ಕಲಬುರಗಿ : 'ಮಾಶಾಳ ಖಾತ್ರಿ ಇಟ್ಟಿಗೆ' ಬಗ್ಗೆ ನಿಮಗೆ ಗೊತ್ತೆ?
ಕಲಬುರಗಿ, ಫೆಬ್ರವರಿ 4 : ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೇವಲ ಕೂಲಿಗಾಗಿ ಕೆಲಸ ಮಾಡಬಹುದು ಎಂದು ತಿಳಿಯುವುದು ತಪ್ಪು. ಯೋಜನೆಯಡಿ ಉನ್ನತ ಗುಣಮಟ್ಟದ ಇಟ್ಟಿಗೆಗಳನ್ನು ತಯಾರಿಸಬಹುದು ಎಂದು ಅಫ್ಜಲ್ಪುರ ತಾಲೂಕಿನ ಮಾಶಾಳ ಗ್ರಾಮದವರು ತೋರಿಸಿಕೊಟ್ಟಿದ್ದಾರೆ.
ಕಲಬುರಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ. ಅವರು ಉದ್ಯೋಗ ಖಾತ್ರಿ ಯೋಜನೆಯಡಿ ಇಟ್ಟಿಗೆಗಳನ್ನು ತಯಾರಿಸಬಹುದು ಎಂಬುದನ್ನು ತೋರಿಸಿದ್ದಾರೆ. ಮಾಶಾಳ ಗ್ರಾಮ ಪಂಚಾಯಿತಿಯಲ್ಲಿ 16 ಕೂಲಿಕಾರರು ಇಟ್ಟಿಗೆ ತಯಾರಿಕೆಯಲ್ಲಿ ತೊಡಗಿದ್ದಾರೆ. ['ಹಳ್ಳಿ ಮನೆ ರೊಟ್ಟಿಸ್' ರುಚಿ ಹಿಂದಿದೆ ಯಶಸ್ಸಿನ ಕಥೆ!]
ಈ ಇಟ್ಟಿಗೆಗಳ ಗುಣಮಟ್ಟವನ್ನು ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇವುಗಳಿಗೆ 'ಮಾಶಾಳ ಖಾತ್ರಿ ಇಟ್ಟಿಗೆ' ಎಂದು ಹೆಸರಿಡಲಾಗಿದೆ. 16 ಕೂಲಿ ಕಾರ್ಮಿಕರು ಪ್ರತಿದಿನ ಸುಮಾರು 400 ಇಟ್ಟಿಗೆಗಳನ್ನು ತಯಾರಿಸುತ್ತಿದ್ದು, ಈ ಇಟ್ಟಿಗೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳುವ ಕಟ್ಟಡಗಳಿಗೆ ಬಳಸಿಕೊಳ್ಳಲಾಗುತ್ತಿದೆ. [ಕಲಬುರಗಿ : ನಂದಿವನದ ಎತ್ತುಗಳಿಗೆ ಜಿಲ್ಲಾಡಳಿತದ ನೆರವು]
ಇಟ್ಟಿಗೆ ತಯಾರಿಯಲ್ಲಿ ತೊಡಗಿರುವ ಎಲ್ಲಾ ಕಾರ್ಮಿಕರಿಗೆ ಹೈದರಾಬಾದ್ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ 4 ದಿನಗಳ ಕಾಲ ಮಣ್ಣಿನಿಂದ ಇಟ್ಟಿಗೆ ತಯಾರಿಸುವ ತಂತ್ರಜ್ಞಾನದ ತರಬೇತಿ ನೀಡಲಾಗಿದೆ. ಇವು ಪರಿಸರ ಸ್ನೇಹಿ ಇಟ್ಟಿಗೆಗಳಾಗಿದ್ದು, ಸುಡುವ ಅವಶ್ಯಕತೆ ಇಲ್ಲ. ಇಟ್ಟಿಗೆ ತಯಾರಿ ಹೇಗೆ ಚಿತ್ರಗಳಲ್ಲಿ ವಿವರಗಳು......[ಉದ್ಯೋಗ ಖಾತರಿ ಯೋಜನೆ ಇಲ್ಲಿ ಯಶಸ್ವಿ]
ಉದ್ಯೋಗ ಖಾತ್ರಿ ಯೋಜನೆಯಡಿ ಇಟ್ಟಿಗೆ ತಯಾರಿ
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೇವಲ ಕೂಲಿ ಮಾಡಬೇಕಿಲ್ಲ. ಇಟ್ಟಿಗೆಗಳನ್ನು ತಯಾರಿಸಬಹುದು ಎಂದು ಅಫ್ಜಲ್ಪುರ ತಾಲೂಕಿನ ಮಾಶಾಳ ಗ್ರಾಮದವರು ತೋರಿಸಿಕೊಟ್ಟಿದ್ದಾರೆ. ಕಲಬುರಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ. ಅವರ ಶ್ರಮ ಈ ಆಲೋಚನೆಯ ಹಿಂದಿದೆ.
16 ಕಾರ್ಮಿಕರಿಂದ ಇಟ್ಟಿಗೆ ತಯಾರಿ
ಮಾಶಾಳ ಗ್ರಾಮ ಪಂಚಾಯಿತಿಯಲ್ಲಿ 16 ಕೂಲಿಕಾರರು ಇಟ್ಟಿಗೆ ತಯಾರಿಕೆಯಲ್ಲಿ ತೊಡಗಿದ್ದಾರೆ. ಕಾರ್ಮಿಕರು ಪ್ರತಿದಿನ ಸುಮಾರು 400 ಇಟ್ಟಿಗೆಗಳನ್ನು ತಯಾರಿಸುತ್ತಿದ್ದು, ಇವುಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳುವ ಕಟ್ಟಡಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಮಣ್ಣಿನಿಂದ ಇಟ್ಟಿಗೆ ತಯಾರಿಸಲು ತರಬೇತಿ
ಉದ್ಯೋಗ ಖಾತ್ರಿ ಯೋಜನೆಯಡಿ ಕೇವಲ ಕೌಶಲ್ಯ ರಹಿತ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ತರಬೇತಿ ನೀಡಿ ಕೌಶಲ್ಯರನ್ನಾಗಿಸುವುದು ಯೋಜನೆಯ ಆಶಯವಾಗಿದೆ. ಇದರಂತೆ ಮಾಶಾಳ ಗ್ರಾಮದ 10 ಹಾಗೂ ಇನ್ನಿತರ ಗ್ರಾಮ ಪಂಚಾಯತಿಗಳ 6 ಹೀಗೆ ಒಟ್ಟು 16 ಕಾರ್ಮಿಕರಿಗೆ ಹೈದರಾಬಾದ್ನಲ್ಲಿ ಮಣ್ಣಿನಿಂದ ಇಟ್ಟಿಗೆ ತಯಾರು ಮಾಡುವ ಕುರಿತು 4 ದಿನಗಳ ತರಬೇತಿ ನೀಡಲಾಗಿದೆ.
ಇಟ್ಟಿಗೆ ತಯಾರಿಸುವ ವಿಧಾನ
ಮಧ್ಯಮ ಗಾತ್ರದ 10 ಬುಟ್ಟಿ ಹಾಳು ಮಣ್ಣು, 2 ಬುಟ್ಟಿ ಕಲ್ಲಿನ ಪುಡಿ ಹಾಗೂ ಒಂದು ಬುಟ್ಟಿ ಸಿಮೆಂಟ್ಅನ್ನು ಹದ ಬರುವವರೆಗೆ ಸುಣ್ಣದ ನೀರನ್ನು ಹಾಕಿ ಮಿಶ್ರಣ ತಯಾರಿಸಿಕೊಳ್ಳಲಾಗುತ್ತದೆ. ನಂತರ ಯಂತ್ರದ ಸಹಾಯದಿಂದ ಇಟ್ಟಿಗೆ ಸಿದ್ಧಪಡಿಸಲಾಗುತ್ತದೆ. ಇಟ್ಟಿಗೆಯನ್ನು 21 ದಿನಗಳ ಕಾಲ ನೀರಿನಿಂದ ಕ್ಯೂರಿಂಗ್ ಮಾಡಿದರೆ ಸಾಮಾನ್ಯ ಇಟ್ಟಿಗೆಗಳಿಗಿಂತ ಬಲಿಷ್ಠವಾಗುತ್ತವೆ.
ಪರಿಸರ ಸ್ನೇಹಿ ಇಟ್ಟಿಗೆಗಳು
ಇಟ್ಟಿಗೆಗಳ ಗುಣಮಟ್ಟದ ಕುರಿತು ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇವುಗಳಿಗೆ 'ಮಾಶಾಳ ಖಾತ್ರಿ ಇಟ್ಟಿಗೆ' ಎಂದು ಹೆಸರಿಡಲಾಗಿದೆ. ಇವು ಪರಿಸರ ಸ್ನೇಹಿ ಇಟ್ಟಿಗೆಗಳಾಗಿದ್ದು, ಸುಡುವ ಅವಶ್ಯಕತೆ ಇಲ್ಲ. ಇವು ಸುಟ್ಟ ಇಟ್ಟಿಗೆಗಳಿಗಿಂತ ಎರಡು ಪಟ್ಟು ಗಾತ್ರದಲ್ಲಿ ದೊಡ್ಡದಾಗಿದ್ದು, ನುಣುಪಾಗಿವೆ.
84 ಸಾವಿರ ರೂ.ಗಳ ಯಂತ್ರ
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವೊಂದು ಯಂತ್ರಗಳನ್ನು ಬಳಸಬಹುದಾಗಿದೆ. ಇವುಗಳಲ್ಲಿ ಇಟ್ಟಿಗೆ ತಯಾರಿಸುವ ಯಂತ್ರ ಒಂದಾಗಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯವರು ಕಂಡು ಹಿಡಿದ ಮರ್ದಿನಿ ಪ್ರೆಸ್ ಮಣ್ಣಿನ ಇಟ್ಟಿಗೆ ತಯಾರಿಸುವ ಯಂತ್ರವನ್ನು ಬೆಂಗಳೂರಿನ ಮಹಿಮಾಯಾ ಎಜೆನ್ಸಿಯವರು ತಯಾರಿಸಿ 84 ಸಾವಿರ ರೂ.ಗಳಲ್ಲಿ ಸರಬರಾಜು ಮಾಡಿದ್ದಾರೆ.
ಕಾರ್ಮಿಕರಿಗೆ ಪ್ರೋತ್ಸಾಹ ನೀಡಲಾಗುತ್ತದೆ
ಕಲಬುರಗಿ ಜಿಲ್ಲೆಯ ಇತರ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿಯಡಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದಲ್ಲಿ ಈ ರೀತಿಯ ಇಟ್ಟಿಗೆ ತಯಾರಿಸುವ ಘಟಕಗಳನ್ನು ಪ್ರಾರಂಭಿಸುವ ಚಿಂತನೆ ಇದೆ ಎನ್ನುತ್ತಾರೆ ಅನಿರುದ್ಧ ಶ್ರವಣ. ಕಾರ್ಮಿಕರು ತಮ್ಮದೇ ಘಟಕಗಳನ್ನು ಪ್ರಾರಂಭಿಸಿ ಆರ್ಥಿಕವಾಗಿ ಸಬಲರಾಗಲು ಮುಂದೆ ಬಂದರೆ ಪ್ರೋತ್ಸಾಹವನ್ನು ನೀಡಲಾಗುತ್ತದೆ.