ರಾಜ್ಯಗಳ ಪುನರ್ವಿಂಗಡಣಾ ಕಾಯ್ದೆ; ಭಾಷಾವಾರು ಪ್ರಾಂತಗಳ ರಚನೆಯೇ ಅಂತಿಮ: ಬಸವರಾಜ ಬೊಮ್ಮಾಯಿ
ಬೆಳಗಾವಿ,ಡಿಸೆಂಬರ್ 21: ರಾಜ್ಯದ ಗಡಿ ವಿಚಾರದಲ್ಲಿ ನಾಡಿನ ಹಿತಕಾಪಾಡುವ ನಿಲುವು ಅಚಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಮಂಡಿಸಿದ ನಿಲುವಳಿ ಸೂಚನೆಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾತನಾಡಿ, ಈ ನಿಲುವಿನಿಂದ ಒಂದಿಂಚೂ ಕೂಡ ಹಿಂದೆ ಸರಿಯುವುದಿಲ್ಲ. ಈ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಸ್ವೀಕರಿಸಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವ್ಯಾಜ್ಯ ಪ್ರಕರಣ ಸರ್ವೋಚ್ಛ ನ್ಯಾಯಾಲಯದಲ್ಲಿದೆ.ಗಡಿ ವ್ಯಾಜ್ಯಗಳು ಸಂವಿಧಾನಬದ್ಧವಾಗಿ ಸಂಸತ್ತಿನಲ್ಲಿಯೇ ಪರಿಹಾರವಾಗಬೇಕಾಗಿರುವದರಿಂದ,ನ್ಯಾಯಾಲಯದಲ್ಲಿ ಮಹಾರಾಷ್ಟ್ರ ಸರ್ಕಾರ ದಾಖಲಿಸಿರುವ ಪ್ರಕರಣ ನಿರ್ವಹಣೆಯಾಗಬೇಕೆ(Maintainability) ಎಂಬುದರ ಬಗ್ಗೆಯೇ ಈಗ ವಿಚಾರಣೆ ನಡೆಯುತ್ತಿದೆ.ಪ್ರಕರಣದ ನಿರ್ವಹಣೆ ಸಮರ್ಥನೀಯವಲ್ಲ.ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಂದ ಕೂಡಲೇ ಮಹಾರಾಷ್ಟ್ರ ಮುಖ್ಯಮಂತ್ರಿಗಳು ನೀಡಿದ ಪ್ರತಿಕ್ರಿಯೆಗೆ ತಾವು ಕೂಡ ತೀಕ್ಷ್ಣ ಉತ್ತರ ನೀಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯಕ್ಕೆ ಮಹಾರಾಷ್ಟ್ರದ ಮಂತ್ರಿಗಳು,ಸಂಸದರು ಪ್ರವೇಶಿಸದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರಕ್ಕೆ ಬರೆದಿರುವ ಪತ್ರ ಮಹತ್ವದ ದಾಖಲೆಯಾಗಲಿದೆ. ಮಹಾರಾಷ್ಟ್ರದ ರಾಜಕಾರಣಿಗಳು,ಸಂಘಟನೆಗಳು ಪ್ರಚೋದನಕಾರಿ ಹೇಳಿಕೆ ನೀಡಿ ಉದ್ವಿಗ್ನ ವಾತಾವರಣ ಉಂಟು ಮಾಡಲು ಪ್ರಯತ್ನಿಸಿದರೂ ಕೂಡ ,ನಮ್ಮ ರಾಜ್ಯದ ಆಡಳಿತ ಪಕ್ಷವಾಗಲಿ,ಪ್ರತಿಪಕ್ಷಗಳಾಗಲಿ ,ಸಂಘಟನೆಗಳಾಗಲಿ ಇಂತಹ ಯಾವುದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದೇ ಸಂಯಮ ,ಜವಾಬ್ದಾರಿ ತೋರಿಸಿವೆ.
ಗಡಿ ಭಾಗದ ಜನಸಾಮಾನ್ಯರಿಗೆ,ವ್ಯಾಪಾರಿಗಳಿಗೆ ತೊಂದರೆಯಾಗಬಾರದು ಎರಡೂ ಕಡೆ ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಕೇಂದ್ರ ಗೃಹ ಸಚಿವರು ಕರೆದ ಸಭೆಗೆ ಹಾಜರಾಗಿ, ರಾಜ್ಯದ ಹಿತ ಕಾಯುವ ನಿಲುವನ್ನು ಸ್ಪಷ್ಟಪಡಿಸಿ ಬಂದಿದ್ದೇನೆ.ಅನಧಿಕೃತ ಟ್ವಿಟರ್ ಖಾತೆಯಿಂದ ವ್ಯಕ್ತವಾಗಿದ್ದ ಪ್ರಚೋದನಕಾರಿ ಅಭಿಪ್ರಾಯ ತಮ್ಮದಲ್ಲ ಎಂದು ಆ ಸಭೆಯಲ್ಲಿ ಸ್ಪಷ್ಟಪಡಿಸಿದ್ದೇನೆ.ಸಭೆಯ ನಂತರ ಮಾಧ್ಯಮಗಳಿಗೂ ಈ ವಿವರ ನೀಡಿದ್ದೇನೆ. ಸಮಯದ ಅಭಾವದ ಕಾರಣ ಸರ್ವಪಕ್ಷ ಕರೆದು ಅಭಿಪ್ರಾಯಗಳನ್ನು ಪಡೆಯಲು ಸಾಧ್ಯವಾಗಲಿಲ್ಲ.ಮುಂದೆಯೂ ಈ ಕುರಿತು ಸರ್ವಪಕ್ಷ ಸಭೆ ನಡೆಸಲಾಗುವುದು.ಶಿಕ್ಷಣ,ಆರೋಗ್ಯ,ವ್ಯಾಪಾರ ಸೇರಿದಂತೆ ಅನೇಕ ಕಾರಣಗಳಿಗಾಗಿ ಪ್ರತಿನಿತ್ಯದ ಒಡನಾಟ ಗಡಿ ಭಾಗದ ಪ್ರದೇಶಗಳಲ್ಲಿರುತ್ತವೆ.ಅವುಗಳಿಗೆ ಸಮಸ್ಯೆಯಾಗದಂತೆ ರಾಜ್ಯಗಳ ಹಂತದಲ್ಲಿಯೇ ಕ್ರಮವಹಿಸಲು ಕೇಂದ್ರ ಸಚಿವರು ಸೂಚನೆ ನೀಡಿದ್ದಾರೆ.

ಗಡಿ ಆಚೆಗಿರುವ ಕನ್ನಡಿಗರ ಹಿತರಕ್ಷಣೆಗೂ ಸರ್ಕಾರ ಬದ್ಧವಾಗಿದೆ.ರಾಜ್ಯಗಳ ಪುನರ್ವಿಂಗಡಣಾ ಕಾಯ್ದೆ ಹಾಗೂ ಭಾಷಾವಾರು ಪ್ರಾಂತಗಳ ರಚನೆಯಡಿ ನಿರ್ಧಾರವಾಗಿರುವ ಗಡಿಗಳೇ ಅಂತಿಮ ಈ ವಿಷಯದಲ್ಲಿ ಅನಗತ್ಯ ತಂಟೆ,ತಗಾದೆಗಳಿಗೆ ರಾಜ್ಯ ಕಿವಿಗೊಡುವುದಿಲ್ಲ ಎಂದು ಹೇಳಿದರು.
ಗಡಿ ವಿವಾದ; ಅಮಿತ್ ಶಾ ಸಂಧಾನ ಸಭೆಗೆ ಹೋಗಬಾರದಿತ್ತು: ಸಿದ್ದರಾಮಯ್ಯ
ಗಡಿ ವಿವಾದವೇ ಇಲ್ಲದಿರುವುದನ್ನು ವಿವಾದವಿದೆ ಎಂದು ಬಿಂಬಿಸಲು ಹೊರಟಿರುವ ಇಂಥಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಒಳ್ಳೆ ಲಾಯರ್ ಅವರನ್ನು ನೇಮಿಸಿ ವಾದ ಮಾಡಿಸಬೇಕು. ಇನ್ನೊಂದು ಮುಖ್ಯ ವಿಚಾರವೆಂದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಮಿತ್ ಶಾ ಅವರು ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ನಡುವಿನ ಸಂಧಾನ ಸಭೆಗೆ ಹೋಗಬಾರದಿತ್ತು ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕಾರಣ ಇಲ್ಲಿ ವಿವಾದ ಇದೆ ಎಂಬುದನ್ನು ತೋರಿಸಬೇಕು ಎಂಬುದೇ ಮಹಾರಾಷ್ಟ್ರದ ಉದ್ದೇಶವಾಗಿತ್ತು. ಅವರ ಉದ್ದೇಶ ಇದರಿಂದ ಈಡೇರಿದಂತಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇಂದ್ರದಲ್ಲಿ ತ್ರಿಪಲ್ ಇಂಜಿನ್ ಸರ್ಕಾರ ಇದೆ. ಇಂಥಾ ಸಂದರ್ಭದಲ್ಲಿ ಬಿಕ್ಕಟ್ಟನ್ನು ನಿವಾರಣೆ ಮಾಡುವುದು ಕೇಂದ್ರ ಸರ್ಕಾರದ ಕೆಲಸ. ಕೇಂದ್ರ ಸರ್ಕಾರ ಮಹಾರಾಷ್ಟ್ರದವರಿಗೆ ಕರೆದು ಇದರ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿದೆ, ಹಾಗಾಗಿ ನೀವು ಇಂಥಾ ಪುಂಡಾಟಗಳನ್ನು ನಿಲ್ಲಿಸಿ ಎಂದು ಬುದ್ದಿ ಹೇಳಬೇಕಿತ್ತು.
ಏಕನಾಥ್ ಶಿಂಧೆ ಸರ್ಕಾರ ಬೆಳಗಾವಿಗೆ ತನ್ನ 3 ಜನ ಮಂತ್ರಿಗಳನ್ನು ಕಳಿಸಿಕೊಡುವುದಾಗಿ ಹೇಳಿತ್ತು. ಸರ್ಕಾರ ಆ ಸಂದರ್ಭದಲ್ಲಿ 144 ಸೆಕ್ಷನ್ ಹಾಕಿ ಅವರು ಬರದಂತೆ ಮಾಡಿದೆ, ನಾವು ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಇದೇ ರೀತಿ ಅವರನ್ನು ಬರದಂತೆ ತಡೆದಿದ್ದೆವು. ಈ ವಿಚಾರವನ್ನು ಜೀವಂತವಾಗಿಟ್ಟು ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂಬುದು ಮಹಾರಾಷ್ಟ್ರ ಸರ್ಕಾರದ ದುರುದ್ದೇಶ. ಈಗ ಮಹಾರಾಷ್ಟ್ರದ ಮೂರು ಸಚಿವರು ಮತ್ತು ಕರ್ನಾಟಕದ ಮೂವರು ಮಂತ್ರಿಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿದೆ, ಆದರೆ ಇದಕ್ಕೆ ರಾಜ್ಯ ಸರ್ಕಾರ ಒಪ್ಪಬಾರದಿತ್ತು.
ಕರ್ನಾಟಕದ ನಿಲುವು ಮೊದಲಿಂದಲೂ ಒಂದಿಂಚು ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂಬುದಾಗಿತ್ತು, ಆದರೆ ಈ ಸಮಿತಿ ರಚನೆ ಮಾಡಿರುವುದರಿಂದ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದು ನಮ್ಮ ಪಕ್ಷದ ನಾಯಕರುಗಳ ಆತಂಕ. ನೆಲ, ಜಲ, ಭಾಷೆ ಇಂಥಾ ವಿಚಾರಗಳಲ್ಲಿ ನಾವು ಈ ವರೆಗೆ ಒಮ್ಮತದ ನಿಲುವನ್ನು ಹೊಂದಿದ್ದೆವು. ನಾಡಿನ ಒಂದಿಂಚು ಜಾಗವನ್ನು ಬಿಟ್ಟುಕೊಟ್ಟರು ಅದು ನಾಡದ್ರೋಹವಾಗುತ್ತದೆ. ರಾಜ್ಯದ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸುಖಾಸುಮ್ಮನೆ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಆತಂಕ ನಿರ್ಮಾಣ ಮಾಡುವುದು ಅವರ ಉದ್ದೇಶವಾಗಿದೆ.
1948ರಲ್ಲೇ ಒಂದು ರೆಗ್ಯುಲೇಷನ್ ಮಾಡಿದ್ದರು. ಈಗ ಮತ್ತೆ ಲೋಕಲ್ ಬೋರ್ಡ್ ನಲ್ಲಿ ಅಧಿಕಾರಕ್ಕೆ ಬಂದು ಹೊಸದಾಗಿ ರೆಗ್ಯುಲೇಷನ್ ಮಾಡಿದ್ದಾರೆ. ಮಹಾಜನ್ ಆಯೋಗ ಮಾಡಿರುವುದೇ ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಆದರೂ ಮತ್ತೀಗ ಅವರೇ ಖ್ಯಾತೆ ತೆಗೆಯುತ್ತಿದ್ದಾರೆ. ಕರ್ನಾಟಕದ ಒಂದಿಂಚು ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂಬ ಸಂದೇಶ ರಾಜ್ಯದ ಜನರಿಗೆ ಹೋಗಬೇಕು.
ಒಂದು ರಾಜ್ಯದವರು ಇನ್ನೊಂದು ರಾಜ್ಯಕ್ಕೆ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ ಆದರೆ ಮಹಾರಾಷ್ಟ್ರದವರ ಉದ್ದೇಶ ಒಳ್ಳೆಯದಿಲ್ಲ ಎಂಬ ಕಾರಣಕ್ಕೆ ಅವರನ್ನು ತಡೆಯಬೇಕಾಗಿದೆ. ಇಲ್ಲಿ ಬಂದು ಎಂಇಎಸ್ ನವರೊಂದಿಗೆ ಸಭೆ ನಡೆಸಿ ಕಿತಾಪಕಿ ಮಾಡಲು ಬರುತ್ತೇವೆ ಎಂದರೆ ಅವರನ್ನು ಸುಮ್ಮನೆ ಒಳಗೆ ಬಿಡಲಾಗುತ್ತದಾ? ಮಹಾರಾಷ್ಟ್ರ ಸರ್ಕಾರ ಸರ್ವಪಕ್ಷ ಸಭೆ ಮಾಡಿದೆ, ರಾಜ್ಯದಲ್ಲೂ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆಯುವುದಾಗಿ ಹೇಳಿ ಕರೆಯಲಿಲ್ಲ, ಅಮಿತ್ ಶಾ ಅವರ ಭೇಟಿ ಮಾಡುವ ಮೊದಲು ರಾಜ್ಯದ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದರೆ ಇನ್ನಷ್ಟು ಶಕ್ತಿ ಬರುತ್ತಿತ್ತು, ಸರ್ಕಾರದ ಜೊತೆ ನಾವಿದ್ದೇವೆ ಎಂಬ ಧೈರ್ಯ ತುಂಬುತ್ತಿದ್ದೆವು.
ಸಭೆಗಳು, ಸಂಧಾನ ಇಷ್ಟೆಲ್ಲಾ ಆದರೂ ಮಹಾರಾಷ್ಟ್ರದವರು ಗಡಿಯಲ್ಲಿ ಪುಂಡಾಟಿಕೆಯನ್ನು ನಿಲ್ಲಿಸಿಲ್ಲ, ಅವರಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬ ಕನಿಷ್ಠ ಜ್ಞಾನವೇ ಇಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬನ ಕರ್ತವ್ಯ. ಇದನ್ನು ಮಹಾರಾಷ್ಟ್ರದವರು ಅರ್ಥಮಾಡಿಕೊಳ್ಳಬೇಕು.
ಗಡಿ ವಿಚಾರದಲ್ಲಿ ರಾಜ್ಯದ ಜನರಿಗೆ ಯಾವುದೇ ಸಂಶಯ ಬರಬಾರದು, ಕರ್ನಾಟಕ ಸರ್ಕಾರ ಗಡಿ ವಿಚಾರದಲ್ಲಿ ದಿಟ್ಟ ನಿಲುವನ್ನು ತಾಳಬೇಕು. ಮಹಾರಾಷ್ಟ್ರಕ್ಕೆ ಒಂದಿಂಚೂ ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂಬುದು ಸರ್ಕಾರದ ನಿಲುವಾಗಿರಬೇಕು. ಇದು ನನ್ನ ಒತ್ತಾಯ ಎಂದರು.












Click it and Unblock the Notifications