ರಾಜ್ಯದ ವಿವಿಧೆಡೆ ಸುರಿದ ಬೇಸಿಗೆ ಮಳೆ, ಇನ್ನೂ ಎರಡು ದಿನ ಮಳೆ ಸಂಭವ
ಬೆಂಗಳೂರು, ಏ.25: ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನೊಂದೆಡೆ ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ಬುಧವಾರ ಮಳೆಯಾಗಿದೆ.
ಚಿಕ್ಕಮಗಳೂರಿನ ಬಾಳೆ ಹೊನ್ನೂರಿನಲ್ಲಿ 4 ಸೆಂ.ಮೀ, ಉತ್ತರ ಕನ್ನಡದ ಮಂಚಿಕೇರಿ, ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ, ಜಯಪುರ, ಕಮ್ಮರಡಿಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಉತ್ತರ ಕನ್ನಡದ ಮುಂಡಗೋಡು, ಕೊಡಗಿನ ಪೊನ್ನಂಪೇಟೆ, ಕುಶಾಲನಗರ, ಶಿವಮೊಗ್ಗದ ಲಿಂಗನ ಮಕ್ಕಿ, ಆಗುಂಬೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 42.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ತಮಿಳುನಾಡಿಗೆ ಅಪ್ಪಳಿಸಲಿದೆ 'ಫ್ಯಾನಿ' ಚಂಡಮಾರುತ,ಎಲ್ಲೆಲ್ಲಿ ಮಳೆ ಸಾಧ್ಯತೆ?
ಬಂಗಾಳಕೊಲ್ಲಿಯಲ್ಲಿ ಫ್ಯಾನಿ ಚಂಡ ಮಾರುತ ಈ ವಾರದ ಅಂತ್ಯಕ್ಕೆ ಅಪ್ಪಳಿಸಲಿದ್ದು ಅದರ ಪ್ರಭಾವ ಕರ್ನಾಟಕದ ಮೇಲೂ ಉಂಟಾಗಲಿದೆ. ಶ್ರೀಲಂಕಾದಿಂದ ಭಾನುವಾರದಷ್ಟರೊಳಗೆ ಚಂಡ ಮಾರುತ ತಮಿಳುನಾಡನ್ನು ಪ್ರವೇಶಿಸಲಿದೆ. ಬಳಿಕ ಆಂಧ್ರಪ್ರದೇಶ, ಕೇರಳ, ಕರ್ನಾಟಕವನ್ನೂ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.