ಕರ್ನಾಟಕದಿಂದ ಓಡಿದ್ದು 194 ಶ್ರಮಿಕ್ ರೈಲು; 2.8 ಲಕ್ಷ ಜನರ ಪ್ರಯಾಣ
ಬೆಂಗಳೂರು, ಜೂನ್ 03 : ನೈಋತ್ಯ ರೈಲ್ವೆಯು ಓಡಿಸಿದ ಶ್ರಮಿಕ್ ವಿಶೇಷ ರೈಲಿನಲ್ಲಿ ಕರ್ನಾಟಕದಿಂದ 2.8 ಲಕ್ಷ ಜನರು ಪ್ರಯಾಣ ಮಾಡಿದ್ದಾರೆ. ಇವರಲ್ಲಿ ಬಹುತೇಕರು ವಲಸೆ ಕಾರ್ಮಿಕರಾಗಿದ್ದಾರೆ.
Recommended Video
ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರ ರಾಜ್ಯಕ್ಕೆ ಶ್ರಮಿಕ್ ರೈಲಿನ ಮೂಲಕ ಕಳಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ. ಮೇ 31ರ ತನಕ ಶ್ರಮಿಕ್ ರೈಲು ಸಂಚಾರ ನಡೆಸಿದೆ.
"ವಲಸೆ ಕಾರ್ಮಿಕರು ಉಚಿತವಾಗಿ ರೈಲುಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಕಾರ್ಮಿಕರು ತೆರಳುವ ತವರು ರಾಜ್ಯವೇ ವೆಚ್ಚವನ್ನು ಭರಿಸಿದೆ" ಎಂದು ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ನೈಋತ್ಯ ರೈಲ್ವೆ ನಾಗಾಲ್ಯಾಂಡ್ಗೆ ರೈಲನ್ನು ಓಡಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾಗಾಲ್ಯಾಂಡ್ಗೆ ಹೋಗುವ ಪ್ರಯಾಣಿಕರು ಇದ್ದರು, ಮಂಗಳವಾರ ಅವರು ರೈಲಿನ ಮೂಲಕ ತೆರಳಿದ್ದಾರೆ.

ಎಷ್ಟು ರೈಲುಗಳ ಸಂಚಾರ?
ಮೇ 2ರಿಂದ ಜೂನ್ 2ರ ಸಂಜೆ 6 ಗಂಟೆಯ ತನಕ ಕರ್ನಾಟಕದಿಂದ 194 ಶ್ರಮಿಕ್ ವಿಶೇಷ ರೈಲುಗಳು ವಿವಿಧ ರಾಜ್ಯಗಳಿಗೆ ಸಂಚಾರ ನಡೆಸಿವೆ. 2.8 ಲಕ್ಷ ಜನರು ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಲಾಕ್ ಡೌನ್ ಪರಿಣಾಮ ರಾಜ್ಯದಲ್ಲಿ ಸಿಲುಕಿದ್ದ ಜನರು ರೈಲಿನ ಮೂಲಕ ತವರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ.

ಯಾವ ರಾಜ್ಯಗಳಿಗೆ ರೈಲು?
ಬಿಹಾರಕ್ಕೆ 65, ಉತ್ತರ ಪ್ರದೇಶಕ್ಕೆ 47, ಜಾರ್ಖಂಡ್ಗೆ 21, ಒಡಿಶಾ 11, ಪಶ್ಚಿಮ ಬಂಗಾಳ 18, ರಾಜಸ್ಥಾಮ 7, ಮಧ್ಯಪ್ರದೇಶ 5, ತ್ರಿಪುರ 4, ಉತ್ತರಾಖಂಡ್ 3, ಜಮ್ಮು ಮತ್ತು ಕಾಶ್ಮೀರಕ್ಕೆ 3, ಅಸ್ಸಾಂ 4, ಮಣಿಪುರ 2, ಹಿಮಚಲ ಪ್ರದೇಶ, ಛತ್ತೀಸ್ಗಢ, ಕೇರಳ ಮತ್ತು ವಿಜೋರಾಂಗೆ ತಲಾ 1 ರೈಲು ಸಂಚಾರ ನಡೆಸಿದೆ.

ಮೊದಲೇ ಹಣ ನೀಡಿದ ರಾಜ್ಯಗಳು
ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಅಸ್ಸಾಂ, ಉತ್ತರಾಖಂಡ್, ಮಣಿಪುರ, ನಾಗಲ್ಯಾಂಡ್, ತ್ರಿಪುರ, ಪಶ್ಚಿಮ ಬಂಗಾಳ ಸರ್ಕಾರಗಳು ವಲಸೆ ಕಾರ್ಮಿಕರ ಸಂಚಾರ ನಡೆಸುವ ಮೊದಲೇ ರೈಲು ಸಂಚಾರಕ್ಕೆ ತಗಲುವ ವೆಚ್ಚವನ್ನು ಕರ್ನಾಟಕಕ್ಕೆ ನೀಡಿದ್ದವು.

ಕರ್ನಾಟಕದಿಂದ ಉಚಿತ ಸಂಚಾರ
ಕರ್ನಾಟಕ ಸರ್ಕಾರ ಶ್ರಮಿಕ್ ರೈಲಿನ ಉಚಿತ ಸಂಚಾರ ಘೋಷಣೆ ಮಾಡುವ ಮೊದಲು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ಗೆ ತೆರಳುವ ಕಾರ್ಮಿಕರು ತಾವೇ ಸಂಚಾರದ ವೆಚ್ಚವನ್ನು ಭರಿಸಿದರು. ಶ್ರಮಿಕ್ ರೈಲಿನ ವೆಚ್ಚದಲ್ಲಿ ಶೇ 85ರಷ್ಟನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಉಳಿದಿದ್ದನ್ನು ರಾಜ್ಯಗಳು ನೀಡಬೇಕಿದೆ.

ಆಹಾರವನ್ನು ನೀಡಲಾಗಿದೆ
ರೈಲು ಕರ್ನಾಟಕದಿಂದ ಹೊರಡುವಾಗ ಕಾರ್ಮಿಕರಿಗೆ ಆಹಾರವನ್ನು ನೀಡಲಾಗಿದೆ. ಮಾರ್ಗ ಮಧ್ಯೆ ರೈಲ್ವೆ ವತಿಯಿಂದ ಆಹಾರ ನೀಡಲಾಗಿದೆ. ಹಲವು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಆಹಾರ ವಿತರಣೆ ಮಾಡಿವೆ.












Click it and Unblock the Notifications