ಶಮನವಾಗದ ಅಸಮಾಧಾನ: ಕಾಂಗ್ರೆಸ್ ವಿರುದ್ಧ ಶಾಸಕರ ಬೆಂಬಲಿಗರ ಆಕ್ರೋಶ
ಬೆಂಗಳೂರು, ಜೂನ್ 7: ಸಚಿವ ಸ್ಥಾನದಿಂದ ವಂಚಿತರಾದ ಶಾಸಕರ ಪರ ಪ್ರತಿಭಟನೆಗಳು ಗುರುವಾರ ತೀವ್ರವಾಗಿವೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಅತೃಪ್ತ ಶಾಸಕರು ಒಂದೆಡೆ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸುತ್ತಿದ್ದರೆ, ಇನ್ನೊಂದೆಡೆ ಅವರ ಬೆಂಬಲಿಗರು ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಎಂ.ಬಿ. ಪಾಟೀಲ್ ಅವರ ನಿವಾಸದಲ್ಲಿ ಕಾಂಗ್ರೆಸ್ನ ಅತೃಪ್ತ ಶಾಸಕರು ಸಭೆ ನಡೆಸಿದ್ದಾರೆ. ಇದರಲ್ಲಿ ಸತೀಶ್ ಜಾರಕಿಹೊಳಿ, ಕೆ. ಸುಧಾಕರ್, ಬಿ.ಸಿ. ಪಾಟೀಲ್ ಸೇರಿದಂತೆ ಅನೇಕ ಶಾಸಕರು ಭಾಗಿಯಾಗಿದ್ದಾರೆ.
ಅತೃಪ್ತ ಶಾಸಕರು ಬುಧವಾರ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಂದರ್ಭದಿಂದಲೂ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದು, ತಮಗಿಂತ ಅನುಭವದಲ್ಲಿ ಕಿರಿಯರಾದವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಈಶ್ವರ್ ಖಂಡ್ರೆ, ಎಚ್,ಕೆ. ಪಾಟೀಲ್, ರಾಮಲಿಂಗಾ ರೆಡ್ಡಿ, ರೋಷನ್ ಬೇಗ್, ಅಜಯ್ ಸಿಂಗ್, ಸಿ.ಎಸ್. ಶಿವಳ್ಳಿ, ಸತೀಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಭೀಮಾ ನಾಯ್ಕ್ ಮುಂತಾದವರು ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಮುಂದುವರಿದ ಪ್ರತಿಭಟನೆ
ತಮ್ಮ ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಸಿಟ್ಟಿಗೆದ್ದಿರುವ ಅವರ ಅಭಿಮಾನಿಗಳು ರಾಜ್ಯದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿದ್ದಾರೆ.
ರೆಡ್ಡಿ ಜನಸಂಘದ ವತಿಯಿಂದ ಕೋರಮಂಗಲದಲ್ಲಿ ರೆಡ್ಡಿ ಸಮುದಾಯ ಮುಖಂಡರು ಹಾಗೂ ರಾಮಲಿಂಗಾರೆಡ್ಡಿ ಅಭಿಮಾನಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು, ಇಲ್ಲದಿದ್ದರೆ, ಬಿಬಿಎಂಪಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೋರಮಂಗಲ ಬಿಬಿಎಂಪಿ ಸದಸ್ಯ ಚಂದ್ರಪ್ಪ ಹೇಳಿದರು.
ನಮ್ಮ ನಾಯಕರಿಗೆ ಅನ್ಯಾಯವಾಗಿದೆ. ಇದನ್ನು ಖಂಡಿಸಿ ನ್ಯಾಯ ಸಿಗುವವರೆಗೂ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ನಡೆಸುವುದಾಗಿ ಪ್ರತಿಭಟನಾಕಾರರು ಹೇಳಿದರು.
ಕಳೆದ ಬಾರಿ ಸಚಿವರಾಗಿದ್ದ ರೋಷನ್ ಬೇಗ್ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಅವರ ಬೆಂಬಲಿಗರು ಕ್ವೀನ್ಸ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ ರೋಷನ್ ಬೇಗ್ ಬೆಂಬಲಿಗರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದರು.

ಚಿಕ್ಕಬಳ್ಳಾಪುರದ ಮುಖ್ಯ ರಸ್ತೆಗಳಲ್ಲಿ ಶಾಸಕ ಕೆ. ಸುಧಾಕರ್ ಅವರ ಬೆಂಬಲಿಗರು ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು.
ಕುರುಬ ಸಮಾಜದ ಶಾಸಕರಿಗೆ ನಾಲ್ಕು ಸಚಿವ ಸ್ಥಾನಗಳನ್ನು ನೀಡಬೇಕಿತ್ತು. ಆದರೆ ಇಲ್ಲಿ ಅನ್ಯಾಯ ಎಸಗಲಾಗಿದೆ ಎಂದು ಗದಗದಲ್ಲಿ ಕುರುಬ ಮಹಾಸಭಾದಿಂದ ಬೃಹತ್ ಪ್ರತಿಭಟನೆ ನಡೆಯಿತು.
ವಿವಿಧ ವೃತ್ತಗಳಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕುರುಬ ಸಮುದಾಯದ ಸದಸ್ಯರು, ಸಮುದಾಯದ ಶಾಸಕರಿಗೆ ಸ್ಥಾನ ನೀಡದೆ ಇರುವುದನ್ನು ತೀವ್ರವಾಗಿ ಖಂಡಿಸಿದರು.
ಕಂಬವೇರಿದ ಯುವಕರು
ಶಾಸಕ ಎಂಟಿಬಿ ನಾಗರಾಜು ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಇಬ್ಬರು ಯುವಕರು ನಿರ್ಮಾಣ ಹಂತದ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರತಿಭಟನೆ ನಡೆಸಿದರು.
ಹೊಸಕೋಟೆಯ ಕಂಬಳಿಪುರದಲ್ಲಿ ಸುಮಾರು 50 ಅಡಿ ಎತ್ತರದವರೆಗೆ ಕಂಬವೇರಿದ ರಾಮು ಮತ್ತು ಗಂಗಾಧರ್ ಎಂಬ ಯುವಕರು ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.












Click it and Unblock the Notifications