ಮಕ್ಕಳ ನಾಪತ್ತೆ ಪ್ರಕರಣ: ಶಾಲಾ ಶಿಕ್ಷಕರಿಗೆ ಹೈಕೋರ್ಟ್ ವಾರ್ನಿಂಗ್
ಬೆಂಗಳೂರು. ನ.1. ಇತ್ತೀಚೆಗೆ ಬೆಂಗಳೂರು ನಗರದ ಸೆಂಟ್ ಜೋಸಫ್ ಕಾನ್ವೆಂಟ್ ಖಾಸಗಿ ಶಾಲೆಯ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಹೈಕೋರ್ಟ್ ಶಾಲೆಗೆ ವಾರ್ನಿಂಗ್ ನೀಡಿದೆ. ಅಷ್ಟೇ ಅಲ್ಲ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲಾಗುವುದು, ಮಕ್ಕಳ ನಡುವೆ ತಾರತಮ್ಯ ಮಾಡುವುದಿಲ್ಲವೆಂದು ಮುಚ್ಚಳಿಕೆ ಬರೆಸಿಕೊಂಡಿದೆ.
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳನ್ನು ತಾರತಮ್ಯದಿಂದ ನೋಡಬಾರದು ಮತ್ತು ಮನಸ್ಸಿಗೆ ನೋವುಂಟಾಗುವಂತೆ ನಡೆದುಕೊಳ್ಳಬಾರದು ಎಂದು ಶಾಲಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದೆ.
ನಗರದ ಸೆಂಟ್ ಜೋಸಫ್ ಕಾನ್ವೆಂಟ್ ವಿದ್ಯಾರ್ಥಿನಿಯರ ಶಾಲೆಯ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆ ಪ್ರಕರಣ ಸಂಬಂಧ ಶಾಲಾ ಮುಖ್ಯ ಶಿಕ್ಷಕಿ ಪಿ.ವಿ. ಸಿಸ್ಟರ್ ಕ್ಲಾರ ಸಲ್ಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿ ಆಲಿಸಿದ ನ್ಯಾ.ಬಿ.ವೀರಪ್ಪ ಮತ್ತು ಕೆ.ಎಸ್.ಹೇಮಲೇಖ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ನ್ಯಾಯಪೀಠದ ಸೂಚನೆ ಮೇರೆಗೆ, ಮಕ್ಕಳು ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ವಾರ್ಡನ್ ಅವರಿಗೆ ಕ್ಷಮೆ ಕೋರಿ ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಜತೆಗೆ, ಮುಂದಿನದ ದಿನಗಳಲ್ಲಿ ವಿದ್ಯಾಬ್ಯಾಸ ಮುಂದುವರೆಸಲು ಹೆಚ್ಚಿನ ಗಮನ ಹರಿಸಿ ಉತ್ತಮ ಪ್ರಜೆಗಳಾಗುವುದಾಗಿ ಭರವಸೆ ನೀಡಿದರು.
ಶಿಕ್ಷಕರಿಂದ ಪ್ರಮಾಣ ಪತ್ರ:
"ಸುಮಾರು 127 ವರ್ಷಗಳ ಇತಿಹಾಸವಿರುವ ಶಿಕ್ಷಣ ಸಂಸ್ಥೆಯಾದ ಸೆಂಟ್ ಜೋಸಫ್ ಕಾನ್ವೆಂಟ್ ವಿದ್ಯಾರ್ಥಿನಿಯರ ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿನಿಯ ಘನತೆ ಮತ್ತು ಯೋಗಕ್ಷೇಮಕ್ಕೆ ಆಧ್ಯತೆ ನೀಡಿದ್ದೇವೆ. ಮುಂದೆಯೂ ಅದನ್ನೇ ಮುಂದುವರೆಸುತ್ತೇವೆ. ಜತೆಗೆ, ಯಾವುದೇ ಕಾರಣಕ್ಕೆ ಮಕ್ಕಳಲ್ಲಿ ತಾರತಮ್ಯವನ್ನು ಅನುಸರಿಸುವುದಿಲ್ಲ" ಎಂದು ಶಾಲೆಯ ಮುಖ್ಯ ಶಿಕ್ಷಕಿ ಕ್ಲಾರ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಮಕ್ಕಳು ತಪ್ಪು ದಾರಿಗೆ ಹೋದಲ್ಲಿ ಅವರನ್ನು ಸರಿ ಪಡಿಸುವುದಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಎಲ್ಲ ಸಿಬ್ಬಂದಿಗೆ ನಿರ್ದೇಶನ ನೀಡಲಾಗುವುದು. ಮಕ್ಕಳೊಂದಿಗೆ ಏರು ಧ್ವನಿಯಿಂದ ಮಾತನಾಡುವುದು ಮತ್ತು ಭಾವನೆಗಳಿಗೆ ಧಿಕ್ಕೆಯಾಗದಂತೆ ವರ್ತಿಸಲು ಸೂಚಿಸುತ್ತಿರುತ್ತೇನೆ. ಭವಿಷ್ಯದಲ್ಲಿ ಮಕ್ಕಳಿಗೆ ಯಾವುದೇ ಸಿಬ್ಬಂದಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ.
ಅಲ್ಲದೆ, ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಜ್ಞಾನವನ್ನು ವೃದ್ಧಿಸಲು ಮನಶಾಸ್ತ್ರಜ್ಞರಿಂದ ಕಾಲ ಕಾಲಕ್ಕೆ ತರಬೇತಿ ಕಾರ್ಯಾಗಾರ ಕೈಗೊಳ್ಳಲಾಗುವುದು ಎಂಬುದಾಗಿ ನ್ಯಾಯಪೀಠಕ್ಕೆ ಪ್ರಮಾಣ ಪತ್ರದ ಮೂಲಕ ಭರವಸೆ ನೀಡಿದ್ದಾರೆ. ಈ ಅಂಶವನ್ನು ದಾಖಲಿಸಿಕೊಂಡ ಪ್ರಕರಣವನ್ನು ಇತ್ಯರ್ಥ ಪಡಿಸಿತು.
ಮಾನವೀಯತೆಯಿಂದ ನಡೆದುಕೊಳ್ಳಿ:
ಮಕ್ಕಳೊಂದಿಗೆ ಮಾನವೀತೆಯಿಂದ ನಡೆದುಕೊಳ್ಳಬೇಕು. ಶೈಕ್ಷಣಿಕ ಭವಿಷ್ಯ ರೂಪಿಸುವಲ್ಲಿ ಪೋಷಕರು ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಶ್ರಮಿಸಬೇಕು ಎಂದು ಸೂಚನೆ ನೀಡಿದೆ.
ಜತೆಗೆ, ಇಬ್ಬರೂ ಮಕ್ಕಳನ್ನು ಮಾನಸಿಕ ತಜ್ಞರಿಂದ ಕೌನ್ಸಿಲಿಂಗ್ಗೆ ಒಳಪಡಿಸಬೇಕು. ಶಿಕ್ಷಣ ಸಂಸ್ಥೆಯ ಯಾವುದೇ ಸಿಬ್ಬಂದಿ ಮಕ್ಕಳ ಭಾವನೆಗೆ ನೋವುಂಟು ಮಾಡುವ ರೀತಿಯಲ್ಲಿ ವರ್ತಿಸಬಾರದು. ಮಕ್ಕಳಲ್ಲಿ ಭೇದವನ್ನುಂಟು ಮಾಡುವ ಮಾತುಗಳನ್ನಾಡಬಾರದು. ಸ್ವಂತ ಮಕ್ಕಳಂತೆ ನೋಡಿಕೊಂಡು ಶಿಕ್ಷಣ ಮುಂದುವರೆಸಲು ನೆರವಾಗಬೇಕು ಎಂದು ಸೂಚನೆ ನೀಡಿತು.












Click it and Unblock the Notifications