮ ಸರ್ಕಾರಗಳು ನಕಲು ಮಾಡಿದ್ದು ಯಾಕೆ? ನಕಲು ಮಾಡಿದ ಬಳಿಕ ಅವುಗಳನ್ನು ಸರಿಯಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದ್ದು ಯಾಕೆ?
ಅಲ್ಲೆಲ್ಲೋ ಅಸ್ಸಾಂನಲ್ಲಿ ಕೂತು ಕರ್ನಾಟಕದ ಗ್ಯಾರಂಟಿ ಮಾತನಾಡುವ ಬದಲು, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ಪ್ರಚಾರಕ್ಕೆ ಬಂದು ಈ ಪ್ರಶ್ನೆ ಕೇಳಿ. ಕನ್ನಡಿಗರು ನಿಮಗೆ ವಿವರವಾಗಿ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಗ್ಯಾರಂಟಿ ನೀಡಿ ರಾಜ್ಯ ದಿವಾಳಿ ಆಗಿಲ್ಲ: ಸಿದ್ದರಾಮಯ್ಯ
ಅಸ್ಸಾಂನಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದಕ್ಕೆ ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಯೋಜನೆಗಳನ್ನು ಜನರು ಮೆಚ್ಚಿದ್ದಾರೆ. ನಮಗೆ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಕರ್ನಾಟಕ ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications