ಕಾವೇರಿ ಹಂಚಿಕೆಯಲ್ಲಿ ಕರ್ನಾಟಕದ ಸೋಲಿಗೆ ಕಾರಣ ಇಲ್ಲಿದೆ, ಪರಿಹಾರವೂ ಇದೆ...
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ಮಾರಕ ಎನಿಸುವ ತೀರ್ಪು ಬರಲು ಕಾರಣವಾದ ಅಂಶವೊಂದನ್ನು ಸರಿಪಡಿಸಲು ರಾಜ್ಯ ಸರಕಾರ ಮುಂದಾಗಿದೆ. ಅದೇನು ಎಂದು ತಿಳಿಯಲು ಈ ವರದಿ ಓದಿ
ಬೆಂಗಳೂರು, ಮೇ 24: ಮಳೆ ಪ್ರಮಾಣವನ್ನು ಅಳೆಯುವುದರಲ್ಲಿ ಮೂರು ವಿಭಾಗಗಳಿವೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಎಂದು ವಿಂಗಡಿಸಲಾಗಿದೆ. ಇದೀಗ ಇದರಿಂದ ಮಲೆನಾಡು ಪ್ರದೇಶವನ್ನು ಪ್ರತ್ಯೇಕವಾಗಿ ಮಾಡಬೇಕು ಎಂದು ರಾಜ್ಯ ಸರಕಾರವು ಕೇಂದ್ರಕ್ಕೆ ಮನವಿ ಮಾಡಿದೆ.
ಈ ಬಗ್ಗೆ ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಎಂ. ಮೇತ್ರಿ ಒನ್ ಇಂಡಿಯಾ ಕನ್ನಡದ ಜತೆ ಮಾತನಾಡಿ, ದಕ್ಷಿಣ ಒಳನಾಡು ಅಂದರೆ ಅದರಲ್ಲಿ ಮಲೆನಾಡು ಸೇರಿದ ಹಾಗೆ ಬಯಲು ಸೀಮೆ ಜಿಲ್ಲೆಗಳು ಇವೆ. ವಾಡಿಕೆ ಹಾಗೂ ಆಯಾ ವರ್ಷ ಬಿದ್ದ ಸರಾಸರಿ ಮಳೆ ಪ್ರಮಾಣವನ್ನು ತೆಗೆದುಕೊಂಡಾಗ ಎಲ್ಲ ಜಿಲ್ಲೆಗಳ ವಾಸ್ತವ ಸ್ಥಿತಿ ಗೊತ್ತಾಗುತ್ತಿಲ್ಲ.[ಈ ಬಾರಿ ನೈರುತ್ಯ ಮುಂಗಾರಿನ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳು]
ಪಶ್ಚಿಮ ಘಟ್ಟಗಳಿರುವ ಮಲೆನಾಡಿನ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ. ಉಳಿದೆಡೆ ಕಡಿಮೆಯಾಗುತ್ತದೆ. ಆದರೆ ಸರಾಸರಿ ಲೆಕ್ಕಕ್ಕೆ ತೆಗೆದುಕೊಂಡಾಗ ಮಳೆ ಉತ್ತಮವಾಗಿ ಅಥವಾ ನಿರೀಕ್ಷೆಯಂತೆ ಆಗಿದೆ ಎಂಬ ಭಾವನೆ ಮೂಡುತ್ತದೆ. ನೈರುತ್ಯ್ ಮುಂಗಾರು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ ಸರಿಯಾಗಿ ಆಗುವುದೇ ಇಲ್ಲ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗಂತೂ ಇದನ್ನು ಲೆಕ್ಕಕ್ಕೆ ಇಡಲು ಸಾಧ್ಯವಿಲ್ಲ. ಆದರೆ ಮಲೆನಾಡಿನ ಜಿಲ್ಲೆಗಳಲ್ಲಿ ಒಳ್ಳೆ ಮಳೆಯಾಗಿ ಸರಾಸರಿ ಲೆಕ್ಕಕ್ಕೆ ತೆಗೆದುಕೊಂಡಾಗ ಅಗತ್ಯ ಪ್ರಮಾಣದ ಮಳೆಯಾದಂತೆ ಅನಿಸುತ್ತದೆ. ಆ ಕಾರಣಕ್ಕೆ ಮಲೆನಾಡಿನ ಜಿಲ್ಲೆಗಳನ್ನು ಪ್ರತ್ಯೇಕ ವಿಭಾಗ ಮಾಡುವ ಆಲೋಚನೆ ಇದೆ ಎಂದು ಅವರು ತಿಳಿಸಿದರು.[ಕಾವೇರಿ ನೀರು ಹಂಚಿಕೆ, ಕರ್ನಾಟಕದ ಅರ್ಜಿ ತಿರಸ್ಕರಿಸಿದ ಸುಪ್ರೀಂ]
ಇದೇ ವೇಳೆ ತಮಿಳುನಾಡು ರಾಜ್ಯವು ಕಾಏರಿ ನೀರು ಹಂಚಿಕೆ ವಿಚಾರ ಬಂದಾಗ ಈ ಅಂಕಿಯನ್ನು ಮುಂದು ಮಾಡಿಕೊಂಡೇ ನ್ಯಾಯಾಧೀಕರಣದಲ್ಲಿ ದಾವೆ ಹೂಡುತ್ತಿದೆ. ಆದ್ದರಿಂದ ಮಲೆನಾಡು ಜಿಲ್ಲೆಗಳ ಪ್ರತ್ಯೇಕ ವಿಭಾಗಕ್ಕೆ ರಾಜ್ಯ ಸರಕಾರ ಮನವಿಯನ್ನು ಮಾಡಿದೆ.