ಬಿಎಸ್ವೈ ವಿರುದ್ಧದ ತನಿಖೆ, ಸಿಬಿಐ ಬಳಿ ವರದಿ ಕೇಳಿದ ಸುಪ್ರೀಂಕೋರ್ಟ್
ಬೆಂಗಳೂರು, ಜುಲೈ 31 : ಯಡಿಯೂರಪ್ಪ ವಿರುದ್ಧದ ಗಣಿ ಲಂಚ ಪ್ರಕರಣದ ತನಿಖೆ ಕುರಿತು ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ನೋಟಿಸ್ ನೀಡಿದೆ. ಇತ್ತ ಕರ್ನಾಟಕ ಹೈಕೋರ್ಟ್ ಯಡಿಯೂರಪ್ಪ ಅವರ ವಿರುದ್ಧ ನಡೆಯುತ್ತಿರುವ ಲೋಕಾಯುಕ್ತ ತನಿಖೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ತ್ರಿ ಸದಸ್ಯ ಪೀಠ, ತನಿಖೆಯ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿದೆ. ಪ್ರೇರಣಾ ಟ್ರಸ್ಟ್ ಗಣಿಲಂಚ ಹಗರಣದ ತನಿಖೆ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಹಿರೇಮಠ ಅವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಯಾವುದು ಈ ಪ್ರಕರಣ? : ಬೆಂಗಳೂರಿನ ರಾಚೇನಹಳ್ಳಿಯಲ್ಲಿನ ಜಮೀನನ್ನು ಡಿನೋಟಿಫೈ ಮಾಡಿಸಿ, ಖರೀದಿ ಮಾಡಿ ಜಿಂದಾಲ್ ಕಂಪನಿಯ ಅಂಗಸಂಸ್ಥೆ ಸೌತ್ವೆಸ್ಟ್ ಮೈನಿಂಗ್ ಕಂಪನಿಗೆ ಅಗ್ಗದ ದರದಲ್ಲಿ ಮಾರಾಟ ಮಾಡಲಾಗಿದೆ ಎಂಬುದು ಆರೋಪ. ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಕುಟುಂಬ ಒಡೆತನದ ಪ್ರೇರಣಾ ಟ್ರಸ್ಟ್ಗೆ ಸೌತ್ವೆಸ್ಟ್ ಮೈನಿಂಗ್ ಕಂಪನಿ ಸುಮಾರು 10 ಕೋಟಿ ದೇಣಿಗೆ ನೀಡಿದೆ ಎಂದು ಸಿಇಸಿ ವರದಿ ನೀಡಿತ್ತು. ['ಯಡಿಯೂರಪ್ಪ ಅವರನ್ನು ಸದ್ಯಕ್ಕೆ ಬಂಧಿಸುವುದಿಲ್ಲ']
ಈ ಜಮೀನು ಖರೀದಿಯಲ್ಲಿ ಕಾನೂನುಗಳ ಉಲ್ಲಂಘನೆ ಆಗಿದೆ ಎಂದು ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿ ನೀಡಿತ್ತು. ಸಿಇಸಿ ಶಿಫಾರಸಿನ ಅನ್ವಯ 2012ರ ಮೇ 11ರಂದು ಸುಪ್ರೀಂಕೋರ್ಟ್ ಈ ಪ್ರಕರಣಗಳನ್ನು ಸಿಬಿಐಗೆ ವಹಿಸಿತ್ತು.[ಯಡಿಯೂರಪ್ಪ ಮನೆ ಮೇಲೆ ಸಿಬಿಐ ದಾಳಿ]
ಲೋಕಾಯುಕ್ತ ತನಿಖೆಗೆ ತಡೆ ಇಲ್ಲ : ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ತನಿಖೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎನ್.ವೇಣುಗೋಪಾಲಗೌಡ ಅವರು ಈ ಆದೇಶ ನೀಡಿದ್ದಾರೆ.
ವಡೇರಹಳ್ಳಿ, ಬಿಳೇಕಹಳ್ಳಿ ಮತ್ತು ಜೆ.ಬಿ.ಕಾವಲ್ನಲ್ಲಿನ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಇದನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.












Click it and Unblock the Notifications