SSLC Result: 625ಕ್ಕೆ 625 ಅಂಕ ಪಡೆದವರೆಷ್ಟು?
ಬೆಂಗಳೂರು, ಆಗಸ್ಟ್ 09: ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೋಮವಾರ ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶದ ವಿವರಗಳನ್ನು ಬಿಡುಗಡೆ ಮಾಡಿದರು.
Recommended Video
ಬೆಂಗಳೂರಿನ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು, "ಜುಲೈ 19, 22ರಂದು ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.99.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 4,70,160 ವಿದ್ಯಾರ್ಥಿಗಳು, 4,01,280 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಓರ್ವ ವಿದ್ಯಾರ್ಥಿನಿ ಗೈರಾಗಿದ್ದರಿಂದ ಅನುತ್ತೀರ್ಣರಾಗಿದ್ದಾರೆ,'' ಎಂದು ತಿಳಿಸಿದರು.
1,28,931 ವಿದ್ಯಾರ್ಥಿಗಳು A+ ಗ್ರೇಡ್ ಪಡೆದುಕೊಂಡಿದ್ದು, 2,50,317 ವಿದ್ಯಾರ್ಥಿಗಳು A ಗ್ರೇಡ್, 2,87,694 ವಿದ್ಯಾರ್ಥಿಗಳು B ಗ್ರೇಡ್, 1,13,610 ವಿದ್ಯಾರ್ಥಿಗಳು C ಗ್ರೇಡ್ ಪಡೆದುಕೊಂಡಿದ್ದಾರೆ. ಸಿ ಗ್ರೇಡ್ ಪಡೆದಿರುವ ಶೇ.9ರಷ್ಟು ವಿದ್ಯಾರ್ಥಿಗಳಿಗೆ ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡಿ ಉತ್ತೀರ್ಣ ಮಾಡಲಾಗಿದೆ ಎಂದು ವಿವರಿಸಿದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 157 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದು, 289 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ. ಇಬ್ಬರು 622 ಅಂಕ ಪಡೆದಿದ್ದರೆ, 449 ವಿದ್ಯಾರ್ಥಿಗಳು 621, 28 ವಿದ್ಯಾರ್ಥಿಗಳು 620 ಅಂಕ ಪಡೆದಿದ್ದಾರೆ.
ಪ್ರಥಮ ಭಾಷೆಯಲ್ಲಿ 25,702 ವಿದ್ಯಾರ್ಥಿಗಳಿಗೆ 125ಕ್ಕೆ 125 ಅಂಕ, ದ್ವಿತೀಯ ಭಾಷೆಯಲ್ಲಿ 36,628 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ, ತೃತೀಯ ಭಾಷೆಯಲ್ಲಿ 36,776 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ ಪಡೆದಿದ್ದಾರೆ.
ಗಣಿತ ವಿಷಯದಲ್ಲಿ 6321 ಮಕ್ಕಳಿಗೆ 100ಕ್ಕೆ 100, ವಿಜ್ಞಾನ ವಿಷಯದಲ್ಲಿ 3,649 ಮಕ್ಕಳು 100ಕ್ಕೆ 100, ಸಮಾಜ ವಿಜ್ಞಾನ ವಿಷಯದಲ್ಲಿ 9,367 ಮಕ್ಕಳು 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ.

ಗಮನಾರ್ಹವೆಂದರೆ ಈ ಬಾರಿ ಬಹುತೇಕ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಈ ಬಾರಿ ಒಟ್ಟಾರೆ ಪಾಸ್ ಪರ್ಸೆಂಟೇಜ್ ಶೇಕಡಾ 99.9ರಷ್ಟು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 4,70,160 ಎಸ್ಎಸ್ಎಲ್ಸಿ ಬಾಲಕರು ಪಾಸಾಗಿದ್ದರೆ, 4,01,280 ಬಾಲಕಿಯರು ತೇರ್ಗಡೆಯಾಗಿದ್ದಾರೆ.
ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ನೂತನ ಸಚಿವ ಬಿ.ಸಿ. ನಾಗೇಶ್ ಫಲಿತಾಂಶ ಪ್ರಕಟಿಸಿದ್ದಾರೆ. ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ. ಈ ಬಾರಿ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದರೂ ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿದವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಉತ್ತರ ಪ್ರಥಮ, ಬಳ್ಳಾರಿ ಕೊನೆ ಸ್ಥಾನ
2021ರ ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶವು ಇಡೀ ರಾಜ್ಯದಲ್ಲಿ ಒಂದೇ ಪ್ರಮಾಣದಲ್ಲಿದೆ. ಬಹುತೇಕ ಎಲ್ಲಾ ಜಿಲ್ಲೆಗಳ ಫಲಿತಾಂಶವೂ ಸಮಾನವಾಗಿದೆ. ಆದರೂ ಈ ಬಾರಿ ಬಳ್ಳಾರಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ. ಬೆಂಗಳೂರು ಉತ್ತರ ಪ್ರಥಮ ಸ್ಥಾನ, ಬೆಂಗಳೂರು ದಕ್ಷಿಣ ದ್ವಿತೀಯ ಹಾಗೂ ರಾಮನಗರ ಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ.
ಶೇ.99.65ರಷ್ಟು ವಿದ್ಯಾರ್ಥಿಗಳು ಹಾಜರು
3 ವಿಷಯಗಳಿಗೆ ಸೇರಿ ಒಂದು ಪರೀಕ್ಷೆ ನಡೆಸಲಾಗಿದ್ದು, ಗಣಿತ ಪರೀಕ್ಷೆಗೆ 7,81,530 ವಿದ್ಯಾರ್ಥಿಗಳು ಹಾಜರಾಗಿದ್ದರೆ, ವಿಜ್ಞಾನ ಪರೀಕ್ಷೆಗೆ 8,40,841 ವಿದ್ಯಾರ್ಥಿಗಳು ಹಾಜರಾಗಿದ್ದರು. ಸಮಾಜ ವಿಜ್ಞಾನ ಪರೀಕ್ಷೆಗೆ 8,21,823 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಇನ್ನು ಪ್ರಥಮ ಭಾಷೆ ಪರೀಕ್ಷೆಗೆ 8,16,538 ವಿದ್ಯಾರ್ಥಿಗಳು ಹಾಜರಾಗಿದ್ದು, ದ್ವಿತೀಯ ಭಾಷೆ ಪರೀಕ್ಷೆಗೆ 8,24,686 ಮಕ್ಕಳು ಹಾಜರಾಗಿದ್ದರೆ, ತೃತೀಯ ಭಾಷೆ ಪರೀಕ್ಷೆಗೆ 8,14,538 ಮಕ್ಕಳು ಹಾಜರಾಗಿದ್ದರು.
ಅದೇ ರೀತಿ ಕೊರೊನಾ ಸೋಂಕಿತ 58 ವಿದ್ಯಾರ್ಥಿಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿ, ಕೊವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆಯನ್ನು ಬರೆದಿದ್ದರು. 2870 ವಿದ್ಯಾರ್ಥಿಗಳು ಹಾಸ್ಟೆಲ್ಗಳಲ್ಲಿದ್ದು ಪರೀಕ್ಷೆ ಬರೆದಿದ್ದರೆ, ನೆರೆ ರಾಜ್ಯಗಳಿಂದ ಬಂದು ಪರೀಕ್ಷೆ ಬರೆದವರ ಸಂಖ್ಯೆ 760ರಷ್ಟಿತ್ತು.












Click it and Unblock the Notifications