ಕ್ರೈಂ: ಬ್ಯಾಂಕ್ ಉದ್ಯೋಗಿ ಜ್ಯೋತಿ ಮೇಲೆ ಹಲ್ಲೆ
ಬೆಂಗಳೂರು, ನ.19: ನಗರದ ಕಾರ್ಪೋರೇಷನ್ ವೃತ್ತದ ಸಮೀಪವಿರುವ ಕಾರ್ಪೋರೇಷನ್ ಬ್ಯಾಂಕಿನ ಎಟಿಎಂನ ಬಳಿ ಮಂಗಳವಾರ ಬೆಳಗ್ಗೆ ಮಹಿಳೆ ಮೇಲೆ ಭೀಕರವಾಗಿ ಹಲ್ಲೆ ನಡೆದಿದೆ.
ರಾಜಾಜಿನಗರದ ನಿವಾಸಿಯಾಗಿರುವ ಜ್ಯೋತಿ ಉದಯ್ ಎಂಬುವವರು ಇಂದು ಮುಂಜಾನೆ 7.01 ರ ಸಮಯದಲ್ಲಿ ಇಲ್ಲಿನ ಎಟಿಎಂನಲ್ಲಿ ಹಣ ತೆಗೆಯಲು ಬಂದ ತಕ್ಷಣ, ಎಟಿಎಂ ಒಳಗೆ ನುಗ್ಗಿದ ದುಷ್ಕರ್ಮಿ ಆಕೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ನಂತರ ಆಕೆಯನ್ನು ಎಟಿಎಂ ಒಳಗೇ ಬಿಟ್ಟು ಶಟರ್ ಅನ್ನು ಮುಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ.
ಎಟಿಎಂನಲ್ಲಿ ಹಣ ತೆಗೆಯಲು ಬಂದಿದ್ದ ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆ ಎಟಿಎಂ ಒಳಗೆ ಹಣ ತೆಗೆಯಲು ಬಂದ ತಕ್ಷಣ ದುಷ್ಕರ್ಮಿ ಆಕೆ ಜೊತೆಯಲ್ಲಿಯೇ ಎಟಿಎಂ ಒಳಗೆ ನುಗ್ಗಿದ್ದಾನೆ. ನಂತರ ಆಕೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಎಟಿಎಂ ಒಳಗೆ ರಕ್ತದ ಮಡುವಿನಲ್ಲಿ ಜ್ಯೋತಿ ಉದಯ್ ಸುಮಾರು ಹೊತ್ತು ನೋವು ತಿನ್ನುತ್ತಾ ಬಳಲಿದ್ದಾರೆ. ಎಟಿಎಂಗೆ ಬಂದ ಸಾರ್ವಜನಿಕರೊಬ್ಬರು ಜ್ಯೋತಿ ಅವರ ಸ್ಥಿತಿ ನೋಡಿ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಜ್ಯೋತಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ಯೋತಿಯವರ ಸ್ಥಿತಿ ತುಂಬಾ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ಬಿಜಿಎಸ್ ಆಸ್ಪತ್ರೆಗೆ ಸಾಗಿಸಲಾಗಿದೆ
38 ವರ್ಷದ ಜ್ಯೋತಿ ಉದಯ್ ಕೂಡ ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ದುಷ್ಕರ್ಮಿಗಳ ಪತ್ತೆಗಾಗಿ ಸಿಸಿಟಿವಿ ಕೆಮೆರಾ ವಿಡಿಯೋ ತುಣುಕು ಬಳಸಲಾಗುವುದು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಎಸ್ ಜೆ ಪಾರ್ಕ್ ಪೋಲೀಸ್ ಠಾಣಾಧಿಕಾರಿ ಹೇಳಿದ್ದಾರೆ. ಇನ್ನಷ್ಟು ವಿವರ ಮುಂದೆ ಓದಿ...ಶಿವಮೊಗ್ಗ, ದಾವಣಗೆರೆ, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ವೈದ್ಯರ ಹೇಳಿಕೆ
ಬಿಜಿಎಸ್ ಆಸ್ಪತ್ರೆಯ ಹಿರಿಯ ವೈದ್ಯರ ಪ್ರಕಾರ, ಎಟಿಎಂನಲ್ಲಿ ಹಲ್ಲೆಗೊಳಲಾದ ಜ್ಯೋತಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮೂಗಿನ ತುದಿ, ಬಲಗೈ, ಬಲಗಾಲಿಗೆ ಭಾರಿ ಪೆಟ್ಟಾಗಿದೆ. ಮುಂದೆ ಪ್ಲಾಸ್ಟಿಕ್ ಸರ್ಜರಿ ಅಗತ್ಯವಿದೆ ಸದ್ಯಕ್ಕೆ ಐಸಿಯುನಲ್ಲಿದ್ದು ಒಂದು ವಾರದ ಕಾಲ ವಿಶ್ರಾಂತಿ ಅಗತ್ಯವಿದೆ. ತಲೆಬುರಡೆ ಹೊಡೆದು ಮೆದುಳಿಗೆ ಪೆಟ್ಟಾಗಿರುವುದರಿಂದ ಫಿಟ್ಸ್ ಬರುವ ಸಾಧ್ಯತೆಯಿದೆ.
ಕಾವಲುಗಾರ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಇದು ವೃತ್ತಿಪರ ಕಳ್ಳನ ಕೃತ್ಯ. ಸಿಸಿಟಿವಿ ಕೆಮೆರಾ ವರ್ಕ್ ಆಗುತ್ತಿರುವುದರಿಂದ ಪ್ರಮುಖ ಸಾಕ್ಷಿ ಸಿಕ್ಕಿದೆ. ಮಹಿಳೆ ಮೇಲೆ ಹಲ್ಲೆ ನಡೆದಿರುವುದನ್ನು ಸಾರ್ವಜನಿಕರು ಉಗ್ರವಾಗಿ ಪ್ರತಿಭಟಿಸಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ.

ಉಡುಪಿ
ಕೊಲ್ಲೂರು: ಪಿರ್ಯಾದಿದಾರರಾದ ಎನ್. ನಾರಾಯಣ ಶೆಟ್ಟಿ, ಕಾರ್ಯದರ್ಶಿ, ಗ್ರಾಮ ಪಂಚಾಯತ್, ಕೊಲ್ಲೂರು ಗ್ರಾಮ, ಕುಂದಾಪುರರವರಿಗೆ ಕೊಲ್ಲೂರು ಗ್ರಾಮ ಅರಣ್ಯ ವಸತಿಗೃಹದ ಹಿಂದುಗಡೆ ಒಬ್ಬ ವ್ಯಕ್ತಿ ನೇಣು ಹಾಕಿಕೊಂಡು ಮೃತನಾಗಿರುತ್ತಾನೆ ಎಂದು ಮಾಹಿತಿ ಬಂದಂತೆ ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ಮರದ ಕೊಂಬೆಗೆ ಕುತ್ತಿಗೆಗೆ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಗಂಡಸಿನ ಮೃತದೇಹ ಕಂಡು ಬಂದಿದೆ.

ಸುಲಿಗೆ ಪ್ರಕರಣ
ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು, ಗೌನಿಪಲ್ಲಿ ಗ್ರಾಮದ ರಾಜು ಮೆಡಿಕಲ್ ಬಳಿ ಸಂಭವಿಸಿರುತ್ತದೆ. ನ.17 ರಂದು ರಾತ್ರಿ 9 ಗಂಟೆಯಲ್ಲಿ ಗೌನಿಪಲ್ಲಿ ಗ್ರಾಮದ ವಾಸಿ ವೆಂಕಟರಾಮಯ್ಯ ಶೆಟ್ಟಿ ರವರು ತಮ್ಮ ಹನುಮಾನ್ ರೈಸ್ ಅಂಗಡಿಯಲ್ಲಿ ವ್ಯಾಪಾರ ಮಾಡಿದ ಹಣ 40,000-00 ರೂ.ಗಳನ್ನು ತೆಗೆದುಕೊಂಡು ತಮ್ಮ ಮನೆಗೆ ಹೋಗಲು ಬರುತ್ತಿದ್ದು. ಈ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿ ವೆಂಕಟರಾಮಯ್ಯ ರವರ ಬಳಿ ಇದ್ದ ಬ್ಯಾಗನ್ನು ತೆಗೆದುಕೊಂಡು ಕತ್ತಲಲ್ಲಿ ಓಡಿ ಹೋಗಿರುವ ಘಟನೆ ಸಂಭವಿಸಿರುತ್ತದೆ.

ದೊಡ್ಡಪೇಟೆ;ಕಳ್ಳತನ ಪ್ರಕರಣ;
ಕನ್ನೇಶಪ್ಪ ವಾಸ; ಜೇಸಿ ನಗರ ಶಿವಮೊಗ್ಗ ಬುದ್ದಾನಗರದಲ್ಲಿರುವ ಮಹಾಗಣಪತಿ ದೇವಸ್ಥಾನದ ಗೇಟಿನ ಬೀಗವನ್ನು ಮುರಿದು ಸುಮಾರು 250 ಗ್ರಾಂ ತೂಕದ ಬೆಳ್ಳಿ ಸಾಮಾನು ಮತ್ತು ಇತರೆ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಬೆಲೆ 19,000/- ಆಗಿರುತ್ತದೆ.

ತುಮಕೂರು
ನ.18ರ ರಾತ್ರಿ 8-30 ಗಂಟೆಯಲ್ಲಿ ಪಿರ್ಯಾದಿ ತಿಪ್ಪೇಸ್ವಾಮಿ ನಂ 1644, ನಾಗಸಂದ್ರ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ನ.17 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ನಮ್ಮ ಚಿಕ್ಕಪ್ಪನಾದ ಹೆಚ್.ಎಂ. ಕೆಂಚಣ್ಣ ಬಿನ್ ಲೇಟ್ ಮುದ್ದಪ್ಪ, 57 ವರ್ಷ, ವಕ್ಕಲಿಗರು, ವಾಸ 3ನೇ ಕ್ರಾಸ್, ಸಿದ್ಧಗಂಗಾ ಬಡಾವಣೆ, ತುಮಕೂರು ರವರು ಅವರು ವಾಸವಾಗಿರುವ ಸಿದ್ಧಗಂಗಾ ಬಡಾವಣೆ 3ನೇ ಕ್ರಾಸ್ನ ಮನೆಯ ಮುಂಭಾಗ ತೆರೆಯಲಾಗಿದ್ದ ನೀರಿನ ಸಂಪಿಗೆ ಆಕಸ್ಮಿಕವಾಗಿ ಬಿದ್ದು ತಲೆಗೆ, ಎದೆಗೆ, ಕುತ್ತಿಗೆ ಹಿಂಭಾಗಕ್ಕೆ, ಪೆಟ್ಟಾಗಿ ಚಿಕಿತ್ಸೆಗಾಗಿ ಬೆಂಗಳೂರು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನ.18ರಂದು ರಂದು ಸಂಜೆ 4-45 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ.

ಜಗಳೂರು ಠಾಣೆ ಗುನ್ನೆ ನಂ: 203/2013, ಕಲಂ: 302. 201 ಐ.ಪಿ.ಸಿ.
ಪಿರ್ಯಾದಿ ನಾಗರಾಜ ಸಿ.ಎಂ ತಮ್ಮ ಗ್ರಾಮದಿಂದ ಸೊಕ್ಕೆ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಸಮಯದಲ್ಲಿ ಮೋಟರ್ ಸೈಕಲ್ನಲ್ಲಿ ವಾಪಸ್ ಬರುತ್ತಿರುವಾಗ ಚಿಕ್ಕಬಂಟನಹಳ್ಳಿ ಗ್ರಾಮದ ಸಮೀಪ ಸರ್ಕಾರಿ ಫಾರ್ಮಸಿ ಜಮೀನಿನ ಪಕ್ಕದ ಸೊಕ್ಕೆ-ಗಡಿಮಾಕುಂಟೆ ರಸ್ತೆಯ ಬಳಿ ಜನರು ಗುಂಪಾಗಿ ನಿಂತುಕೊಂಡು ನೋಡುತ್ತಿದ್ದು, ಹೋಗಿ ಏನೆಂದು ನೋಡಲಾಗಿ ಸದರಿ ಸ್ಥಳದಲ್ಲಿ ಸುಮಾರು 22 ವರ್ಷ ವಯಸ್ಸಿನ ಒಂದು ಗಂಡಸಿನ ಶವ ಅಂಗಾತವಾಗಿ ಬಿದ್ದಿದ್ದು, ಮೃತ ವ್ಯಕ್ತಿ ತಲೆ ಮೇಲ್ಭಾಗ ಮತ್ತು ಎಡ ಕೈ ಮೇಲೆ ರಕ್ತ ಗಾಯಗಳಾಗಿದ್ದು, ತಲೆ ಮೈ ಕೈ ಬಟ್ಟೆಯ ಮೇಲೆ ಸಹ ರಕ್ತದ ಕಲೆಗಳು ಕಂಡು ಬಂದಿರುತ್ತೆ.
ಮೃತನು ದುಂಡು ಮುಖ, ಸಾಧರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಸುಮಾರು 4.7 ಅಡಿ ಎತ್ತರ ಹೊಂದಿದ್ದು, ಮೈ ಮೇಲೆ ಹಳದಿ ಬಣ್ಣದ ಟಿ-ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ, ಆಯುಧದಿಂದ ಬಲವಾಗಿ ತಲೆಗೆ ಹೊಡೆದು ಕೊಲೆ ಮಾಡಿ ಸುಳಿವು ಸಿಗದಂತೆ ಈ ರೀತಿ ಬಿಸಾಡಿ ಹೋದಂತೆ ಕಂಡು ಬಂದಿರುತ್ತದೆ












Click it and Unblock the Notifications