13 ಶಾಸಕರ ರಾಜೀನಾಮೆ ಪತ್ರದ ಬಗ್ಗೆ ಸ್ಪೀಕರ್ ರಮೇಶ್ ಮಹತ್ವದ ನಿರ್ಣಯ
ಬೆಂಗಳೂರು, ಜುಲೈ 09: ಕರ್ನಾಟಕದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ನಿರ್ಣಾಯಕವಾಗಬಲ್ಲ ಮಹತ್ವದ ನಿರ್ಧಾರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಮಂಗಳವಾರದಂದು ತೆಗೆದುಕೊಂಡಿದ್ದಾರೆ. 13 ಶಾಸಕರ ರಾಜೀನಾಮೆಯನ್ನು ಪರಿಶೀಲಿಸಿದ್ದು, ಈ ಪೈಕಿ 8 ಶಾಸಕರದ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದಿದ್ದಾರೆ.
ರಾಜೀನಾಮೆ ಪತ್ರ ಪರಿಶೀಲಿಸಿದ ನಂತರ ವಿಧಾನಸೌದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್, ಐವರು ಶಾಸಕರ ರಾಜೀನಾಮೆ ಕ್ರಮಬದ್ಧವಾಗಿವೆ, 13 ಜನ ಶಾಸಕರು ನನ್ನ ಕಚೇರಿ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದಾರೆ. ನಾನು ಕಚೇರಿಯಿಂದ ಮನೆಗೆ ತೆರಳಿದ ಬಳಿಕ ಶಾಸಕರು ಬಂದಿದ್ದಾರೆ. ಸೋಮವಾರದಂದು ನಾನು ಕಚೇರಿಗೆ ಬಂದಿರಲಿಲ್ಲ. ಇವತ್ತು ರೋಷನ್ ಬೇಗ್ ಕೂಡ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಿದರು.

ಯಾರ ರಾಜೀನಾಮೆ ಕ್ರಮಬದ್ಧವಾಗಿಲ್ಲ
ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ನಾರಾಯಣ ಗೌಡ, ರಾಮಲಿಂಗಾರೆಡ್ಡಿ, ಗೋಪಾಲಯ್ಯ ಅವರ ರಾಜೀನಾಮೆ ಪತ್ರ ಕ್ರಮಬದ್ಧವಾಗಿದ್ದು, ಉಳಿದ 8 ಜನ ಶಾಸಕರ ರಾಜೀನಾಮೆ ರೂಲ್ಸ್ 202ರ ಪ್ರಕಾರ ಕ್ರಮಬದ್ಧವಾಗಿಲ್ಲ.

ಖುದ್ದು ಹಾಜರಾತಿಗಾಗಿ ಕರೆ
ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ, ನಾರಾಯಣಗೌಡ ಅವರನ್ನು ಜುಲೈ 12 ರಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಜುಲೈ 15 ರಂದು ಉಳಿದ ರಾಮಲಿಂಗಾರೆಡ್ಡಿ, ಗೋಪಾಲಯ್ಯ ವಿಚಾರಣೆಗೆ ಹಾಜರಾಗಲಿದ್ದಾರೆ.

ಸಾರ್ವಜನಿಕರ ಮುಂದೆ ವಿಚಾರಣೆ
ಶಾಸಕರ ರಾಜೀನಾಮೆ ಕುರಿತಂತೆ ಸಾರ್ವಜನಿಕರಿಂದ ಅಹವಾಲು ಬಂದಿವೆ. ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರಿಂದ ದೂರು ಬಂದಿದೆ. ಹೀಗಾಗಿ, ಸಾರ್ವಜನಿಕ ವಿಚಾರಣೆ ಕರೆಯಲಾಗುವುದು ಎಂದರು.

ಎಚ್ ನಾಗೇಶ್ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್ ನಾಗೇಶ್ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ. ಶಾಸಕರ ಅನರ್ಹತೆ ಬಗ್ಗೆ ದೂರು ಬಂದಿದ್ದು, ಅರ್ಜಿ ವಿಚಾರಣೆ ಹಂತದಲ್ಲಿದೆ. ಸಂವಿಧಾನ ಬದ್ಧವಾಗಿ ನಾನು ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳುತ್ತಿದ್ದೇನೆ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸುತ್ತೇನೆ ಎಂದು ಹೇಳಿದರು.












Click it and Unblock the Notifications