ಸಂಡೇ ಲಾಕ್ ಡೌನ್: ರಾಜ್ಯದ ವಿವಿಧ ಜಿಲ್ಲೆಗಳ ಅಪ್ಡೇಟ್ಸ್
ಕರ್ನಾಟಕ, ಜುಲೈ 26: ಕೊರೊನಾ ಸೋಂಕು ಹರಡದಂತೆ ತಡೆಯಲು ಕರ್ನಾಟಕದಲ್ಲಿ ಭಾನುವಾರದ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ ಈಗಾಗಲೇ 90,942ಕ್ಕೆ ಏರಿಕೆಯಾಗಿದೆ. ಶನಿವಾರ ರಾತ್ರಿ 9 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯ ತನಕ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸಾರಿಗೆ ಸಂಚಾರ ಸಂಪೂರ್ಣ ರದ್ದುಗೊಳ್ಳಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ಇರುತ್ತದೆ.
Recommended Video
ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ 5 ಸಾವಿರ ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗುತ್ತಿದೆ. ಭಾನುವಾರದ ಲಾಕ್ ಡೌನ್ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ.
ಕಲಬುರಗಿ
ಕಲಬುರಗಿ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ, ಆಟೋಗಳ ಸಂಚಾರ ಬಲು ಜೋರಾಗಿದ್ದು, KSRTC ಬಸ್ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸಂಡೇ ಲಾಕ್ ಡೌನ್ ಗೆ ಕಲಬುರಗಿ ಜಿಲ್ಲೆಯ ಜನ ಕ್ಯಾರೆ ಎನ್ನುತ್ತಿಲ್ಲ.

ಚಾಮರಾಜನಗರ
ನಾಲ್ಕನೇ ಸಂಡೇ ಲಾಕ್ ಡೌನ್ ಚಾಮರಾಜನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗಡಿ ಜಿಲ್ಲಾ ಕೇಂದ್ರದಲ್ಲಿ ಜನ ಜೀವನ ಸಾಮಾನ್ಯವಾಗಿದೆ. ಮೆಡಿಕಲ್, ಹಾಲು ಮಾರಾಟ ಕೇಂದ್ರ, ಮಾಂಸ ಮಾರಾಟ ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಬಂದ್ ಆಗಿವೆ.
ಕೆಎಸ್ಆರ್ಟಿಸಿ ಸಂಚಾರ ನಿಲ್ಲಿಸಿರುವುದರಿಂದ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಸರಕು ಸಾಗಣೆ ಸೇರಿದಂತೆ ವಿವಿಧ ರೀತಿಯ ವಾಹನಗಳ ಸಂಚಾರ ವಿರಳವಾಗಿದೆ. ಕೊರೊನಾ ಪ್ರಕರಣ ಉಲ್ಬಣ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ವಹಿಸಿದೆ.

ಬಳ್ಳಾರಿ
ಸಂಡೇ ಲಾಕ್ಡೌನ್ ಗೆ ಬಳ್ಳಾರಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ದಿನದಂತೆ APMC, ಹಾಲು, ತರಕಾರಿ, ಔಷಧಿ, ಹಣ್ಣಿನ ಅಂಗಡಿಗಳು ಓಪನ್ ಅಗಿದ್ದು, ಕೇವಲ ಬೆರಳೆಣಿಕೆಯಷ್ಟು ವಾಹನ ಸವಾರರ ಓಡಾಟ ನಡೆದಿದೆ. ಬಳ್ಳಾರಿಯ ಮೋತಿ ಸರ್ಕಲ್, ರಾಯಲ್ ಸರ್ಕಲ್, SP ರೋಡ್ ಗಳಲ್ಲಿ ಬಿಗಿ ಬಂದೋಬಸ್ತ್ ಆಗಿದ್ದು, ಆಟೋ, ಟ್ಯಾಕ್ಸಿ, ಕಾರ್ ಗಳ ಓಡಾಟ ನಿಷೇಧಿಸಲಾಗಿದೆ.
ಮೈಸೂರು
ಕೊರೊನಾ ವೈರಸ್ ಹರಡುವಿಕೆ ತಡೆಗಾಗಿ ಪ್ರತಿ ಭಾನುವಾರ ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ೫ ರವರೆಗೆ ವಾಣಿಜ್ಯ ಮಳಿಗೆ, ವಾಹನ ಸಂಚಾರ, ಸಾರ್ವಜನಿಕರ ಓಡಾಟ ಸ್ಥಗಿತಗೊಳಿಸಲಾಗಿದೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಲಾಕ್ ಡೌನ್ ನೀತಿ ನಿಯಮಗಳನ್ನು ಸಾಂಸ್ಕೃತಿಕ ನಗರಿ ಜನತೆ ನಿರ್ಲಕ್ಷಿಸುತ್ತಿದೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗೆ ನಿರ್ಬಂಧ ಹೇರಲಾಗಿದೆ. ನಗರದ ಎನ್.ಆರ್ ಕ್ಷೇತ್ರ ಸೇರಿದಂತೆ ಹಲವೆಡೆ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಲ್ಲಿದೆ. ಸರ್ಕಾರಿ ಅಧಿಕಾರಿಗಳು, ಕೋವಿಡ್ ಕರ್ತವ್ಯನಿರತರು, ವೈದ್ಯರು, ನರ್ಸ್ ಗಳು, ಅಗತ್ಯ ವಸ್ತು, ಸರಕು ಸಾಗಣೆ ವಾಹನ ಕೃಷಿ ಸಲಕರಣೆ ವಾಹನ ಸಂಚಾರಕ್ಕೆ ಲಾಕ್ಡೌನ್ ನಿಂಸ ವಿನಾಯ್ತಿ ಇದೆ.

ಕೆಎಸ್ಆರ್ಟಿಸಿ, ಖಾಸಗಿ ಬಸ್ಸುಗಳು, ಆಟೋ, ಕ್ಯಾಬ್, ಟ್ಯಾಕ್ಸಿ, ಕಾರು, ದ್ವಿಚಕ್ರ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಲಾಕ್ಡೌನ್ ಹಿನ್ನೆಲೆ ನಗರದೆಲ್ಲೆಡೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನಗರದ ಕೆಲವೆಡೆ ಸಂಡೇ ಲಾಕ್ ಡೌನ್ ಗೆ ಡೋಂಟ್ ಕೇರ್ ಮಾಡಿದ್ದು, ವಿವಿಧ ಮೈದಾನಗಳಲ್ಲಿ ಕ್ರೀಡಾಪಟುಗಳು ಆಟಾಟೋಪದಲ್ಲಿ ತೊಡಗಿರುವಂತಿದೆ. ಕ್ರಿಕೆಟ್, ಫುಟ್ ಬಾಲ್, ಬ್ಯಾಡ್ಮಿಂಟನ್ ಆಡುವುದರಲ್ಲಿ ಜನರು ಮುಳುಗಿದ್ದಾರೆ.
ಬೀದರ್
ಸಂಡೇ ಲಾಕ್ ಡೌನ್ ನಿಂದಾಗಿ ಗಡಿ ಜಿಲ್ಲೆ ಬೀದರ್ ಸಂಪೂರ್ಣ ಬಂದ್ ಆಗಿದ್ದು, ಟ್ಯಾಕ್ಸಿ, ಆಟೋ ರಿಕ್ಷಾ, ಖಾಸಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೀದರ್ ಜಿಲ್ಲೆ ಡೆಂಜರ್ ಜೋನ್ ನಲ್ಲಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಅಲ್ಲಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಮಾಡಿದ್ದು, ಅನಗತ್ಯವಾಗಿ ರಸ್ತೆಗೆ ಬಂದ ವಾಹನ ಸವಾರಿಗೆ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ರಾಯಚೂರು
ರಾಯಚೂರು ಜಿಲ್ಲೆಯಲ್ಲಿ ಪೊಲೀಸರು ಸಂಡೇ ಲಾಕ್ ಡೌನ್ ನ್ನು ಬಿಗಿಗೊಳಿಸುತ್ತಿದ್ದಾರೆ. ರಾಯಚೂರು ನಗರದ ಪ್ರಮುಖ ರಸ್ತೆ ಹಾಗೂ ಸರ್ಕಲ್ ಗಳಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಕ್ರಮ ಕೈಗೊಳ್ಳುತ್ತಿದ್ದಾರೆ.
ಆಸ್ಪತ್ರೆ, ಮೆಡಿಕಲ್, ಹಾಲು, ಅಗ್ನಿಶಾಮಕ ಹೊರತು ಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟು ಬಂದ್ ಆಗಿದ್ದು, ಅನಾವಶ್ಯಕವಾಗಿ ಹೊರ ಬರುವವರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಸಂಡೇ ಮಟನ್ ಮಾರ್ಕೆಟ್ ಕೂಡಾ ಬಂದ್ ಮಾಡಲಾಗಿದ್ದು, ಪ್ರಮುಖ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿವೆ.












Click it and Unblock the Notifications