ಹಾಲೀ ಈ 6 ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಇಲ್ಲ?
2024ರಲ್ಲಿ ನಡೆಯಬೇಕಾಗಿರುವ ಲೋಕಸಭಾ ಚುನಾವಣೆಗೆ ರಾಜ್ಯದ ಹಾಲೀ ಆರು ಸಂಸದರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ. ಆ ಕ್ಷೇತ್ರಗಳಿಗೆ ಪರ್ಯಾಯ ನಾಯಕರಾಗಿ ಕೆಲವು ಹೆಸರುಗಳನ್ನು ಕೂಡಾ ಬಿಜೆಪಿ ವರಿಷ್ಠರು ಪಟ್ಟಿ ಮಾಡಿಯಾಗಿದೆ ಎನ್ನುವ ಮಾತಿದೆ.
ಲೋಕಸಭಾ ಚುನಾವಣೆಗೂ ಮುನ್ನ ಹಲವು ರಾಜ್ಯಗಳ ಚುನಾವಣೆ ನಡೆಯಬೇಕಾಗಿರುವುದರಿಂದ, ಬಿಜೆಪಿ ಹೈಕಮಾಂಡ್ ಸದ್ಯದ ಮಟ್ಟಿಗೆ ಈ ವಿಚಾರದಲ್ಲಿ ತಲೆಕೆಡಿಸಿಕೊಂಡಿಲ್ಲ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಈ ವರ್ಷ ಮತ್ತು ಕರ್ನಾಟಕದಲ್ಲಿ ಮುಂದಿನ ವರ್ಷದ ಮೇ ತಿಂಗಳೊಳಗೆ ಚುನಾವಣೆ ನಡೆಯಬೇಕಿದೆ.
ಹಾಲೀ ಆರು ಸಂಸದರಿಗೆ ಟಿಕೆಟ್ ನೀಡದೇ ಇರಲು ಒಂದು ಬಿಜೆಪಿಯ 75+ ವಯಸ್ಸಿನ ಮಿತಿ ಕಾರಣವಾದರೆ, ಇನ್ನೊಂದು, ಆ ಸಂಸದರ ಕಾರ್ಯವೈಖರಿ, ಜನರು ಮತ್ತು ಸ್ಥಳೀಯ ಮುಖಂಡರ ಜೊತೆಗೆ ಒಡನಾಟ ಮಾಹಿತಿಯನ್ನು ಪಡೆದುಕೊಂಡು ವರಿಷ್ಠರು ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.
ಒಂದು ವೇಳೆ ಆ ಸಂಸದರು ಸ್ಪರ್ಧಿಸಿದರು ಕೂಡಾ ಅವರು ಗೆಲ್ಲುವ ಸಾಧ್ಯತೆಯೂ ಕಮ್ಮಿ ಎನ್ನುವ ಮಾಹಿತಿಯನ್ನೂ ಬಿಜೆಪಿಯ ಹೈಕಮಾಂಡ್ ತನ್ನದೇ ಆದ ಮೂಲಗಳಿಂದ ಮಾಹಿತಿಯನ್ನು ಪಡೆದುಕೊಂಡಿದೆ. ಟಿಕೆಟ್ ಸಿಗುವ ಸಾಧ್ಯತೆ ಕಮ್ಮಿಯಿರುವ ಆರು ಸಂಸದರು ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಹಾಲೀ ಸಂಸದ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
ಬೆಂಗಳೂರು ಉತ್ತರ ಕ್ಷೇತ್ರದ ಹಾಲೀ ಸಂಸದ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಕೆ.ಸಿ.ರಾಮಮೂರ್ತಿಯವರಿಗೆ ಟಿಕೆಟ್ ನೀಡದೇ ಚಿತ್ರನಟ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕೆ.ಸಿ.ರಾಮಮೂರ್ತಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. 2024ರ ಚುನಾವಣೆಯ ವೇಳೆ ಸದಾನಂದ ಗೌಡರಿಗೆ 71ವರ್ಷ ತುಂಬಿರುತ್ತದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಲೀ ಸಂಸದ ವಿ.ಶ್ರೀನಿವಾಸ ಪ್ರಸಾದ್
ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಲೀ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರಿಗೂ ಟಿಕೆಟ್ ಸಿಗುವ ಸಾಧ್ಯತೆ ಕಮ್ಮಿ. ಅನಾರೋಗ್ಯ, ಕ್ಷೇತ್ರದ ಮತದಾರರ ಜೊತೆಗೆ ಅಷ್ಟೇನೂ ಒಡನಾಟ ಇಲ್ಲದೇ ಇರುವುದರಿಂದ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇವರ ವಯಸ್ಸು ಮುಂಬರುವ ಚುನಾವಣೆಯ ಹೊತ್ತಿಗೆ 75 ದಾಟಿರುತ್ತದೆ.

ವಿಜಯಪುರ ಕ್ಷೇತ್ರದ ಹಾಲೀ ಸಂಸದ ರಮೇಶ್ ಜಿಗಜಿಣಗಿ
ವಿಜಯಪುರ ಕ್ಷೇತ್ರದ ಹಾಲೀ ಸಂಸದ ರಮೇಶ್ ಜಿಗಜಿಣಗಿಯವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ಚುನಾವಣೆಯ ಹೊತ್ತಿಗೆ ಇವರಿಗೆ 72 ವರ್ಷ ತುಂಬಿರುತ್ತದೆ. ಐದು ಬಾರಿ ಸಂಸದರಾಗಿರುವ ಇವರು, ಕೇಂದ್ರದ ಮಾಜಿ ಸಚಿವರು ಕೂಡಾ..

ತುಮಕೂರು ಕ್ಷೇತ್ರದ ಹಾಲೀ ಸಂಸದ ಜಿ.ಎಸ್.ಬಸವರಾಜು
ತುಮಕೂರು ಕ್ಷೇತ್ರದ ಹಾಲೀ ಸಂಸದ ಜಿ.ಎಸ್.ಬಸವರಾಜು ಅವರಿಗೆ ಕೂಡಾ ಟಿಕೆಟ್ ಕೈತಪ್ಪುವ ಸಾಧ್ಯತೆಯಿಲ್ಲದಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರನ್ನು ಬಸವರಾಜು ಸೋಲಿಸಿದ್ದರು. ಮುಂಬರುವ ಚುನಾವಣೆಯ ಹೊತ್ತಿಗೆ ಬಸವರಾಜು ಅವರಿಗೆ 83ವರ್ಷ ತುಂಬಿರುತ್ತದೆ.

ಬಾಗಲಕೋಟೆ ಕ್ಷೇತ್ರದ ಹಾಲೀ ಸಂಸದ ಪಿ.ಸಿ.ಗದ್ದಿಗೌಡರ್
ಬಾಗಲಕೋಟೆ ಕ್ಷೇತ್ರದ ಹಾಲೀ ಸಂಸದ ಪಿ.ಸಿ.ಗದ್ದಿಗೌಡರ್ ಅವರಿಗೆ ಬಿಜೆಪಿ ವರಿಷ್ಠರು ನೋ ಟಿಕೆಟ್ ಎಂದು ಹೇಳುವ ಸಾಧ್ಯತೆಯಿದೆ. ಗದ್ದಿಗೌಡರ್ ಅವರಿಗೆ ಮುಂಬರುವ ಚುನಾವಣೆಯ ಹೊತ್ತಿಗೆ 73ವರ್ಷ ತುಂಬಿರುತ್ತದೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲೀ ಸಂಸದ ಬಿ.ಎನ್.ಬಚ್ಚೇಗೌಡ
ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲೀ ಸಂಸದ ಬಿ.ಎನ್.ಬಚ್ಚೇಗೌಡ ಅವರಿಗೂ ಟಿಕೆಟ್ ಸಿಗುವ ಸಾಧ್ಯತೆ ಬಹುತೇಕ ಕಮ್ಮಿ. ಅವರ ಪುತ್ರ ಶರತ್, ಬಿಜೆಪಿ ತೊರೆದ ನಂತರ ಬಿಜೆಪಿಯ ಚಟುವಟಿಕೆಯಿಂದಲೂ ಬಚ್ಚೇಗೌಡ್ರು ದೂರ ಉಳಿದಿದ್ದಾರೆ. ಬಚ್ಚೇಗೌಡ್ರಿಗೆ ಮುಂಬರುವ ಚುನಾವಣೆಯ ಹೊತ್ತಿಗೆ 82 ವರ್ಷ ತುಂಬಿರುತ್ತದೆ.












Click it and Unblock the Notifications