ಕರ್ನಾಟಕ ಹೆಮ್ಮೆಯ ಹನುಮಂತಪ್ಪನಿಗೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆಯಿರಿ
ಬೆಂಗಳೂರು,ಫೆಬ್ರವರಿ,11: ಸಿಯಾಚಿನ್ ಪ್ರದೇಶದ 35 ಅಡಿ ಆಳದಲ್ಲಿ ಸಿಲುಕಿ ಬದುಕುಳಿದ ವೀರಯೋಧ ಹನುಮಂತಪ್ಪ ಕೊಪ್ಪದ ಆರು ದಿನಗಳ ಜೀವನ್ಮರಣದ ಹೋರಾಟ ನಡೆಸಿದ್ದರು. ಆದರೆ ದೈವ ಲಿಖಿತವೇ ಬೇರೆ ಇತ್ತು. ಅವರು ಫೆಬ್ರವರಿ 11ರಂದು ನವದೆಹಲಿಯ ಆರ್.ಆರ್ ಆಸ್ಪತ್ರೆಯಲ್ಲಿ 11.45ಕ್ಕೆ ಇಹಲೋಕ ತ್ಯಜಿಸಿದರು.
ಹನುಮಂತಪ್ಪ ಕೊಪ್ಪದ ಅವರು ಬಹಳ ಸ್ನೇಹ ಜೀವಿ. ಇವರು ಬೆಟದೂರು ಗ್ರಾಮದ ಬಹಳ ಅಚ್ಚುಮೆಚ್ಚಿನ ವ್ಯಕ್ತಿ. ಇವರ ಯಶೋಗಾಥೆ ಪಠ್ಯಪುಸ್ತಕಗಳಲ್ಲಿ ಅಳವಡಿಕೆಯಾಗಬೇಕೆಂಬ ಮಾತುಗಳು ಈಗಾಗಲೇ ಕೇಳಿ ಬರುತ್ತಿದ್ದು, ಅವರ ಪಾರ್ಥಿವ ಶರೀರ ರಾತ್ರಿ 9ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಅವರ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.[ಹುತಾತ್ಮ ಹನುಮಂತಪ್ಪ ನಿಧನಕ್ಕೆ ಭಾರತೀಯರಿಂದ ಕಂಬನಿಧಾರೆ]
ಮಹಾಛಲವಂತ ಯೋಧನ ಯಶೋಗಾಥೆ ಪಠ್ಯವಾಗಲಿ:
ಹನುಮಂತಪ್ಪ ಯಾವಾಗಲೂ ಸಾಧು ಸ್ವಭಾವದ ವ್ಯಕ್ತಿ. ಆದರೆ ಜೀವನದ ಯಾವುದೇ ಕಷ್ಟ-ನಷ್ಟಗಳಿಗೆ ದೃತಿಗೆಟ್ಟವರಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು, ದೇಶಕ್ಕೆ ಸೇವೆ ಸಲ್ಲಿಸಬೇಕೆಂಬ ತುಡಿತ ಚಿಕ್ಕ ವಯಸ್ಸಿನಲ್ಲೇ ಇವರಲ್ಲಿ ಮೊಳಕೆಯೊಡೆದಿತ್ತು.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]
ಗುರಿಯ ಬೆನ್ನತ್ತಿದ ಇವರು ಜೀವನದ ಪ್ರತಿಯೊಂದು ಸನ್ನಿವೇಶವನ್ನು ಸವಾಲಾಗಿ ಸ್ವೀಕರಿಸಿ ಸೇನೆ ಸೇರಲು ಮಾಡಿದ ಪ್ರಯತ್ನ ಮೂರು ಬಾರಿ ವಿಫಲವಾದರೂ ಛಲ ಬಿಡದೆ ಭಾರತೀಯ ಸೇನೆ ಎಂಬ ಗುರಿಯ ಶಿಖರ ಮುಟ್ಟಿದ ಮಹಾಛಲವಂತ. ಸೇನೆ ಸೇರಿದ ಮೇಲೂ ಯಾವುದೇ ಕಠಿಣ ಸವಾಲು ಎದುರಾದರೂ 'ನನ್ನ ಹತ್ತಿರ ಸಾಧ್ಯವಿಲ್ಲ' ಎಂಬ ಮಾತುಗಳು ಅವರಿಂದ ಕೇಳಿಬರುತ್ತಲೇ ಇರಲಿಲ್ಲ ಎಂದು ಸಹಪಾಠಿಗಳು ಹೇಳುತ್ತಾರೆ.[ಹನುಮಂತಪ್ಪನ ಸಾವಿಗೆ ಬಿಕ್ಕಿಬಿಕ್ಕಿ ಅಳುತ್ತಿರುವ ಬೆಟದೂರು]
ಹನುಮಂತಪ್ಪ ಕೊಪ್ಪದ ಕಿರುಪರಿಚಯ:
* ಹನುಮಂತಪ್ಪ ಕೊಪ್ಪದ ಅವರು ಧಾರಾವಾಡ ಜಿಲ್ಲೆಯ ಹುಬ್ಬಳ್ಳಿಯ ಕುಂದಗೋಳದ ಬೆಟದೂರಿನಲ್ಲಿ 1982 ರಲ್ಲಿ ಜನನ
* ತಂದೆ ರಾಮಪ್ಪ, ತಾಯಿ ಬಸಮ್ಮ.
* ರಾಮಪ್ಪ ಮತ್ತು ಬಸಮ್ಮ ದಂಪತಿಗಳ ಐವರು ಮಕ್ಕಳಲ್ಲಿ ಹನುಮಂತಪ್ಪ ನಾಲ್ಕನೆಯವರು.
* ಯೋಧ 2002ರಲ್ಲಿ, 20 ವರ್ಷ ಯುವಕನಾಗಿದ್ದಾಗ ಭಾರತೀಯ ಸೇನೆಗೆ ಸೇರಿದ್ದರು.
* ತಮಿಳುನಾಡು ಬಳಿಯ ಊಟಿಯಲ್ಲಿ ಎರಡು ವರ್ಷ ತರಬೇತಿ
* ಪಂಜಾಬಿನ ಭಟಿಂಡಾದಲ್ಲಿ 2 ವರ್ಷ ಸೇವೆ ಸಲ್ಲಿಸಿದ್ದರು.
* ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ 2008 ರಿಂದ 2010ರವರೆಗೆ ಮೂರು ವರ್ಷ ಸೇವೆ
* ಚಂಡೀಗಡದಲ್ಲಿ ಕೆಲವು ವರ್ಷ ಸೇವೆ. [ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ]
* ವಿವಿಧ ರೆಜಿಮೆಂಟ್ ಗಳಿಂದ ಗೌರವ ಸ್ವೀಕರಿಸಿದ್ದರು.
* 2012ರಲ್ಲಿ ಮಹಾದೇವಿ ಎಂಬುವವರನ್ನು ವಿವಾಹವಾಗಿದ್ದರು. ಇವರಿಗೆ 2 ವರ್ಷದ ನೇತ್ರಾ ಎಂಬ ಮಗಳಿದ್ದಾಳೆ
* ಮರಣ: ಫೆಬ್ರವರಿ 11, 2016 ದೆಹಲಿಯ ಆರ್. ಆರ್. ಆಸ್ಪತ್ರೆ.