ವಲಸೆ ಸಚಿವರನ್ನು ಕಾಡುತ್ತಿದೆಯಾ ಮುಂಬೈ ಫೋಬಿಯಾ? ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಬೆಂಗಳೂರು, ಮಾ. 07: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಬಿಡುಗಡೆ ಆಗುತ್ತಿದ್ದಂತೆಯೆ ಮುಂಬೈ ಫ್ರೆಂಡ್ಸ್ಗೆ ಭಯ ಶುರುವಾಗಿದೆ. ಹೀಗಾಗಿ ಆರು ಜನ ಸಚಿವರು ತಮ್ಮ ವಿರುದ್ಧ ಯಾವುದೇ ಸಿಡಿ, ದಾಖಲೆ ಅಥವಾ ಅವಹೇಳನಕಾರಿ ವಿಚಾರಗಳನ್ನು ಪ್ರಸಾರ ಮಾಡದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.
ಆರು ಸಚಿವರು ಕೋರ್ಟ್ ಮೊರೆ ಹೋಗಿರುವುದು ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯದ ಕುರಿತು ಪ್ರಶ್ನೆ ಏಳುವಂತೆ ಮಾಡಿದೆ. ಜೊತೆಗೆ ಈ ಎಲ್ಲ ಸಚಿವರು ಮೈತ್ರಿ ಸರ್ಕಾರದ ಪತನದ ಸಂದರ್ಭದಲ್ಲಿ ಮುಂಬೈವಾಸಿಗಳಾಗಿದ್ದರು ಹಾಗೂ ಅವರ 'ಬೇಕು-ಬೇಡ'ಗಳನ್ನು ಮುಂಬೈ ಬಿಜೆಪಿಯ ಯುವ ನಾಯಕರೊಬ್ಬರು ನೋಡಿಕೊಂಡಿದ್ದರು ಎಂಬುದು ಸಚಿವರ ಆತಂಕಕ್ಕೆ ಕಾರಣ ಎಂಬ ಮಾಹಿತಿ ಇದೆ.
ಇದೀಗ ಕೋರ್ಟ್ ಮೊರೆ ಹೋಗಿದ್ಯಾಕೆ ಎಂಬುದಕ್ಕೆ ಕೆಲವು ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ. ಸಚಿವರು ಕೊಟ್ಟಿರುವ ಸ್ಪಷ್ಟನೆ ಸಾಮಾಜಿಕ ಕಾರ್ಯಕರ್ತರಾದ ರಾಜಶೇಖರ್ ಮುಲಾಲಿ ಹಾಗೂ ದಿನೇಶ್ ಕಲ್ಲಹಳ್ಳಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆಯಂತಿದೆ ಎಂಬ ಆರೋಪವೂ ವ್ಯಕ್ತವಾಗಿದೆ.
ಹೀಗಾಗಿ ಮಂಬೈ ಫೋಬಿಯಾ ಆ ಸಚಿವರನ್ನು ಕಾಡುತ್ತಿದೆಯಾ ಎಂಬ ಚರ್ಚೆ ಇದೀಗ ಶುರುವಾಗಿದೆ. ಅಷ್ಟಕ್ಕೂ ಮುಂಬೈನಲ್ಲಿ ನಡೆದಿದ್ದಾದರೂ ಏನು? ಮುಂಬೈ ಫೋಬಿಯಾದಿಂದಲೇ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆಯೇ? ಎಂಬ ಚರ್ಚೆ ಶುರುವಾಗಿದೆ.
ಆರೂ ಸಚಿವರ ಮುಂಬೈ ಪ್ರವಾಸ-ಪ್ರಯಾಸ
ಮೈತ್ರಿ ಸರ್ಕಾರ ಪತನವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಾಗ ದೊಡ್ಡ ಹೈಡ್ರಾಮಾ ನಡೆದಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪಕ್ಷ ತೊರೆಯದಂತೆ 17 ಶಾಸಕರಲ್ಲಿಯೂ ಅಕ್ಷರಶಃ ಬೇಡಿಕೊಂಡಿದ್ದರು. ಮೇಲ್ನೋಟಕ್ಕೆ ಜೆಡಿಎಸ್-ಕಾಂಗ್ರೆಸ್ ನಾಯಕರ ಸಂಧಾನ ಸಭೆ ಸಫಲವಾದಂತೆ ಕಂಡು ಬರುತ್ತಿತ್ತು. ಆದರೆ ಒಬ್ಬೊಬ್ಬರಾಗಿ ಎಲ್ಲರೂ ಮುಂಬೈ ಸೇರಿದ್ದರು.
ಹೀಗೆ ಮುಂಬೈಗೆ ಹಾರಿದ್ದ ಸಚಿವರಿಗೆ ಮುಂಬೈ ಬಿಜೆಪಿ ಯುವ ನಾಯಕರೊಬ್ಬರು ವಾಸ್ತವ್ಯಕ್ಕೆ 'ಸಕಲ ವ್ಯವಸ್ಥೆ'ಗಳನ್ನು ಮಾಡಿದ್ದರು. ಹೀಗಾಗಿಯೇ ಆ ಸಚಿವರಿಗೆ ಇದೀಗ ಮುಂಬೈ ಫೋಬಿಯಾ ಕಾಡುತ್ತಿದೆ ಎಂಬ ಮಾಹಿತಿ ಇದೆ. ಆದರೆ ಅರ್ಜಿ ಸಲ್ಲಿಸಿರುವ ಸಚಿವರು ಅದನ್ನು ಅಲ್ಲಗಳೆದಿದ್ದಾರೆ.
ಮುನ್ನಚ್ಚರಿಕೆಯಿಂದ ಕೋರ್ಟ್ ಮೊರೆ
ಈ 6 ಸಚಿವರು ಒಟ್ಟು 68 ಸಂಸ್ಥೆಗಳ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ಅವುಗಳಲ್ಲಿ ಮಾಧ್ಯಮ ಸಂಸ್ಥೆಗಳೂ ಸೇರಿದಂತೆ ಫೇಸ್ಬುಕ್, ಟ್ವಿಟ್ಟರ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳು ಸೇರಿವೆ ಎಂಬುದು ಗಮನಿಸಬೇಕಾದ ಅಂಶ.
68 ಸಂಸ್ಥೆಗಳೊಂದಿಗೆ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಹಾಗೂ ದಿನೇಶ್ ಕಲ್ಲಹಳ್ಳಿ ಅವರ ಹೆಸರುಗಳಿವೆ. ಆದರೆ ರಾಜಶೇಖರ್ ಮುಲಾಲಿ ಅವರು ಕೊಟ್ಟಿದ್ದ ಇನ್ನಷ್ಟು ಸಿಡಿಗಳಿವೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ನಾವು ಕೋರ್ಟ್ಗೆ ಹೋಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ನಲ್ಲಿ ಇಂದು ಅರ್ಜಿ ವಿಚಾರಣೆ
ಆರು ಜನ ಸಚಿವರು ಸಲ್ಲಿಸಿರುವ ಅರ್ಜಿ ಇವತ್ತು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ವಿಚಾರಣೆ ಬಳಿಕ ಕೋರ್ಟ್ ಆದೇಶದಂತೆ ಸಚಿವರು ನಡೆದುಕೊಳ್ಳಲಿದ್ದಾರೆ. ಆದರೆ ಮಾಧ್ಯಮ ಸಂಸ್ಥೆಗಳೊಂದಿಗೆ ಫೇಸ್ಬುಕ್, ಯುಟ್ಯೂಬ್ ಹಾಗೂ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಸಾಲತಾಣಗಳನ್ನು ಪ್ರತಿವಾದಿ ಮಾಡಿರುವುದು ಕುತೂಹಲ ಮೂಡಿಸಿದೆ. ರಷ್ಯಾದಿಂದ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಅಪ್ಲೋಡ್ ಆಗಿತ್ತು. ಆ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗಿದೆ ಎಂದು ಮಾಹಿತಿಯಿದೆ. ಆದರೆ ಅದನ್ನು ಕೋರ್ಟ್ ಮೊರೆ ಹೋಗಿರುವ ಸಚಿವರು ನಿರಾಕರಿಸಿದ್ದಾರೆ.
Recommended Video
ಇಂದು ಇನ್ನಷ್ಟು ಸಚಿವರಿಂದ ಅರ್ಜಿ ಸಲ್ಲಿಕೆ
ನಾವು ಯಾವುದೇ ತಪ್ಪು ಮಾಡಿಲ್ಲ, ಆದರೆ ಸಾಕಷ್ಟು ರಾಜಕೀಯ ವಿರೋಧಿಗಳನ್ನು ಕಟ್ಟಿಕೊಂಡಿದ್ದೇವೆ. ಹೀಗಾಗಿ ನಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ. ಇವತ್ತು ಮತ್ತೆ 6 ಸಚಿವರು ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಹೀಗಾಗಿ ಸಚಿವರಾದ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಕೆ. ಗೋಪಾಲಯ್ಯ ಸೇರಿದಂತೆ ಮತ್ತೆ ಆರು ಸಚಿವರು ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ಎಸ್ಟಿಎಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ನಿನ್ನೆಯಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಗಂಡಾಂತರ ಕಾದಿದೆಯಾ ಎಂಬ ಸಂಶಯ ಮೂಡಿದೆ.