ಸಮಾಜವನ್ನು ಮಿಲಿಟರೀಕರಣ ಮಾಡುವುದು ಬೇಡ: ಸಿಎಫ್ಐ
ಬೆಂಗಳೂರು ಜೂ. 17: ನಮಗೆ ವಿದ್ಯೆ ಬೇಕು ಹೊರತು ಅಗ್ನಿ ಅಲ್ಲ. ಯೋಜನೆ ಹೆಸರಿನಲ್ಲಿ ಸಮಾಜವನ್ನು ಮಿಲಿಟರೀಕರಣಗೊಳಿಸುವುದು ಆರ್ಎಸ್ಎಸ್ನ ಉದ್ದೇಶವಾಗಿದೆ. ಕೂಡಲೇ ಅಲ್ಪಾವಧಿ ಸೇವೆ ನೀಡಲು ಇತ್ತೀಚೆಗೆ ಜಾರಿಗೊಳಿಸಿದ "ಅಗ್ನಿಪಥ್ ನೇಮಕಾತಿ ಯೋಜನೆ'ಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಆಗ್ರಹಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸಿಎಫ್ಐ ಅಧ್ಯಕ್ಷ ಎಂ.ಎಸ್. ಸಾಜಿದ್, ಭಾರತೀಯ ಸೇನೆಗೆ ಮಕ್ಕಳನ್ನು ಸೇರಿಸಿಕೊಳ್ಳುವ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವ ಮತ್ತೊಂದು ಮಾರ್ಗವಾಗಿದೆ ಎಂದು ದೂರಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಅಥವಾ ಮಕ್ಕಳದ್ದು ವೈಯಕ್ತಿಕ ವಿಕಸನ ಹೊಂದುವ ನವಿರಾದ ವಯಸ್ಸು. ಈ ವಯಸ್ಸಿನಲ್ಲಿ ಅವರಿಗೆ ಶಿಕ್ಷಣ ಬೇಕು. ಆದರೆ ಕೇಂದ್ರ ಸರ್ಕಾರ ಇದೇ ವಯಸ್ಸಿನಲ್ಲಿ ಆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುವ ಬದಲು ಶಸ್ತ್ರಾಸ್ತ್ರ ತರಬೇತಿ ನೀಡಲು ನಿರ್ಧರಿಸಿರುವ ಕ್ರಮ ಸರಿಯಲ್ಲ. ಇಂತಹ ಯೋಜನೆಗಳ ಮೂಲಕ ಮಕ್ಕಳ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನ:
ಉದಯೋನ್ಮುಖ ಪೀಳಿಗೆಗೆ ಸರಿಯಾದ ಶೈಕ್ಷಣಿಕ ವಾತಾವರಣ ಮತ್ತು ವಿದ್ಯಾರ್ಥಿ ವೇತನವನ್ನು ನೀಡುವ ದೊಡ್ಡ ಜವಾಬ್ದಾರಿಯಿಂದ ಬಿಜೆಪಿ ಸರ್ಕಾರ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದ ಭಾಗವಾಗಿಯೇ ಅಗ್ನಿಪಥ್ ಯೋಜನೆ ಜಾರಿಗೊಳಿಸಿದೆ. ಸಮಾಜವನ್ನು ಮಿಲಿಟರೀಕರಣ ಗೊಳಿಸುವುದು ಆರ್ ಎಸ್ ಎಸ್ ನ ಯೋಜನೆಯಾಗಿದೆ ಎಂದರು.
4 ವರ್ಷದ ಸೇನೆ ನಂತರ ಸಂಕಷ್ಟ
ಯೋಜನೆಯ ಪ್ರಕಾರ, ಅಲ್ಪಾವಧಿಯ 4-ವರ್ಷದ ಸೇವೆಯ ನಂತರ, ಯುವಕರನ್ನು ಕಡ್ಡಾಯವಾಗಿ ಹುದ್ದೆಯಿಂದ ಹೊರ ದೂಡಲಾಗುತ್ತದೆ. ಆಗ ಯಾವುದೇ ಆಯ್ಕೆ ಮತ್ತು ಅವಕಾಶಗಳಿಲ್ಲದೆ ಯುವಕರು ಸಂಕಷ್ಟ ಎದುರಿಸಬೇಕಾಗುತ್ತದೆ. ಸರ್ಕಾರ ಮತ್ತು ಆರ್.ಎಸ್.ಎಸ್ ಸ್ವಾರ್ಥಕ್ಕಾಗಿ ಯುವಕರನ್ನು ಬಳಸಿಕೊಳ್ಳಲು ಹೊರಟಂತಿದೆ. ಅಗ್ನಿಪಥ್ ಯೋಜನೆ ಭವಿಷ್ಯದಲ್ಲಿ ದೇಶ ಸ್ಥಿತಿಯನ್ನು ಉನ್ನತೀಕರಿಸುತ್ತದೆ ಎಂಬ ನಂಬಿಕೆ ಇಲ್ಲದಾಗಿದೆ. ಈ ಸಂಬಂಧ ವಿನಿಯೋಗಿಸುವ ಹಣವನ್ನು ಉತ್ತಮ ಶಿಕ್ಷಣ ಒದಗಿಸಲು, ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು ಎಂದು ಕ್ಯಾಂಪಸ್ ಫ್ರಂಟ್ ಒತ್ತಾಯಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video