ವಿಶೇಷ ಫೋಟೋ ಜೊತೆ ಮಾನವೀಯತೆ ಕರೆ ಕೊಟ್ಟ ಬಿಎಸ್ವೈ
ಬೆಂಗಳೂರು, ಏಪ್ರಿಲ್ 10 : ಒಂದು ಕಡೆ ಬಿರು ಬಿಸಿಲು, ಮತ್ತೊಂದು ಕಡೆ ಕೊರನಾ ಲಾಕ್ ಡೌನ್. ಜನರು ಅಗತ್ಯ ವಸ್ತುಗಳಿಗಾಗಿ ಪರದಾಟ ನಡೆಸುತ್ತಿದ್ದಾರೆ. ಹಾಗಾದರೆ ಪ್ರಾಣಿಗಳ ಕಥೆ ಏನು?. ಸಾಕು ಪ್ರಾಣಿಗಳು, ಬೀದಿಯಲ್ಲಿರುವ ಪ್ರಾಣಿಗಳ ಬಗ್ಗೆ ಜನರು ಕಾಳಜಿ ವಹಿಸಬೇಕು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಕ್ರವಾರ ವಿಶೇಷ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಫೋಟೋದೊಂದಿಗೆ ರಾಜ್ಯದ ಜನತೆಗೆ ಕರೆಯೊಂದನ್ನು ಕೊಟ್ಟಿದ್ದಾರೆ.
ಕೊರೊನಾ ಪ್ರಕರಣ, ಲಾಕ್ ಡೌನ್ನಂತಕ ಗಂಭೀರ ಸಮಸ್ಯೆಗಳ ನಡುವೆ ಯಡಿಯೂರಪ್ಪ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ವಿವಿಧ ಸಭೆಗಳನ್ನು ನಡೆಸುತ್ತಿದ್ದಾರೆ.

ಒತ್ತಡದ ನಡುವೆಯೇ ತಮ್ಮ ಮನೆಯ ಆವರಣದಲ್ಲಿ ಬೆಕ್ಕಿಗೆ ಹಾಲನ್ನು ನೀಡಿದ್ದಾರೆ. ಬೆಕ್ಕಿನ ಜೊತೆ ಇರುವ ಫೋಟೋವನ್ನು ಶೇರ್ ಮಾಡುವ ಮೂಲಕ ಜನರಿಗೆ ಕರೆಯೊಂದನ್ನು ನೀಡಿದ್ದಾರೆ.
"ಬಿಸಿಲ ಬೇಗೆ, ಲಾಕ್ ಡೌನ್ ಬಿಸಿ ನಾಯಿ, ಬೆಕ್ಕುಗಳಂತಹ ಸಾಕು ಪ್ರಾಣಿಗಳಿಗೂ ತಟ್ಟಿದೆ. ಪಕ್ಷಿಗಳೂ ಸಹ ಆಹಾರ, ನೀರಿಗಾಗಿ ಪರಿತಪಿಸುತ್ತಿವೆ. ಸಾಧ್ಯವಾದಷ್ಟೂ ಅವುಗಳಿಗೆ ಆಹಾರ, ನೀರು ಸಿಗುವಂತೆ ಮಾಡೋಣ, ಮಾನವೀಯತೆ ಮೆರೆಯೋಣ" ಎಂದು ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಟ್ವೀಟ್
ಬಿಸಿಲ ಬೇಗೆ, ಲಾಕ್ ಡೌನ್ ಬಿಸಿ ನಾಯಿ, ಬೆಕ್ಕುಗಳಂತಹ ಸಾಕು ಪ್ರಾಣಿಗಳಿಗೂ ತಟ್ಟಿದೆ. ಪಕ್ಷಿಗಳೂ ಸಹ ಆಹಾರ, ನೀರಿಗಾಗಿ ಪರಿತಪಿಸುತ್ತಿವೆ.
— CM of Karnataka (@CMofKarnataka) April 10, 2020
ಸಾಧ್ಯವಾದಷ್ಟೂ ಅವುಗಳಿಗೆ ಆಹಾರ, ನೀರು ಸಿಗುವಂತೆ ಮಾಡೋಣ, ಮಾನವೀಯತೆ ಮೆರೆಯೋಣ.#ಮನೆಯಲ್ಲೇಇರಿ@BSYBJP pic.twitter.com/z5qOOfyRAw
ಮುಖ್ಯಮಂತ್ರಿಯಾದ ದಿನದಿಂದ ಬಿ. ಎಸ್. ಯಡಿಯೂರಪ್ಪ ಡಾಲರ್ಸ್ ಕಾಲೋನಿಯ 'ಧವಳಗಿರಿ' ನಿವಾಸದಲ್ಲಿದ್ದರು. ಕಳೆದ ವಾರ ಅವರು ಗೃಹ ಕಚೇರಿ 'ಕೃಷ್ಣ' ಪಕ್ಕದ ಕಾವೇರಿ ನಿವಾಸಕ್ಕೆ ವಾಸ್ತವ್ಯ ಬದಲಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಹಲವು ಸಂಘಟನೆಗಳು ಬೀದಿ ನಾಯಿಗಳಿಗೆ ಆಹಾರ ನೀಡುತ್ತಿವೆ. ರಸ್ತೆಯಲ್ಲಿರುವ ದನಗಳಿಗೆ ಮೇವನ್ನು ಒದಗಿಸುತ್ತಿವೆ.












Click it and Unblock the Notifications