ರಾಜ್ಯ ಶಿಕ್ಷಣ ಇಲಾಖೆಯಿಂದ ಮೂರು ಮಹತ್ವದ ಆದೇಶ
ಬೆಂಗಳೂರು, ಸೆಪ್ಟೆಂಬರ್ 28: ರಾಜ್ಯ ಶಿಕ್ಷಣ ಇಲಾಖೆಯು ಶಿಕ್ಷಕರು, ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಮೂರು ಮಹತ್ವದ ಆದೇಶಗಳನ್ನು ಹೊರಡಿಸಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದ್ದ ಎರಡನೇ ಜೊತೆ ಸಮವಸ್ತ್ರವನ್ನು ಈ ಬಾರಿ ಕೊಡಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದರು, ಆದರೆ ಈಗ ಅದನ್ನು ವಾಪಸ್ ಪಡೆಯಲಾಗಿದೆ.
ಕೇಂದ್ರದಿಂದ ಅನುದಾನ ಕಡಿತ ಆಗಿರುವ ಕಾರಣ ಎರಡನೇ ಜೊತೆ ಸಮವಸ್ತ್ರ ನೀಡಲಾಗುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದರು, ಆದರೆ ಈಗ ಆದೇಶವನ್ನು ಹಿಂಪಡೆಯಲಾಗಿದ್ದು, ಎರಡನೇ ಜೊತೆ ಸಮವಸ್ತ್ರವನ್ನು ನೀಡಲಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
'2ನೇ ಜೊತೆ ಸಮವಸ್ತ್ರ ನೀಡಬೇಕೆಂದು ಸರ್ಕಾರದ ನಿರ್ಧಾರ ಮಾಡಿದೆ. ಈ ವರ್ಷವೇ ಅದನ್ನು ನೀಡಲಿದ್ದೇವೆ. ಹಣಕಾಸು ಇಲಾಖೆಯ ಜತೆಗೆ ಈ ಬಗ್ಗೆ ಚರ್ಚಿಸಲಾಗಿದೆ, ಈ ವರ್ಷವೇ 2ನೇ ಜೊತೆ ಸಮವಸ್ತ್ರ ಕೊಡಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ಗುರುವಾರ ನಾನು ನೀಡಿದ ಹೇಳಿಕೆಯಲ್ಲಿ ಒಂದಿಷ್ಟು ವ್ಯತ್ಯಾಸ ವಾಗಿದೆ' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರದಿಂದ ಬಂದಿದ್ದ ಪ್ರಸ್ತಾವ ತಳ್ಳಿ ಹಾಕಿದ ರಾಜ್ಯ ಸರ್ಕಾರ
ಪಿಯು ಶಿಕ್ಷಣ ಮಂಡಳಿಯನ್ನು ಪ್ರೌಢಶಾಲೆ ಶಿಕ್ಷಣ ಮಂಡಳಿಯ ಜೊತೆಗೆ ವಿಲೀನ ಮಾಡುವ ಪ್ರಕ್ರಿಯೆಗೆ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಿದ್ದರು. ಈ ಪ್ರಸ್ತಾವವು ಕೇಂದ್ರ ಸರ್ಕಾರದಿಂದ ಬಂದಿತ್ತು. ಆದರೆ ಈ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದ್ದು, ಪ್ರೌಢಶಾಲೆಯೊಂದಿಗೆ ಪಿಯು ವಿಲೀನ ಮಾಡಲಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.

ಪ್ರೌಢಶಾಲೆ-ಪಿಯು ಮಂಡಳಿ ಪ್ರತ್ಯೇಕವಾಗಿಯೇ ಇರಲಿವೆ
ಪ್ರೌಢಶಾಲೆ ಮತ್ತು ಪಿಯು ಮಂಡಳಿಗಳು ಮೊದಲಿನಂತೆ ಪ್ರತ್ಯೇಕವಾಗಿಯೇ ಕಾರ್ಯ ನಿರ್ವಹಿಸಲಿವೆ. ಎರಡೂ ಮಂಡಳಿಗಳು ಪ್ರತ್ಯೇಕವಾಗಿ ಪರೀಕ್ಷೆಗಳನ್ನು ನಡೆಸಲಿವೆ ಎಂದು ಇಲಾಖೆ ಹೇಳಿದೆ.

ಉಪಚುನಾವಣೆ ಕಾರಣ ವರ್ಗಾವಣೆ ತಡೆಹಿಡಿಯಲಾಗಿತ್ತು
ಉಪಚುನಾವಣೆ ಘೊಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣ ಶಿಕ್ಷಕರ ವರ್ಗಾವಣೆ ಕೌನ್ಸಿಲ್ ಅನ್ನು ಮುಂದೂಡಲಾಗಿತ್ತು. ಆದರೆ ಈಗ ಹೊಸದಾಗಿ ಘೋಷಣೆ ಆಗಿರುವಂತೆ ಉಪಚುನಾವಣೆ ಡಿಸೆಂಬರ್ ನಲ್ಲಿ ನಡೆಯಲಿರುವ ಕಾರಣ ಈ ಮಧ್ಯೆ ವರ್ಗಾವಣೆ ಪ್ರಕ್ರಿಯೆ ಮುಗಿಸುವ ನಿರ್ಣಯವನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ.

ಪರಿಷ್ಕೃತ ವೇಳಾಪಟ್ಟಿ ವೆಬ್ಸೈಟ್ನಲ್ಲಿ ಪ್ರಕಟ
ಸೆಪ್ಟೆಂಬರ್ 30 ರಿಂದ ಶಿಕ್ಷಕರ ವರ್ಗಾವಣೆ ಕೌನ್ಸಿಲ್ ಪುನರ್ ಆರಂಭವಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು http://www.schooleducation.kar.nic.in ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಭೆ
ಅಕ್ಟೋಬರ್ 4 ರಂದು ರಾಜ್ಯ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಸಭೆ ನಡೆಸಲಾಗುವುದು ಎಂದೂ ಸಹ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. ಶಿಕ್ಷಕರು ಕೆಲವು ಬೇಡಿಕೆಗಳನ್ನು ಸಚಿವರ ಮುಂದೆ ಇಟ್ಟಿದ್ದು, ಈ ಬಗ್ಗೆ ಚರ್ಚಿಸಲು ಅಕ್ಟೋಬರ್ 4 ರಂದು ಸಭೆ ನಡೆಸಲಾಗುತ್ತಿದೆ.












Click it and Unblock the Notifications