ಕೈಕೊಟ್ಟ ವೈಫೈ, ರಾಮನಗರ ರೇಷ್ಮೆಗೂಡು ಇ-ಹರಾಜಿಗೆ ವಿಘ್ನ
ರಾಮನಗರ, ಏಪ್ರಿಲ್ 05 : ರೇಷ್ಮೆಗೂಡು ಇ-ಹರಾಜು ಪ್ರಕ್ರಿಯೆ ರಾಮನಗರ ರೈತರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಆಗಾಗ್ಗೆ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ವೈಫೈ ನೆಟ್ವರ್ಕ್ ಕೈಕೊಡುತ್ತಿರುವ ಕಾರಣ ಅವ್ಯವಸ್ಥೆ ಉಂಟಾಗುತ್ತಿದ್ದು ಇದರಿಂದ ಬೇಸತ್ತ ಜನ ಬೀದಿಗಿಳಿಯುವ ಸ್ಥಿತಿ ತಲೆದೋರಿದೆ.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಕೆಟ್ಟು ನಿಂತಿರುವ ವೈಫೈ ಯಂತ್ರವನ್ನು ದುರಸ್ತಿ ಮಾಡಿಸದ ಕಾರಣ ಮಿಶ್ರತಳಿ(ಸಿಬಿ) ರೇಷ್ಮೆಗೂಡಿನ ವಿಭಾಗದಲ್ಲಿ ಇ-ಹರಾಜು ಪದ್ದತಿ ಕೂಡ ಸ್ಥಗಿತಗೊಂಡಿದೆ. ಹೀಗಾಗಿ ಮಾರುಕಟ್ಟೆ ಅಧಿಕಾರಿಗಳು ಬಹಿರಂಗವಾಗಿ ಹರಾಜು ಕೂಗುವ ಹಳೇ ಪದ್ದತಿಯನ್ನೆ ಕಳೆದೆರೆಡು ದಿನಗಳಿಂದ ಅಳವಡಿಸಿಕೊಂಡಿದ್ದಾರೆ. ನೆಟ್ವರ್ಕ್ ಸಮಸ್ಯೆಯಿಂದ ಇ-ಹರಾಜು ಪ್ರಕ್ರಿಯೆ ಸ್ಥಗಿತಗೊಂಡು ರೀಲರ್ಸ್ ಗಳು ಕೈಚೆಲ್ಲಿದ್ದಾರೆ. ಇದರಿಂದ ಹರಾಜು ಪ್ರಕ್ರಿಯೆ ವಿಳಂಬವಾಗುತ್ತಿದೆ. [ಕೆಮಿಕಲ್ ರಹಿತ ರೇಷ್ಮೆ ಸೀರೆ ಸಿಗುತ್ತದೆ, ಕೊಳ್ಳಿರಿ]
ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ವೈಫೈ ಜಾಮ್ ಆಗುತ್ತಿದೆ, ಉತ್ತಮ ಸಾಮರ್ಥ್ಯದ ಯಂತ್ರವನ್ನು ಅಳವಡಿಸದ ಕಾರಣ ಆಗಾಗ್ಗೆ ಇ-ಹರಾಜು ವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂದು ರೀಲರ್ಗಳು ಅತ್ತ ಕೋಪಗೊಂಡಿದ್ದರೆ, ಇತ್ತ ರೈತರು ವ್ಯವಸ್ಥೆ ವಿರುದ್ಧ ಸಿಡಿದೆದ್ದಿದ್ದಾರೆ. ಒಟ್ಟಾರೆ ರಾಮನಗರದ ರೇಷ್ಮೆಗೂಡು ಇ-ಹರಾಜು ಆತಂಕವನ್ನು ಸೃಷ್ಟಿ ಮಾಡಿದೆ. [ಚಪ್ ಚಪ್ಲಿಯಲ್ಲಿ ಬಡಿದಾಡಿಕೊಂಡ ಪುರಸಭಾ ಸದಸ್ಯರು]
ಹೀಗೇಕೆ ಆಗುತ್ತಿದೆ ಎಂಬುದಕ್ಕೆ ಮಾರುಕಟ್ಟೆಯ ಉಪನಿರ್ದೇಶಕ ವಿ.ಎಂ.ಶ್ರೀನಿವಾಸಲು ಅವರು ನೀಡುವ ಕಾರಣ ಏನೆಂದರೆ, ಇ-ಹರಾಜಿನಲ್ಲಿ ಪಾಲ್ಗೊಳ್ಳಲು ರೀಲರ್ಗಳಿಗೆ ದಿನನಿತ್ಯ ಪಾಸ್ವರ್ಡ್ ಕೊಡಲಾಗುತ್ತಿದೆ. ಇದರ ಪ್ರಕಾರ, ಒಬ್ಬ ರೀಲರ್ ತಾನು ಮಾತ್ರ ಆ ಪಾಸ್ವರ್ಡ್ ಬಳಸಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಆದರೆ ತಂತ್ರಜ್ಞಾನದಲ್ಲಿನ ಲೋಪವನ್ನು ಬಳಸಿಕೊಂಡು ಕೆಲವು ರೀಲರ್ಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾಲ್ಕೈದು ಮೊಬೈಲ್ಗಳಿಂದ ಒಂದೇ ಪಾಸ್ವರ್ಡ್ ಬಳಸಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದರಿಂದ ಇ-ಹರಾಜ್ಯ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗಿ ಪದೇ ಪದೇ ಸರ್ವರ್ ಕೈಕೊಡುತ್ತಿದೆ.
ಇದನ್ನು ತಪ್ಪಿಸುವ ಸಲುವಾಗಿ ರೀಲರ್ಗಳಿಂದ ಅಧಿಕೃತ ಮೊಬೈಲ್ ನಂಬರ್ ಸಂಗ್ರಹಿಸಿ ಪಾಸ್ವರ್ಡ್ ಸದರಿ ಮೊಬೈಲ್ ಸಂಖ್ಯೆಯ ಮೊಬೈಲ್ನಲ್ಲಿ ಮಾತ್ರ ಕೆಲಸ ಮಾಡುವಂತೆ ಮಾಡುವುದಲ್ಲದೆ, ಡಿವೈಸ್ ರಿಜಿಸ್ಟ್ರೇಷನ್ ಪ್ರಕ್ರಿಯೆನ್ನು ಅಳವಡಿಸಿಕೊಳ್ಳುತ್ತಿದ್ದು, ಇನ್ನೊಂದು ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಆಶಾಭಾವ ಹೊಂದಿದ್ದಾರೆ. ಆದರೆ ಅಲ್ಲಿ ತನಕ ರೈತರು ಸುಮ್ಮನಿರುತ್ತಾರಾ? [ಮೂಢನಂಬಿಕೆ ಚಕ್ರಸುಳಿಯಲ್ಲಿ ಕಳ್ಳಿಪಾಳ್ಯ ಗ್ರಾಮಸ್ಥರು]